ಉತ್ತರ ಪ್ರದೇಶದಲ್ಲಿ ಅಪರಾಧ ನಡೆದಾಗಲೆಲ್ಲ ಬಿಜೆಪಿಯವರ ಮನೆಯನ್ನು ಪರಿಶೀಲಿಸಿ ಎಂದು ಸಮಾಜವಾದಿ ಪಕ್ಷ ವಾಗ್ದಾಳಿ ನಡೆಸಿದೆ. ಅಪಹರಣವಾಗಿರುವ ಮಗುವೊಂದು ಬಿಜೆಪಿ ಕಾರ್ಪೊರೇಟರ್‌ ಮನೆಯಲ್ಲಿ ಸಿಕ್ಕಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಿಂದ 7 ತಿಂಗಳ ಮಗುವನ್ನು ಅಪಹರಣದ ನಂತರ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಆ ಮಗು ಪತ್ತೆಯಾದ ಘಟನೆಯ ಕುರಿತು ಸಮಾಜವಾದಿ ಪಕ್ಷ (ಎಸ್‌ಪಿ) ಮಂಗಳವಾರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮೇಲೆ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕರು ಇತರ ಅಪರಾಧಗಳಲ್ಲಿ ಭಾಗಿಯಾಗಿ ಈಗ ಈ ಮಟ್ಟಕ್ಕೆ ಇಳಿದಿದ್ದಾರೆ ಮತ್ತು ಈ ಹಿನ್ನೆಲೆ ಯಾವುದೇ ಪ್ರದೇಶದಲ್ಲಿ ಅಪರಾಧ ನಡೆದಾಗ ಪೊಲೀಸರು ಮೊದಲು ಬಿಜೆಪಿ ಮುಖಂಡರ ಮನೆಯನ್ನು ಪರಿಶೀಲಿಸಬೇಕು ಎಂದು ಸಮಾಜವಾದಿ ಪಕ್ಷ ಟೀಕೆ ಮಾಡಿದೆ.

Add Asianetnews Kannada as a Preferred SourcegooglePreferred

ಈ ಘಟನೆಯ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಎಸ್‌ಪಿ ವಕ್ತಾರ ಸುನೀಲ್ ಸಿಂಗ್ ಸಜನ್, “ಮಗು ಕದ್ದಿರುವುದು ಮತ್ತು ಕದ್ದ ಮಗು ಬಿಜೆಪಿ ನಾಯಕನ ಮನೆಯಲ್ಲಿ ಪತ್ತೆಯಾಗಿರುವುದು - ಇದಕ್ಕಿಂತ ದುರಂತ ಮತ್ತೊಂದಿಲ್ಲ. ಈಗ ಬಿಜೆಪಿ ನಾಯಕರಿಗೆ ಕೆಲಸವಿಲ್ಲ. ಈ ಜನರು ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ, ಭ್ರಷ್ಟಾಚಾರ ಮಾಡುತ್ತಾರೆ, ಪೊಲೀಸ್ ಠಾಣೆಗಳಲ್ಲಿ ದಲ್ಲಾಳಿ ಮಾಡುತ್ತಾರೆ, ತಾಲೂಕುಗಳಲ್ಲಿ ದಲ್ಲಾಳಿ ಮಾಡುತ್ತಾರೆ ಮತ್ತು ಈಗ ಮಕ್ಕಳನ್ನೂ ಕದಿಯುತ್ತಾರೆ’’ ಎಂದು ಆರೋಪಿಸಿದ್ದಾರೆ. ನಿಮ್ಮ ಪ್ರದೇಶದಲ್ಲಿ ಯಾವುದೇ ಘಟನೆ ನಡೆದರೆ, ಮೊದಲು ಬಿಜೆಪಿ ನಾಯಕರ ಮನೆ ಮೇಲೆ ರೇಡ್‌ ಮಾಡಿ, ಎಲ್ಲಾ ಕ್ರಿಮಿನಲ್‌ಗಳು ಅಲ್ಲೇ ಪತ್ತೆಯಾಗುತ್ತಾರೆ ಎಂದು ಉತ್ತರ ಪ್ರದೇಶ ಪೊಲೀಸರಿಗೆ ವಿನಂತಿಸುತ್ತೇವೆ ಎಂದೂ ಸಮಾಜವಾದಿ ಪಕ್ಷದ ನಾಯಕ ಹೇಳಿದರು.

