Delhi Accident: ಫುಟ್ಪಾತ್ನಲ್ಲಿ ಆಟವಾಡುತ್ತಿದ್ದ 3 ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು: ಚಾಲಕ ಬಂಧನ
ಕಾರಿನೊಳಗೆ ಚಾಲಕ ತನ್ನ ಕುಟುಂಬದೊಂದಿಗೆ ಇದ್ದ. ಆದರೆ, ಆತ ಕುಡಿದಿರಲಿಲ್ಲ ಅಥವಾ ಡ್ರಗ್ಸ್ ಸೇವಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಫುಟ್ಪಾತ್ನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳಿಗೆ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಪೊಲೀಸರು, ಆರೋಪಿ ಚಾಲಕ ಸಮತೋಲನ ಕಳೆದುಕೊಂಡು ಮಕ್ಕಳು ಆಟವಾಡುತ್ತಿದ್ದ ಫುಟ್ಪಾತ್ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿಸಿದ್ದಾರೆ. ಇನ್ನು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರತಾಪ್ ನಗರದ ನಿವಾಸಿ ಗಜೇಂದರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬ್ರೆಝಾ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನು ಓದಿ: ಕಾರು ಅಪಘಾತ, ಗಂಭೀರ ಗಾಯಗೊಂಡ ಆಂಡ್ರ್ಯೂ ಫ್ಲಿಂಟಾಫ್ ಏರ್ಲಿಫ್ಟ್..!
ಕಾರು ಮಕ್ಕಳಿಗೆ ಡಿಕ್ಕಿ ಹೊಡೆದು ನಂತರ ಫುಟ್ಪಾತ್ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಮಕ್ಕಳ ಸಹಾಯಕ್ಕೆ ಧಾವಿಸಿದರು. ಕೆಲವರು ಆರೋಪಿಯನ್ನು ತಡೆಯಲು ಹೋಗಿ ಥಳಿಸಿದ್ದಾರೆ. ಅಲ್ಲದೆ, ಕೋಪಗೊಂಡ ಸ್ಥಳೀಯರು ಕಾರನ್ನು ಡ್ಯಾಮೇಜ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಅವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ತಿಳಿದುಬಂದಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಈ ಅಪಘಾತದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ, ಅಪಘಾತ ಸಂಭವಿಸಿದಾಗ ಆರೋಪಿಯು ಲೀಲಾವತಿ ಶಾಲೆಯ ಬಳಿ ವಾಹನ ಚಲಾಯಿಸುತ್ತಿದ್ದರು. ಗಾಯಗೊಂಡ 10, 6 ಮತ್ತು 4 ವರ್ಷದ ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. “10 ಮತ್ತು 4 ವರ್ಷದ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, 6 ವರ್ಷದ ಮೂರನೇ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಈಗ ಸ್ಥಿರವಾಗಿದ್ದಾನೆ ಮತ್ತು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾನೆ ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Haveri: ಹುಟ್ಟೂರು ಅರಳಿಕಟ್ಟಿಯಲ್ಲಿ ನಡೆದ ಸಿಪಿಐ ರವಿ ಉಕ್ಕುಂದ ಅಂತ್ಯಕ್ರಿಯೆ, ನೆರೆದಿದ್ದ ಜನರ ಕಂಬನಿ
ಇನ್ನು, ಕಾರಿನೊಳಗೆ ಚಾಲಕ ತನ್ನ ಕುಟುಂಬದೊಂದಿಗೆ ಇದ್ದ. ಆದರೆ, ಆತ ಕುಡಿದಿರಲಿಲ್ಲ ಅಥವಾ ಡ್ರಗ್ಸ್ ಸೇವಿಸಿರಲಿಲ್ಲ. ಗಜೇಂದರ್ ವಿರುದ್ಧ ರಸ್ತೆ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ರೀತಿ ಫುಟ್ಪಾತ್ಗೆ ಕಾರು ನುಗ್ಗಿ ಜನರನ್ನು ಬಲಿ ಪಡೆದಿರುವುದು ಅಥವಾ ಗಾಯಗೊಳಿಸಿರುವ ನಾನಾ ಉದಾಹರಣೆಗಳು ನಮ್ಮ ಮುಂದೆ ಇದೆ. ಅದೇ ರೀತಿ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಅಂತದ್ದೇ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕಿದೆ.
ಇದನ್ನೂ ಓದಿ: Cyrus Mistry ಅಪಘಾತಕ್ಕೆ ಕಾರು ಪಥ ಬದಲಿಸಲು ವಿಫಲವೇ ಕಾರಣ..!