ಡ್ರಗ್ಸ್ ಮಾಫಿಯಾ: ರೌಡಿ ವಿರುದ್ಧ NDPS ಕಾಯ್ದೆ ಪ್ರಯೋಗ
ಈ ಕಾಯ್ದೆ ಬಳಸಿ ಮೊದಲ ಬಾರಿ ರೌಡಿಯೊಬ್ಬನ ಸೆರೆ| ಗೂಂಡಾ ಕಾಯ್ದೆ ಮಾದರಿಯ ಕಾಯ್ದೆ ಇದಾಗಿದ್ದು, ಒಂದು ವರ್ಷಗಳ ಪೆಡ್ಲರ್ಗೆ ಜಾಮೀನು ಸಿಗುವುದಿಲ್ಲ| ಬಂಧಿತನ ಮೇಲೆ 6 ಪ್ರಕರಣಗಳು ದಾಖಲು|
ಬೆಂಗಳೂರು(ಅ.07): ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕ್ರಮಗಳನ್ನು ಮತ್ತಷ್ಟುಬಿಗಿಗೊಳಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ರೌಡಿಯೊಬ್ಬನ ವಿರುದ್ಧ ಅಕ್ರಮ ಮಾದಕ ವಸ್ತು ಸಾಗಾಣಿಕೆ ತಡೆ ಕಾಯ್ದೆ (ಪಿಐಟಿ ಎನ್ಡಿಪಿಎಸ್ ಕಾಯ್ದೆ-1988) ಪ್ರಯೋಗಿಸಿದ್ದಾರೆ.
ನಗರದಲ್ಲಿ ರೌಡಿಯೊಬ್ಬನ ಮೊದಲ ಬಾರಿಗೆ ಪಿಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಹಿಂದೆ ನೈಜೀರಿಯಾ ಪೆಡ್ಲರ್ನನ್ನು ಇದೇ ಕಾಯ್ದೆಯಡಿ ಬಂಧಿಸಿ ಸಿಸಿಬಿ ಪೊಲೀಸರು ಜೈಲಿಗೆ ಅಟ್ಟಿದ್ದರು. ಈ ಗೂಂಡಾ ಕಾಯ್ದೆ ಮಾದರಿಯ ಕಾಯ್ದೆ ಇದಾಗಿದ್ದು, ಒಂದು ವರ್ಷಗಳ ಪೆಡ್ಲರ್ಗೆ ಜಾಮೀನು ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಡ್ರಗ್ ಕೇಸ್ : ಹೀರೋಗಳ ಮೇಲೆ ಯಾಕೆ ತನಿಖೆ ಆಗುತ್ತಿಲ್ಲ?'
ಪಿಳ್ಳಣ್ಣ ಗಾರ್ಡನ್ ನಿವಾಸಿ ಸೈಯದ್ ನಾಜೀಮ್ ಬಂಧಿತನಾಗಿದ್ದು, 2009ರಿಂದಲೂ ಗಾಂಜಾ ಮಾರಾಟದಲ್ಲಿ ಆತ ನಿರತನಾಗಿದ್ದ. ಈ ಸಂಬಂಧ ಆತನ ಮೇಲೆ 6 ಪ್ರಕರಣಗಳು ದಾಖಲಾಗಿವೆ. ಗಾಂಜಾ ಕೃತ್ಯದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಆರೋಪಿ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಗಾಂಜಾ ಮಾರಾಟ ಚಟುವಟಿಕೆಯಲ್ಲಿ ಮುಂದುವರೆದಿದ್ದ. ಈ ಕೃತ್ಯಗಳ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ರೌಡಿಪಟ್ಟಿ ರೆಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿಗೆ ಸೈಯದ್ ನಾಜೀಮ್ ವಿರುದ್ಧ ಮಾದಕ ವಸ್ತು ಸಾಗಾಣಿಕೆ ನಿಯಂತ್ರಣ ಕಾಯ್ದೆ (ಪಿಐಟಿ)ಯಡಿ ಪ್ರಕರಣ ದಾಖಲಿಸಲು ಅನುಮತಿ ಕೋರಿ ಆಯುಕ್ತರಿಗೆ ಕೆ.ಜಿ.ಹಳ್ಳಿ ಪೊಲೀಸರು ವರದಿ ಸಲ್ಲಿಸಿದ್ದರು. ಈ ವರದಿಗೆ ಮಾನ್ಯ ಮಾಡಿದ ಆಯುಕ್ತ ಕಮಲ್ ಪಂತ್ ಅವರು, ಆರೋಪಿ ವಿರುದ್ಧ ಪಿಐಟಿ ಕಾಯ್ದೆ ಪ್ರಯೋಗಕ್ಕೆ ಅಸ್ತು ಎಂದಿದ್ದಾರೆ.