ಕನಕಪುರದ ಅಂಗನವಾಡಿಯಲ್ಲಿ ಮಗು ಹಠ ಮಾಡಿದ್ದಕ್ಕೆ ಸಹಾಯಕಿಯೊಬ್ಬರು ಕೈ ಮೇಲೆ ಬರೆ ಹಾಕಿ, ಡೈಪರ್‌ಗೆ ಕಾರದಪುಡಿ ಹಾಕಿದ್ದಾರೆ. ಪೋಷಕರು ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

 ಕನಕಪುರ(ರಾಮನಗರ) (ಮಾ.21): ಅಂಗನವಾಡಿಯಲ್ಲಿ 2.5 ವರ್ಷದ ಮಗು ಹಠ ಮಾಡುತ್ತಿತ್ತು ಎಂದು ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈ ಮೇಲೆ ಬರೆಹಾಕಿ, ಡೈಪರ್‌ಗೆ ಕಾರದಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ಮಂಗಳವಾರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗ್ರಾಮದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಗ್ರಾಮದ ದೀಕ್ಷಿತ್ (2.5) ಸಂತ್ರಸ್ತ ಬಾಲಕ. ಮಂಗಳವಾರ ಮಧ್ಯಾಹ್ನ ಮಗುವಿನ ಪೋಷಕರಾದ ರಮೇಶ್ ನಾಯಕ್, ಪತ್ನಿ ಚೈತ್ರಾಬಾಯಿ ತಮ್ಮ ಮಗುವನ್ನು ಕರೆದುಕೊಂಡು ಬರಲು ಅಂಗನವಾಡಿಗೆ ತೆರಳಿದ್ದಾರೆ. ಆಗ ಬಾಲಕ ಅಳುತ್ತಿರುವುದನ್ನು ಗಮನಿಸಿದ್ದಾರೆ. ಆಗ ಏನಾಯ್ತು ಎಂದು ವಿಚಾರಿಸಿದಾಗ, ಮಗು ಹಠ ಮಾಡುತ್ತಿದ್ದ ಕಾರಣ ಅಂಗನವಾಡಿ ಸಹಾಯಕಿ ಚಂದ್ರಮ್ಮ ಮಗುವಿನ ಎಡ ಕೈ ಮೇಲೆ ಬರೆ ಹಾಕಿ ಡೈಪರ್ ಒಳಗೆ ಕಾರದಪುಡಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಪೋಷಕರು ಸಿಡಿಪಿಒ ತಾಲೂಕು ಅಧಿಕಾರಿ ನಾರಾಯಣ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಂಗನವಾಡಿ ಸಹಾಯಕಿಯ ವಿಚಾರಣೆ ನಡೆಸಿ, ಮೇಲಧಿಕಾರಿಗಳಿಗೆ ಪತ್ರ ಬರೆದು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಅಂಗನವಾಡಿ ಸಹಾಯಕಿ ಚಂದ್ರಮ್ಮ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಂದೆ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.