ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಎಸ್ಕಾರ್ಟ್‌ ವಾಹನ ಡಿಕ್ಕಿಯಾಗಿ ಬೈಕ್‌ ಸವಾರನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಾನವೀಯತೆಯೇ ಇಲ್ಲದ ಸಚಿವ ಅರಗ ಜ್ಞಾನೇಂದ್ರ ಸಾವನ್ನು ಕಂಡೂ ಕಾಣದಂತೆ ಕಾರು ನಿಲ್ಲಿಸದೇ ಹೊರಟು ಹೋಗಿದ್ದಾರೆ.

ಹಾಸನ (ಮಾ.01): ಹಾನಸ ಜಿಲ್ಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಎಸ್ಕಾರ್ಟ್‌ ನೀಡುತ್ತಿದ್ದ ಪೊಲೀಸ್‌ ವಾಹನಕ್ಕೆ ಡಿಕ್ಕಿಯಾಗಿ ಬೈಕ್‌ ಸವಾರನೊಬ್ಬ ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ, ಮಾನವೀಯತೆ ಇಲ್ಲದೇ ಸಾವಿನ ದೃಶ್ಯವನ್ನು ಕಂಡೂ ಕಾಣದಂತೆ ಸಚಿವ ಅರಗ ಜ್ಞಾನೇಂದ್ರ ಕಾರು ನಿಲ್ಲಿಸದೇ ಅಲ್ಲಿಂದ ಹೊರಟು ಹೋಗಿದ್ದಾರೆ. 

ಹಾಸನದಲ್ಲಿ ಗೃಹ ಸಚಿವರಿಗೆ ಎಸ್ಕಾರ್ಟ್ ಮಾಡುತ್ತಿದ್ದ ಪೊಲೀಸ್ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಇನ್ನು ಪೊಲೀಸ್‌ ಜೀಪು ವೇಗವಾಗಿದ್ದರಿಂದ ಬೈಕ್‌ ಸವಾರನಿಗೆ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದಾನೆ. ಇನ್ನು ಎಸ್ಕಾರ್ಟ್‌ ವಾಹನ ಗುದ್ದಿದ ರಭಸಕ್ಕೆ ಬೈಕ್‌ ಸವಾರ ರಕ್ತಡ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಇದನ್ನು ಗಮನಿಸದೇ ಕಂಡೂಕಾಣದಂತೆ, ಸಚಿವ ಅರಗ ಜ್ಞಾನೇಂದ್ರ ಕಾರು ನಿಲ್ಲಿಸದಂತೆ ಹೋಗಿದ್ದಾರೆ. ಮಾನವೀಯತೆಗಾದರೂ ಕಾರು ನಿಲ್ಲಿಸಿ ಬೈಕ್ ಅಪಘಾತಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರಸ್ತೆಯಲ್ಲೇ ಕೆಟ್ಟುನಿಂತ ಕಾಂಗ್ರೆಸ್‌ ಪ್ರಜಾಧ್ವನಿ ಬಸ್‌: ಬೇರೊಂದು ವಾಹನದಲ್ಲಿ ತೆರಳಿದ ಸಿದ್ದರಾಮಯ್ಯ

ಚಿಕ್ಕಗಂಡಸಿ ಗ್ರಾಮದ ರಮೇಶ್‌ ಮೃತ: ಹಾಸನ ಜಿಲ್ಲೆಯ ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಮೃತ ದುರ್ದೈವಿ ಆಗುಇದ್ದಾನೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ತೆರಳಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಅವರು, ಹಾಸನ ಜಿಲ್ಲೆಯ ಮಾರ್ಗವಾಗಿ ಶಿವಮೊಗ್ಗದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಎಸ್ಕಾರ್ಟ್‌ ಪಡೆದುಕೊಂಡಿದ್ದರು. ಈ ವೇಳೆ ಬೈಕ್‌ ಸವಾರನಿಗೆ ಡಿಕ್ಕಿಯಾಗಿದೆ. 

