ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆ ಬದಿ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರ ಬೀಸಿ ಮೊಬೈಲ್‌ ಕಸಿಯಲು ಯತ್ನಿಸಿದ ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಬೆಂಗಳೂರು (ಸೆ.30): ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆ ಬದಿ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರ ಬೀಸಿ ಮೊಬೈಲ್‌ ಕಸಿಯಲು ಯತ್ನಿಸಿದ ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕುಂಬೇನ ಅಗ್ರಹಾರ ನಿವಾಸಿ ಅಭಿಲಾಷ್‌ ಮಟ್ಲಪೂಡಿ ನೀಡಿದ ದೂರಿನ ಮೇರೆಗೆ ರಾಜೇಶ್‌ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ 20ರಂದು ಸಂಜೆ 5.30ರ ಸುಮಾರಿಗೆ ದೂರುದಾರ ಅಭಿಲಾಷ್‌ ಕಸ್ತೂರಿ ನಗರದ ಕಾ​ರ್‍ಸ್ 360 ಎಂಬ ಸೆಕೆಂಡ್‌ ಹ್ಯಾಂಡ್‌ ಕಾರ್‌ ಶೋ ರೂಮ್‌ಗೆ ತೆರಳಿದ್ದರು. ಈ ವೇಳೆ ಶೋ ರೂಮ್‌ನ ಹೊರಗೆ ರಸ್ತೆಬದಿ ಫೋನ್‌ನಲ್ಲಿ ಮಾತನಾಡುವಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಹಿಂಬದಿ ಕುಳಿತಿದ್ದ ವ್ಯಕ್ತಿ ಮೊಬೈಲ್‌ ಕಸಿಯುವ ಸಲುವಾಗಿ ಏಕಾಏಕಿ ಮಾರಕಾಸ್ತ್ರ ತೆಗೆದು ಅಭಿಲಾಷ್‌ ಕಡೆಗೆ ಬೀಸುತ್ತಾನೆ. ಈ ವೇಳೆ ಕೂದಲೆಳೆ ಅಂತರದಲ್ಲಿ ಅಭಿಲಾಷ್‌ ಅಪಾಯದಿಂದ ಪಾರಾಗುತ್ತಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗುತ್ತಾರೆ. ಈ ಘಟನೆ ಬಳಿಕ ಅಭಿಲಾಷ್‌ ಟ್ವಿಟರ್‌ನಲ್ಲಿ ನಗರ ಪೊಲೀಸ್‌ ಆಯುಕ್ತರಿಗೆ ನಡೆದ ಘಟನೆ ವಿವರಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದರು.

Bengaluru: ಪತಿ, ಮೊದಲ ಪತ್ನಿಯಿಂದ ಹಲ್ಲೆ; ಗೃಹಿಣಿ ನೇಣಿಗೆ ಶರಣು

ವಿಡಿಯೋದಲ್ಲಿ ಸುಳಿವು: ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ವ್ಯಕ್ತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಮೊಬೈಲ್‌ ಕಸಿಯಲು ವಿಫಲ ಯತ್ನ ನಡೆಸುವ ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಗುರುವಾರ ಈ ವಿಡಿಯೋ ನೋಡಿರುವ ಅಭಿಲಾಷ್‌, ಆಗಸ್ಟ್‌ 20ರಂದು ಇದೇ ದುಷ್ಕರ್ಮಿಗಳು ತಮ್ಮ ಮೊಬೈಲ್‌ ಕಸಿಯಲು ಯತ್ನಿಸಿದ್ದರು. ಮಾರಕಾಸ್ತ್ರ ಬೀಸಿದ ವ್ಯಕ್ತಿ ರಾಜೇಶ್‌ ಹೆಸರಿನ ವ್ಯಕ್ತಿ ಎಂದು ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂಟಿಯಾಗಿ ಓಡಾಡುವವರ ಸುಲಿಗೆ: ರಸ್ತೆಯಲ್ಲಿ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ, ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೀಲಸಂದ್ರದ ಫರ್ದಿನ್‌(19), ಸೈಯದ್‌ ಅಬೂಬಕರ್‌ ಸಿದ್ದಿಕ್‌(19) ಹಾಗೂ ಅಪ್ರಾಪ್ತ ಬಾಲಕ ಬಂಧಿತರು. ಆರೋಪಿಗಳಿಂದ ಮೂರು ಮೊಬೈಲ್‌ ಫೋನ್‌, ವಾಚು, ಪರ್ಸ್‌ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. 

ಬೆಂಗಳೂರು ಠಾಣೆಯಲ್ಲಿ ವ್ಯಕ್ತಿಗೆ ಥರ್ಡ್‌ ಡಿಗ್ರಿ ಟಾರ್ಚರ್‌, ಖಾಸಗಿ ಅಂಗಕ್ಕೆ ವಿದ್ಯುತ್‌ ಶಾಕ್‌ ನೀಡಿದ ಆರೋಪ

ಆನೇಪಾಳ್ಯದ ಕಾಪಸ್‌ಸನ್‌ ಶೌಟೆ ಎಂಬುವವರು ಸೆ.3ರಂದು ಆನೇಪಾಳ್ಯದ 7ನೇ ಕ್ರಾಸ್‌ನಲ್ಲಿರುವ ಮನೆಗೆ ನಡೆದು ಹೋಗುವಾಗ ಹಿಂದಿನಿಂದ ಬಂದ ಮೂವರು ಅಪರಿಚಿತರು ಚಾಕುವಿನಿಂದ ಹಲ್ಲೆ ನಡೆಸಿ ಪರ್ಸ್‌, ಮೊಬೈಲ್‌, ಇಯರ್‌ ಪಾಡ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ರಾತ್ರಿ ವೇಳೆ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿ ಸುಲಿಗೆ ಮಾಡುತಿದ್ದರು. ಇವರ ಬಂಧನದಿಂದ ಅಶೋಕನಗರ, ಸಂಪಗಿರಾಮನಗರ ಹಾಗೂ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಸುಲಿಗೆ ಪ್ರಕರಣ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.