* ಎಟಿಎಂಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ* ಈಶಾನ್ಯ ವಿಭಾಗ ಸಿಇಎನ್ ಠಾಣೆ ಪೊಲೀಸರಿಂದ ಮಲ್ಲಿನಾಥ್ ಅಂಗಡಿ ಎಂಬಾತನ ಬಂಧನ* ನಿವೃತ್ತ ಸರ್ಕಾರಿ ನೌಕರ ರಾಮಕೃಷ್ಣೆಗೌಡ ಎಂಬುವರಿಗೆ ವಂಚಿಸಿದ್ದ ಆರೋಪಿ

ಬೆಂಗಳೂರು(ಜು.02): ಎಟಿಎಂಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಈಶಾನ್ಯ ವಿಭಾಗ ಸಿಇಎನ್ ಠಾಣೆ ಪೊಲೀಸರಿಂದ ಮಲ್ಲಿನಾಥ್ ಅಂಗಡಿ ಎಂಬಾತನನ್ನು ಬಂಧಿಸಿದ್ದಾರೆ. ಈ ಆರೋಪಿ ನಿವೃತ್ತ ಸರ್ಕಾರಿ ನೌಕರ ರಾಮಕೃಷ್ಣೆಗೌಡ ಎಂಬುವವರನ್ನು ವಂಚಿಸಿದ್ದಾನೆ ಎನ್ನಲಾಗಿದೆ. 

Add Asianetnews Kannada as a Preferred SourcegooglePreferred

ದೂರುದಾರ ರಾಮಕೃಷ್ಣೆಗೌಡ ಕಳೆದ ತಿಂಗಳು ಹೊಸ ಎಟಿಎಂ ಕಾರ್ಡ್ ಪಡೆದಿದ್ದ. ಬಳಿಕ ಎಟಿಎಂ ಕಾರ್ಡ್‌ಗೆ ಪಿನ್ ಜನರೇಟ್ ಮಾಡಲು ಎಟಿಎಂಗೆ ತೆರಳಿದ್ದ. ಈ ವೇಳೆ ಪಿನ್ ಜನರೇಟ್ ಮಾಡಲು ಗೊಂದಲವಾಗಿ ಅಲ್ಲೇ ಇದ್ದ ವ್ಯಕ್ತಿಯ ಸಹಾಯ ಕೇಳಿದ್ದ. ಆದರೆ ಆರೋಪಿ ಪಿನ್ ಜನರೇಟ್ ಮಾಡುವ ವೇಳೆ ಎಟಿಎಂ ಕಾರ್ಡ್ ಬದಲಾಯಿಸಿದ್ದಾನೆ. ಸ್ಥಳದಲ್ಲಿ 40 ಸಾವಿರ ಡ್ರಾ ಮಾಡಿ ಕೊಟ್ಟು, ಕಾರ್ಡ್‌ ಜೊತೆ ಎಸ್ಕೇಪ್ ಆಗಿದ್ದಾನೆ. 

ಇದಾಧ ಬಳಿಕ ಪುನಃ ಎಟಿಎಂಗೆ ಹೋಗಿದ್ದ ವೇಳೆ ಕಾರ್ಡ್ ಬದಲಾವಣೆಯಾಗಿರುವುದು ದೂರುದಾರರ ಗಮನಕ್ಕೆ ಬಂದಿದೆ. ಇಷ್ಟೇ ಅಲ್ಲದೇ ಆರೋಪಿ ರಾಮಕೃಷ್ಣೆಗೌಡ ಖಾತೆಯಲ್ಲಿದ್ದ 8.50 ಲಕ್ಷ ಹಣವನ್ನೂ ಎಗರಿಸಿದ್ದಾನೆ. ಕೂಡಲೇ ರಾಮಕೃಷ್ಣೆಗೌಡ ಈ ಬಗ್ಗೆ ಈಶಾನ್ಯ ವಿಭಾಗ ಸೆನ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿದ ಪೊಲೀಸರು ಯಲಹಂಕ ನಿವಾಸಿ ಮಲ್ಲಿನಾಥ್ ಅಂಗಡಿ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯ ವಿಚಾರಣೆ ವೇಳೆ ಈತ ಎಟಿಎಂಗೆ ಬರುವ ಗ್ರಾಹಕರನ್ನು ವಂಚಿಸೋದೇ ಕಾಯಕವಾಗಿಸಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿ 
ಪ್ರತಿದಿನ ಎಟಿಎಂಗಳ ಬಳಿಯೇ ಸುತ್ತಾಡುತ್ತಿದ್ದ. ಯಾರಾದರೂ ಸಹಾಯಕ್ಕೆ ಕರೆದಾಗ ಎಟಿಎಂ ಕಾರ್ಡ್ ಬದಲಾಯಿಸಿ ವಂಚಿಸುತ್ತಿದ್ದ.

ಸದ್ಯ ಆರೋಪಿ ಬಳಿ ಇದ್ದ ನಾಲ್ಕು ಚಿನ್ನದ ಸರ, ಮೂರು ಚಿನ್ನದ ಉಂಗುರ ಒಂದು ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ರಾಮಕೃಷ್ಣೆಗೌಡರ ಕಾರ್ಡ್ ನಿಂದ ಆರೋಪಿ ಹಣ ಪಡೆದು ಚಿನ್ನಾಭರಣ ಖರೀದಿಸಿದ್ದ ಎಂಬುವುದೂ ಬೆಳಕಿಗೆ ಬಂದಿದೆ. ಈಶಾನ್ಯ ಸಿಇಎನ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.