ನಟ ಸುದೀಪ್ ಬಗ್ಗೆ ಅವಹೇಳನಕಾರಿ ನಿಂದನೆ: ಅಹೋರಾತ್ರ ವಿರುದ್ಧ ಕೇಸ್
* ಕ್ರಮ ಜರುಗಿಸುವಂತೆ ವಾಣಿಜ್ಯ ಮಂಡಳಿ ದೂರು
* ಬರಹಗಾರ ಆಹೋರಾತ್ರ ಹಾಗೂ ಚರಣ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
* ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಿ ಕಾನೂನು ಕ್ರಮ: ಎಸಿಪಿ ನಾರಾಯಣಸ್ವಾಮಿ
ಬೆಂಗಳೂರು(ಜು.12): ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತ ನಟ ಸುದೀಪ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಬರಹಗಾರ ಅಹೋರಾತ್ರ ಹಾಗೂ ಚರಣ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಲಸೂರು ಗೇಟ್ ಉಪ ವಿಭಾಗದ ಎಸಿಪಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋಮವಾರ ದೂರು ಸಲ್ಲಿಸಿದೆ.
ಕಾರ್ಪೋರೇಷನ್ ವೃತ್ತ ಸಮೀಪದ ಹಲಸೂರು ಗೇಟ್ ಕಚೇರಿಗೆ ಭೇಟಿ ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ನೇತೃತ್ವದ ತಂಡವು, ಸುದೀಪ್ ಅವರ ವಿರುದ್ಧ ನಿಂದಿಸಿರುವ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಸಬೇಕು ಎಂದು ಎಸಿಪಿ ವಿ.ನಾರಾಯಣಸ್ವಾಮಿ ಅವರಿಗೆ ವಿನಂತಿಸಿದರು.
ಬೆಂಗ್ಳೂರು: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ, 8 ಮಂದಿ ನೊಂದ ಯುವತಿಯರ ರಕ್ಷಣೆ
ಭಾರತೀಯ ಚಲನಚಿತ್ರ ರಂಗದ ಹೆಸರಾಂತ ನಟರಾಗಿರುವ ಸುದೀಪ್ ಅವರ ಬಗ್ಗೆ ಆಹೋರಾತ್ರ ಹಾಗೂ ಚರಣ್ ತುಚ್ಛವಾದ ಭಾಷೆಯಲ್ಲಿ ನಿಂದಿಸಿದ್ದಾರೆ. ಈ ಮೂಲಕ ಕನ್ನಡ ಚಲನಚಿತ್ರರಂಗ ಹಾಗೂ ಸುದೀಪ್ ಅವರ ಘನತೆ ಮತ್ತು ಗೌರವಕ್ಕೆ ಚ್ಯುತಿ ತರುವ ಹೇಳಿಕೆ ನೀಡಿರುವುದು ಬೇಸರ ತಂದಿದೆ. ಅಲ್ಲದೆ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲ ಸಲ್ಲದ ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಇಬ್ಬರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಬಾ.ಮಾ.ಹರೀಶ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿ ಎಸಿಪಿ ನಾರಾಯಣಸ್ವಾಮಿ ಅವರು, ನಟ ಸುದೀಪ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ದೂರಿನನ್ವಯ ಗಂಭೀರವಲ್ಲದ ಪ್ರಕರಣ (ಎನ್ಸಿ) ಎಂದು ನಮೂದಿಸಲಾಗಿದೆ. ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.