ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದಕ್ಕೆ ಮನನೊಂದು ಪೋಷಕರು ಹಾಗೂ ಸಹೋದರ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. 

ಚಿಕ್ಕಬಳ್ಳಾಪುರ: ವಿವಾಹ ನಿಶ್ಚಯವಾಗಿದ್ದ ಯುವತಿ ಅದೇ ಗ್ರಾಮದ ಅನ್ಯ ಜಾತೀಯ ಯುವಕನೊಂದಿಗೆ ಪರಾರಿಯಾದ ಹಿನ್ನೆಲೆ ಮರ್ಯಾದೆಗೆ ಅಂಜಿ ,ಮನನೊಂದು ಪೋಷಕರು ಹಾಗೂ ಸಹೋದರ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ಪ್ರಿಯಕರನೊಂದಿಗೆ ಓಡಿ ಹೋದ ಅಪ್ರಾಪ್ತೆ: ಕೆರೆಗೆ ಹಾರಿ ಜೀವಬಿಟ್ಟ ತಂದೆ

ಶಿಡ್ಲಘಟ್ಟ ತಾಲೂಕಿನ (Shidlaghatta taluk) ಹಂಡಿಗನಾಳ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಮರ್ಯಾದೆಗೆ ಅಂಜಿ ಪೋಷಕರು ಹಾಗೂ ಸಹೋದರ ಸಾಮೂಹಿಕವಾಗಿ ಸಾವಿಗೆ ಶರಣಾಗಿದ್ದಾರೆ. ತಂದೆ 63 ವರ್ಷದ ಶ್ರೀರಾಮಪ್ಪ (Sriramappa), ತಾಯಿ 60 ವರ್ಷದ ಸರೋಜಮ್ಮ(Sarojamma) ಹಾಗೂ 24 ವರ್ಷದ ಸಹೋದರ ಮನೋಜ್ ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿದ್ದ ಯಾವುದೋ ಮಾತ್ರೆಯನ್ನು ಸೇವಿಸಿ ಎಲ್ಲರೂ ಜೊತೆಯಾಗಿ ಇಹಲೋಕ ತ್ಯಜಿಸಿದ್ದಾರೆ. 

ಗೆಳತಿಗೆ ಗುಂಡಿಕ್ಕಿ ಚಲಿಸುತ್ತಿದ್ದ ವಾಹನದ ಕೆಳಗೆ ಹಾರಿದ ಭಗ್ನಪ್ರೇಮಿ: ಇಬ್ಬರೂ ಸಾವು

ಶ್ರೀರಾಮಪ್ಪ (Sriramappa) ಹಾಗೂ ಸರೋಜಮ್ಮ (Sarojamma) ದಂಪತಿಯ ಪುತ್ರಿ ಅರ್ಚನಾ (Archana) ಕೆಲ ದಿನಗಳ ಹಿಂದೆ ಅನ್ಯ ಜಾತಿಯ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಇದರಿಂದ ಮನನೊಂದು 
ತಂದೆ, ತಾಯಿ ಹಾಗೂ ಸಹೋದರ ಈ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಡೆತ್‌ನೋಟ್ ಬರೆದಿಟ್ಟು ಇಡೀ ಕುಟುಂಬವೇ ಸಾವಿನ ಮನೆ ಸೇರಿದೆ. 

ಎಂಬಿಎ ಓದಿದ್ದ ಅರ್ಚನಾ ಅದೇ ಗ್ರಾಮದ ಡ್ರೈವರ್ ಕೆಲಸ ಮಾಡಿಕೊಂಡಿದ್ದ ನಾರಾಯಣಸ್ವಾಮಿಯೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಾಡುತಿದ್ದಳು. ಆಕೆಗೆ ಹಲವು ಬಾರಿ ಬುದ್ದಿ ಹೇಳಿದ್ರು ಕೇಳಿರಲಿಲ್ಲ. ಈ ಮಧ್ಯೆ ಆತ್ಮಹತ್ಯೆಗೂ ಮುನ್ನ ಅರ್ಚನಾ ನಂಬರ್‌ಗೆ ಸಹೋದರ ಮನೋಜ್ ಮೇಸೆಜ್ ಮಾಡಿದ್ದ. ಮನೆಗೆ ಬಾ ಇಲ್ಲ ಅಂದ್ರೆ ನಾವೆಲ್ಲ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸಂದೇಶ ಕಳುಹಿಸಿದ್ದ. ಆದ್ರೆ ಅರ್ಚನಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮನೆಯಲ್ಲೇ ಇದ್ದ ಕಾಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ನಮ್ಮ ಸಾವಿಗೆ ಅರ್ಚನಾ ಕಾರಣ, ಅನ್ಯಜಾತಿಯ ಹುಡುಗನ ಜೊತೆ ಪರಾರಿಯಾಗಿ ಜನರಲ್ಲಿ ನಮಗೆ ಮರ್ಯಾದೆ ತೆಗೆದಿದ್ದಾಳೆಂದು ತಂದೆ ಶ್ರೀರಾಮಪ್ಪ ಡೆತ್ ಬರೆದು ಎಲ್ಲರೂ ಸಾವಿನ ದಾರಿ ಹಿಡಿದಿದ್ದಾರೆ.

ಗ್ರಾಮದಲ್ಲಿ ಸೂತಕದ ಛಾಯೆ
ವಿಜಯದಶಮಿ ಹಬ್ಬದಂದು ಹಂಡಿಗನಾಳ ಗ್ರಾಮದಲ್ಲಿ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಯಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಇಡೀ ಗ್ರಾಮದ ಜನ ಈ ‌ಕುಟುಂಬದ ಆತ್ಮಹತ್ಯೆ ದುರಂತಕ್ಕೆ ಕಂಬನಿ‌ ಮಿಡಿದಿದ್ದಾರೆ. 

ಸ್ಥಳಕ್ಕೆ ಚಿಂತಾಮಣಿ ವಿಭಾಗ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಹಂಡಿಗನಾಳ ಗ್ರಾಮದ ಅರ್ಚನಾ ಅನ್ನೊ ಯುವತಿ ಕಾಣೆಯಾಗಿರುವ ಬಗ್ಗೆ ದೂರು ಬಂದಿತ್ತು. ಸಿಡಿಆರ್ ಪಡೆದು ತನಿಖೆ ನಡೆಸಲು ಸನ್ನದ್ದವಾಗಿದ್ದೆವು. ಇಂದು ಆಕೆಯ ತಂದೆ ಶ್ರೀರಾಮಪ್ಪ, ಸರೋಜಮ್ಮ, ಅವರ ಮಗ ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮೋನಿಯಂ ಪಾಸ್ಪೇಟ್ ಯುಕ್ತ ಕಾಳು ಮಾತ್ರೆ ಸೇವಿಸಿದ್ದಾರೆ. ಗ್ರಾಮದ ಮನೆಯಲ್ಲೆ ತಂದೆ ತಾಯಿ ಮಗ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಅರ್ಚನಾ ಗ್ರಾಮದ ಅನ್ಯ ಜಾತಿಯ ನಾರಾಯಣಸ್ವಾಮಿ ಜೊತೆ ಹೋಗಿರುವ ಬಗ್ಗೆ ಶಂಕೆ ಇದ್ದು, ತನಿಖೆ ನಡೆಸುವುದಾಗಿ ಹೇಳಿದರು.