ರಾಜ್ಯದ ಮೊದಲ ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಯಾದ ಮೊದಲ ದಿನವೇ ದರೋಡೆ ಕೋರರು ತಮ್ಮ ಕೈಚಳಕವನ್ನು ತೋರಿದ್ದಾರೆ. ಮೈಸೂರು ಮೂಲದ ವೈದ್ಯ ಲೋಹಿತ್ ರಾವ್ ಅವರಿಗೆ ಕೊಲೆ ಬೆದರಿಕೆ ಹಾಕಿ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ನಡೆದಿದೆ.

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್‌,ರಾಮನಗರ

Add Asianetnews Kannada as a Preferred SourcegooglePreferred

ಬೆಂಗಳೂರು (ಮಾ.16) : ರಾಜ್ಯದ ಮೊದಲ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ(Bengaluru-Mysuru Expressway)ಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಕಳೆದ ಮಾರ್ಚ್ 12 ರಂದು ಉದ್ಘಾಟಿಸಿದ್ರು ಆದರೆ ಉದ್ಘಾಟನೆಯಾದ ಮೊದಲ ದಿನವೇ ಎಕ್ಸ್ ಪ್ರೆಸ್ ಹೈವೇಯಲ್ಲಿ ಮಧ್ಯರಾತ್ರಿ ವೇಳೆ ಕೆಟ್ಟು ನಿಂತಿದ್ದ ಕಾರು ಪ್ರಯಾಣಿಕರಿಗೆ ಡ್ಯಾಗರ್(Dagger) ತೋರಿಸಿ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಮೂಲಭೂತ ವ್ಯವಸ್ಥೆ ಕಲ್ಪಿಸದೇ ಹೆದ್ದಾರಿ ಉದ್ಘಾಟನೆ(Inauguration) ಮಾಡಿದ್ದಕ್ಕೆ ವಾಹನ ಸವಾರರು ಹಿಡಿ ಶಾಪ ಹಾಕುತ್ತಿದ್ದಾರೆ..

Bengaluru-Mysuru Expressway: ವಿರೋಧದ ನಡುವೆಯೂ ಇಂದಿನಿಂದ ಬೆಂ-ಮೈ ಹೆದ್ದಾರಿ ಟೋಲ್‌ ಆರಂಭ!

ಹೌದು ರಾಜ್ಯದ ಮೊದಲ ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಯಾದ ಮೊದಲ ದಿನವೇ ದರೋಡೆ ಕೋರರು ತಮ್ಮ ಕೈಚಳಕವನ್ನು ತೋರಿದ್ದಾರೆ. ಮೈಸೂರು ಮೂಲದ ವೈದ್ಯ ಲೋಹಿತ್ ರಾವ್(Lohit rao) ಮತ್ತು ಅವರ ಪತ್ನಿ ಸ್ನೇಹಿತರನ್ನು ಬೆಂಗಳೂರಿಗೆ ಡ್ರಾಪ್ ಮಾಡಿ ವಾಪಸ್ ಹೋಗುವಾಗ ರಾಮನಗರ ಜಿಲ್ಲೆಯ ರಾಮನಗರ-ಚನ್ನಪಟ್ಟಣ ಬೈಪಾಸ್ ಮಧ್ಯೆ ಸಿಗುವ ದೇವರಹೊಸಹಳ್ಳಿ ಹಾಗೂ ತಿಟ್ಟಮಾರನಹಳ್ಳಿ ಬಳಿ ಮಧ್ಯರಾತ್ರಿ ಸುಮಾರು ಒಂದೂವರೆ ಗಂಟೆಯಲ್ಲಿ ತಾಂತ್ರಿಕ ದೋಷದಿಂದ ಕಾರು ಕೆಟ್ಟು ನಿಂತಿತ್ತು. ತಕ್ಷಣ ಹೆಲ್ಪ್ ಲೈನ್(Helpline) ಕರೆ ಮಾಡಿದ್ದರು ಯಾವುದೇ ಪ್ರಯೋಜನ ಆಗಲಿಲ್ಲ ಹಾಗಾಗಿ ಟೋಯಿಂಗ್ ವಾಹನಕ್ಕೆ ಕಾಲ್ ಮಾಡಿ ಕಾರಿನಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದರು. ಈ ವೇಳೆ ಕಾರು ಬಳಿ ಬಂದ ದರೋಡೆಕೋರರು ಡ್ಯಾಗರ್ ತೋರಿಸಿ ಕೃತ್ಯವೆಸಗಿದ್ದಾರೆ.