ಪೆಟ್ರೋಲ್‌ ಬಂಕ್‌ನಿಂದ ಬರುವಾಗ ಡಿಕ್ಕಿ: ಗೃಹ ಸಚಿವರಿಗೆ ಡಿಆರ್ ಇನ್ಸ್‌ಪೆಕ್ಟರ್ ರಾಮು ಎಸ್ಕಾರ್ಟ್ ಮಾಡುತ್ತಿದ್ದರು. ಇನ್ನು ರಸ್ತೆಯ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‌ನಿಂದ ರಸ್ತೆಗೆ ಬಂದ ಬೈಕ್‌ ಸವಾರ ರಮೇಶ್‌ನಿಗೆ ಎಸ್ಕಾರ್ಟ್ ವಾಹನ ಡಿಕ್ಕಿಯಾಗಿದೆ. ಅಪಘಾತದ ವಿಷಯ ತಿಳಿದರು ವಾಹನ ನಿಲ್ಲಿಸದೆ ಗೃಹ ಸಚಿವ ಅರಗ ಜ್ಞಾನೇಂದ್ರ ತೆರಳಿದ್ದಾರೆ. ಅಮಾಯಕ ವ್ಯಕ್ತಿ ಪ್ರಾಣ ಕಳೆದುಕೊಂಡರೂ ಒಬ್ಬ ರಾಜ್ಯದ ಜವಾಬ್ದಾರಿಯುವ ಮಂತ್ರಿಯಾಗಿರುವ ಗೃಹ ಸಚಿವರು ಕನಿಷ್ಠ ಮಾನವೀಯತೆಯನ್ನೂ ತೋರದೆ ಅಲ್ಲಿಂದ ಹೊರಟು ಹೋಗಿದ್ದಾರೆ.

ಬೈಕ್‌ ಸವಾರನದ್ದೇ ತಪ್ಪೆಂದ ಪೊಲೀಸರು: ಇನ್ನು ರಾಮನಗರ, ಮಂಡ್ಯ, ಹಾಸನ ಸೇರಿ ವಿವಿಧ ಜಿಲ್ಲೆಗಳಲ್ಲಿ ನಗರ ಪ್ರದೇಶಗಳಲ್ಲಿಯೇ ಶೇ.90ಕ್ಕೂ ಅಧಿಕ ಬೈಕ್‌ ಸವಾಋರು ಹೆಲ್ಮೆಟ್‌ ಧರಿಸುವುದಿಲ್ಲ. ಆದರೆ, ಗೃಹ ಸಚಿವರ ಕೆ.ಎ.13 ಜಿ 1467 ನಂಬರ್‌ನ ಬೆಂಗಾವಲು ಪೊಲೀಸ್‌ ವಾಹನ ಈಗ ಡಿಕ್ಕಿ ಹೊಡೆದಿರುವ ಹಿನ್ನೆಲೆಯಲ್ಲಿ ಮೃತ ಬೈಕ್‌ ಸವಾರ ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಪೊಲೀಸರು ವಾದ ಮಾಡುತ್ತಿದ್ದಾರೆ. ಇನ್ನು ಗಂಡಸಿ ಪೊಲೀಸ್‌ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನೆ ಮಾಡಿದ್ದಾರೆ. 

ದೇಶದ 2ನೇ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಆರಂಭ : ಆರಗ ಜ್ಞಾನೇಂದ್ರ

ಬೈಕ್‌ ಸವಾರನ ಸಾವಿಗೆ ಬೆಂಗಾವಲು ವಾಹನ ಕಾರಣವಲ್ಲ ಸ್ಪಷ್ಟೀಕರಣ: 
ಗೃಹ ಸಚಿವರ ಬೆಂಗಾವಲು ವಾಹನವೊಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ನಿಧನಕ್ಕೆ ಕಾರಣವಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದೆ. ಗೃಹ ಸಚಿವರು ಪ್ರಯಾಣಿಸುತ್ತಿದ್ದ ಹಾಗೂ ಅವರ ಬೆಂಗಾವಲು ವಾಹನಗಳು ಯಾವುದೇ ಅಪಘಾತಕ್ಕೆ ಕಾರಣವಾಗಿರುವುದಿಲ್ಲ. ಆದರೆ, ಗೃಹ ಸಚಿವರು ಪ್ರವಾಸದ ವೇಳೆಯಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಹಾಸನ ಜಿಲ್ಲಾ ಪೊಲೀಸ್ ವಾಹನವೊಂದು, ಬೆಂಗಾವಲು ವಾಹನದ ಬಹಳ ಹಿಂದಕ್ಕೆ ಬರುವಾಗ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿತ್ತು ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇದೊಂದು, ಸಚಿವರ ಗಮನಕ್ಕೆ ಬಾರದೆ ಹೋದ ದುರದೃಷ್ಟಕರ ಘಟನೆಯಾಗಿದ್ದು, ಡಿಕ್ಕಿ ಹೊಡೆದು ಅವಘಡ ನಡೆದರೂ ಸಚಿವರು ಲೆಕ್ಕಿಸದೆ ಹೋದರು ಎಂಬ ವರದಿಗಳು ಸತ್ಯಕ್ಕೆ ದೂರ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.