2024ರ ಚುನಾವಣೆಗೆ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಸೂಚಿಸಿದ ಅಖಿಲೇಶ್, ರಾಹುಲ್‌ಗಿಲ್ಲ ಸ್ಥಾನ!

ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ತಂದೆ-ತಾಯಿಯ ಪಕ್ಕದಿಂದ ಅಪಹರಿಸಿದ 7 ತಿಂಗಳ ಮಗು ಫಿರೋಜಾಬಾದ್‌ನ ಬಿಜೆಪಿ ಕಾರ್ಪೊರೇಟರ್‌ನ ಮನೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್, ವಿನಿತಾ ಅಗರ್ವಾಲ್ ಮತ್ತು ಅವರ ಪತಿ ಕೃಷ್ಣ ಮುರಾರಿ ಅಗರ್ವಾಲ್ ಅವರಿಗೆ "ಗಂಡು ಮಗು ಬೇಕು" ಎಂದು ಇಬ್ಬರು ವೈದ್ಯರಿಂದ 1.8 ಲಕ್ಷ ರೂ.ಗೆ ಶಿಶುವನ್ನು ಖರೀದಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಗಸ್ಟ್ 24 ರ ಮುಂಜಾನೆ ಮಥುರಾ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 9 ರಿಂದ ಶಿಶುವನ್ನು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮಥುರಾ ಸ್ಟೇಷನ್ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಕುಟುಂಬದ ಹಿಂದೆ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಎಚ್ಚರಿಕೆಯಿಂದ ಸುತ್ತಲೂ ನೋಡಿದ ನಂತರ, ಅವನು ಗುಟ್ಟಾಗಿ ಸಮೀಪಿಸುತ್ತಾನೆ, ಮಗುವನ್ನು ಎತ್ತಿಕೊಂಡು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿರುವ ರೈಲಿನ ದಿಕ್ಕಿನಲ್ಲಿ ಓಡುತ್ತಾನೆ. ಈ ಪ್ರಕರಣ ನಡೆದ ಬಳಿಕ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉಪಚುನಾವಣೆ, ಬಿಜೆಪಿ ಜಯಭೇರಿ: SP ಭದ್ರಕೋಟೆಗಳು ಬಿಜೆಪಿ ಪಾಲು, ಆಪ್‌ಗೂ ಮುಖಭಂಗ!

ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿಯನ್ನು ದೀಪಕ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಸಹ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೋಪಿ ವಿನಿತಾ ಅಗರ್ವಾಲ್ ಮತ್ತು ಆಕೆಯ ಪತಿ ಕೃಷ್ಣ ಮುರಾರಿ ಅಗರ್ವಾಲ್ ಅವರು ತಮಗೆ 12 ವರ್ಷದ ಮಗಳು ಇದ್ದಾಳೆ, ಆದರೆ ಮಗನಿಲ್ಲ ಎಂದು ಹೇಳಿದ್ದಾರೆ. ಹಾಗೂ, ದೀಪಕ್ ಮಗುವನ್ನು ಕಳ್ಳತನ ಅಥವಾ ಅಪಹರಣ ಮಾಡಿದ್ದಾರೆ ಎಂದು ತಿಳಿಯದೆ ಶಿಶುವನ್ನು ದತ್ತು ಪಡೆದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ವರದಿಗಳ ಪ್ರಕಾರ ಮಗುವಿನ ಅಪಹರಣ ದಂಧೆಯಲ್ಲಿ ತೊಡಗಿದ್ದ 8 ಮಂದಿಯನ್ನು ಬಂಧಿಸಲಾಗಿದೆ.