  • ರಾತ್ರಿ ವೇಳೆ ಪ್ರಯಾಣಿಸಲು ಹೈವೇ ಡೇಂಜರ್: 
  • ದರೋಡೆಕೋರರ ಹಾಟ್ ಸ್ಪಾಟ್ ಆಗ್ತಿದೆ ಹೆದ್ದಾರಿ...
  • ಸಿಸಿಟಿವಿ, ಹೈವೆ ಗಸ್ತು, ಹೆಲ್ಪ್ ಲೈನ್ ಸಮಸ್ಯೆಯೇ ಖದೀಮರ ಬಂಡವಾಳ

ಅಂದಹಾಗೆ ವೈದ್ಯ ಲೋಹಿತ ರಾವ್ ಹೇಳುವಂತೆ, ಕಾರಿನಲ್ಲಿದ್ದ ಕುಳಿತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಕಾರಿನ ಕಿಟಕಿಯನ್ನು ಜೋರಾಗಿ ಬಡಿದಿದ್ದಾರೆ, ಅದರಲ್ಲಿ ಒಬ್ಬರು ಹಾಕಿದ್ದ ಪ್ಯಾಂಟ್ ಖಾಕಿ ಬಣ್ಣ ಆಗಿದ್ದರಿಂದ ನಾವು ಪೊಲೀಸರೆಂದು ಕಾರಿನ ಡೋರ್ ಓಪನ್ ಮಾಡಿದ್ದೆವು. ಡೋರ್ ತೆಗೆಯುತ್ತಿದ್ದಂತೆ ನಮಗೆ ಇಬ್ಬರು ಡ್ಯಾಗರ್ ತೋರಿಸಿ ಭಯ ಪಡಿಸಿದ್ದರು. ಆ ಸಂದರ್ಭದಲ್ಲಿ ಕಿರಿಚೋಣ ಅನ್ನುವಷ್ಟರಲ್ಲಿ ನಮ್ಮ ಕುತ್ತಿಗೆಗೆ ಡ್ಯಾಗರ್ ಇಟ್ಟರು ಆಗ ನಾವು ಅಸಹಾಯಕರಾಗಿ ನಮ್ಮಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಸಿದು ಎಕ್ಸ್ ಪ್ರೆಸ್ ಹೈವೇಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ಕೆಲವು ದೂರ ನಡೆದುಕೊಂಡು ಹೋಗಿ ಕಣ್ಮರೆಯಾದರೂ. ನಂತರ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು ಎಂದು ಹೆದ್ದಾರಿ ಪ್ರಾಧಿಕಾರದ(Highway Authority) ವಿರುದ್ದ ಕಿಡಿ ಕಾರಿದ್ದಾರೆ.

ಇನ್ನೂ ಅದೆಷ್ಟೋ‌ ಪ್ರಯಾಣಿಕರು‌ ರಾತ್ರಿ ಹೈವೇಯಲ್ಲಿ ಸಂಚರಿಸುವ ಸಮಯದಲ್ಲಿ ಖದೀಮರು ವಾಹನ ಅಡ್ಡಗಟ್ಟಿ ದರೋಡೆ ಮಾಡುವ ಸಮಯದಲ್ಲಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಕೆಲವು ವಾಹನ ಸವಾರರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದು ಜೀವ ಭಯದಲ್ಲೇ ಹೈವೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ನಾಳೆಯಿಂದಲೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಆರಂಭ: ಸರ್ವಿಸ್‌ ರಸ್ತೆ ಸಂಚಾರಕ್ಕೆ ಮುಕ್ತ

ಒಟ್ಟಾರೆ ಬೆಂಗಳೂರು ಮೈಸೂರು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರಂಭಗೊಂಡ ದಶಪಥ ಹೆದ್ದಾರಿ ಈಗ ಅದೇ ಹೆದ್ದಾರಿ ಸರಿಯಾದ ವ್ಯವಸ್ಥೆಗಳಿಲ್ಲದಿದ್ದರೂ ಜನರಿಂದ ಟೋಲ್ ಸಂಗ್ರಹ ಮಾಡುತ್ತಿರುವುದಕ್ಕೆ ಒಂದು ಕಡೆ ಸಾರ್ವಜನಿಕರಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ‌ ರಾತ್ರಿ ವೇಳೆ ಸಂಚರಿಸಬೇಕಾ, ಬೇಡ್ವಾ ಎಂಬ ಆತಂಕ ವಾಹನ ಸವಾರರಲ್ಲಿ ವ್ಯಕ್ತವಾಗಿದೆ.‌‌