ತಮಗೆ ಐಪಿಎಸ್‌ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳ ಪರಿಚಯ ಇದೆ ಎಂದು ಹೇಳಿಕೊಂಡು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಏಳು ಜನರಿಗೆ ಒಟ್ಟು 1.53 ಕೋಟಿ ಪಡೆದು ವಂಚನೆ ಮಾಡಿದ ಆರೋಪದಡಿ ಇಬ್ಬರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜು.03): ತಮಗೆ ಐಪಿಎಸ್‌ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳ ಪರಿಚಯ ಇದೆ ಎಂದು ಹೇಳಿಕೊಂಡು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಏಳು ಜನರಿಗೆ ಒಟ್ಟು 1.53 ಕೋಟಿ ಪಡೆದು ವಂಚನೆ ಮಾಡಿದ ಆರೋಪದಡಿ ಇಬ್ಬರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಣಿ​ಗಲ್‌ ತಾಲೂ​ಕಿನ ಮಾಚೋನಹಳ್ಳಿಯ ಪ್ರಕಾ​ಶ್‌​ (35) ಮತ್ತು ಹೊಸ​ಕೋ​ಟೆಯ ನಾರಾ​ಯ​ಣಪ್ಪ (55) ಬಂಧಿ​ತರು. ಮತ್ತೊಬ್ಬ ಆರೋಪಿ ಪಾಟೀಲ್‌ ಎಂಬಾತ ತಲೆ​ಮ​ರೆ​ಸಿ​ಕೊಂಡಿ​ದ್ದು, ಆತ​ನ ಪತ್ತೆಗೆ ಪೊಲೀಸರು ಶೋಧಿಸುತ್ತಿದ್ದಾರೆ.

ಪ್ರಕರಣದ ವಿವರ: ಗುತ್ತಿಗೆದಾರ ಮುನಿರಾಜುಗೆ ಆರೋಪಿಗಳಾದ ನಾರಾಯಣಪ್ಪ, ಪ್ರಕಾಶ್‌ ಹಾಗೂ ಪಾಟೀಲ್‌ ಪರಿಚಯವಾಗಿತ್ತು. ಈ ಪೈಕಿ ಆರೋಪಿ ಪ್ರಕಾಶ್‌ ಬೆಳಗಾವಿ ಪೊಲೀಸ್‌ ಕಮಿಷನರ್‌ ಬೋರಲಿಂಗಯ್ಯ ನನ್ನ ಚಿಕ್ಕಪ್ಪ. ಕುಣಿಗಲ್‌ ಶಾಸಕ ರಂಗನಾಥ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಪರಿಚಿತರು. ಅಲ್ಲದೆ, ನನ್ನ ತಂದೆ ಚಿಕ್ಕನರಸಿಂಹಯ್ಯ ಬೆಂಗಳೂರು ಜಲಮಂಡಳಿಯಲ್ಲಿ ಎಇಇ ಆಗಿರುವುದರಿಂದ ಜಲಮಂಡಳಿಯ ಎಲ್ಲ ಅಧಿಕಾರಿಗಳು ನನಗೆ ಗೊತ್ತು. 

Bengaluru Crime News: ಗುರಾಯಿಸಿದ್ದಕ್ಕೆ ತಮ್ಮನನ್ನೇ ಕೊಂದ ಅಣ್ಣ!

ಈ ಎರಡೂ ಇಲಾಖೆಗಳಲ್ಲಿ ಸುಲಭವಾಗಿ ಉದ್ಯೋಗ ಕೊಡಿಸುವುದಾಗಿ’ ಗುತ್ತಿಗೆದಾರ ಮುನಿರಾಜುಗೆ ನಂಬಿಸಿದ್ದಾನೆ. ಮುನಿರಾಜು ಪುತ್ರ ಪಶುಪತಿಗೆ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಪೊಲೀಸ್‌ ಇಲಾಖೆಯ ಅರ್ಜಿಗೆ ಸಹಿ ಮಾಡಿಸಿಕೊಂಡು 15 ಲಕ್ಷ ಪಡೆದಿದ್ದಾನೆ. ಆರೋಪಿ ನಾರಾಯಣಪ್ಪ, ಗುತ್ತಿಗೆದಾರ ಮುನಿರಾಜು ಪುತ್ರಿ ಪ್ರಿಯಾಂಕಾಗೆ ಬೆಂಗಳೂರು ಜಲಮಂಡಳಿಯಲ್ಲಿ ಉದ್ಯೋಗ ಕೊಡಿಸುವುದಾಗಿ 48 ಲಕ್ಷ ರು. ಪಡೆದು ನಕಲಿ ನೇಮಕಾತಿ ಪತ್ರ ಹಾಗೂ ಗುರುತಿನ ಚೀಟಿ ಕೊಟ್ಟಿದ್ದಾನೆ. 

ಅಪ್ಪನ ಪಿಸ್ತೂಲ್‌ನಲ್ಲಿ ಮಕ್ಕಳ ಆಟ, ಅಚಾನಕ್ಕಾಗಿ ಸಿಡಿದ ಗುಂಡಿನಿಂದ 2 ವರ್ಷದ ಪುತ್ರ ಸಾವು!

ಅಂತೆಯೆ ಮುನಿರಾಜು ಅವರ ತಮ್ಮನ ಮಕ್ಕಳಾದ ಅಭಿಷೇಕ್‌ಗೆ ಜಲಮಂಡಳಿಯಲ್ಲಿ ಸೂಪರಿಂಟೆಂಡೆಂಟ್‌ ಇಂಜಿನಿಯರ್‌ ಮತ್ತು ಸಂದೀಪ್‌ಗೆ ಜೂನಿಯರ್‌ ಅಕೌಂಟೆಂಡ್‌ ಉದ್ಯೋಗ ಕೊಡಿಸುವುದಾಗಿ ವಿವಿಧ ಹಂತಗಳಲ್ಲಿ ಕ್ರಮವಾಗಿ 52 ಲಕ್ಷ ರು. ಹಾಗೂ 12 ಲಕ್ಷ ರು. ಪಡೆದಿದ್ದಾರೆ. ಇನ್ನು ಮುನಿರಾಜು ಅವರ ಪರಿಚಿತರ ಮಕ್ಕಳಾದ ಮನೋಜ್‌ ಕುಮಾರ್‌ನಿಂದ 12 ಲಕ್ಷ ರು, ಹೇಮಂತ್‌ನಿಂದ 12 ಲಕ್ಷ ರು. ಹಾಗೂ ಧನುಷ್‌ಕುಮಾರ್‌ನಿಂದ 3 ಲಕ್ಷ ರು. ಪಡೆದುಕೊಂಡಿದ್ದಾರೆ. ಒಟ್ಟಾರೆ ಆರೋಪಿಗಳು ಏಳು ಮಂದಿಯಿಂದ 1.53 ಕೋಟಿ ರು.ಪಡೆದು ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.