-ಆನ್‌ಲೈನ್‌ನಲ್ಲಿ ವೈನ್‌ ಖರೀದಿಸಿದ ಯುವತಿಗೆ ಸೈಬರ್‌ ವಂಚನೆ- 540 ರೂಪಾಯಿ ಖರೀದಿಸಿದ ಯುವತಿಗೆ ಮೋಸ- ಒಟಿಪಿ ಪಡೆದು ಖಾತೆಯಲ್ಲಿದ್ದ ಸಂಪೂರ್ಣ ಹಣ ದೋಚಿದ ಖದೀಮ 

ಬೆಂಗಳೂರು(ಮಾ.31): ಆಲ್‌ಲೈನ್‌ನಲ್ಲಿ 540 ರೂಪಾಯಿ ವೈನ್‌ ಖರೀದಿಸಲು ಹೋಗಿ ಯುವತಿಯೊಬ್ಬರು 50 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ಲಾಲ್‌ಬಾಗ್‌ ರಸ್ತೆ ಸಮೀಪದ ನಿವಾಸಿ 22 ವರ್ಷದ ಯುವತಿ ಮೋಸ ಹೋಗಿದ್ದು, ಇತ್ತೀಚೆಗೆ ಆನ್‌ಲೈನ್‌ನಲ್ಲಿ ಅವರು ವೈನ್‌ ಖರೀದಿಸಲು ಯತ್ನಿಸಿ ಸೈಬರ್‌ ವಂಚನೆಗೊಳಗಾಗಿದ್ದಾರೆ. ಈ ಬಗ್ಗೆ ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Cyber Fraud: ಸೈಬರ್‌ ವಂಚಕರಿಗೆ ಸಿಮ್‌ ಮಾರುತ್ತಿದ್ದವರ ಬಂಧನ

ವೈನ್‌ ಹೋಂ ಡೆಲಿವರಿ ವೆಬ್‌ಸೈಟ್‌ನಲ್ಲಿ ಮಾಚ್‌ರ್‍ 22ರಂದು ವೈನ್‌ ಬುಕ್‌ ಮಾಡಿ 540 ರೂಪಾಯಿ ಯುವತಿ ಪಾವತಿಸಿದ್ದಾರೆ. ಸ್ವಲ್ಪ ಹೊತ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ವೈನ್‌ ಡೆಲಿವರಿ ಕೊಡಲು ಬರುತ್ತಿದ್ದೇನೆ. ಅದಕ್ಕೂ ಮೊದಲು ಡೆಲಿವರಿ ಶುಲ್ಕವೆಂದು 10 ರೂಪಾಯಿ ಭರಿಸುವಂತೆ ಸೂಚಿಸಿದ್ದಾನೆ. ಈ ಮಾತಿಗೆ ಒಪ್ಪಿದಾಗ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಂಬರ್‌ ಹೇಳಿದರೆ ಸಾಕು ಎಂದಿದ್ದಾನೆ. ಆಗ ಒಟಿಪಿ ಪಡೆದು ಯುವತಿಯ ಬ್ಯಾಂಕ್‌ ಖಾತೆಯಿಂದ .49,326 ಅನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್‌ ವಂಚನೆ ಪ್ರಕರಣ: ಆಶಾ ಕಾರ‍್ಯಕರ್ತೆಯ .21 ಲಕ್ಷ ಖೋತಾ
ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ವ್ಯಕ್ತಿ ನೀಡಿದ ಅಪಾರ ಪ್ರಮಾಣದ ಹಣದ ಆಮಿಷಕ್ಕೆ ಮರುಳಾಗಿ ಕುರುಗೋಡು ತಾಲೂಕಿನ ಆಶಾ ಕಾರ್ಯಕರ್ತೆಯೊಬ್ಬರು ಲಕ್ಷಾಂತರ ರು. ಕಳೆದುಕೊಂಡಿರುವ ಘಟನೆ ಈಚೆಗೆ ಜರುಗಿದೆ. ಕೈತುಂಬಾ ಹಣ ಬರಲಿದೆ ಎಂಬ ಆಸೆಯಿಂದ ಸಾಲ ಮಾಡಿ ವಿದೇಶಿಗನ ಖಾತೆಗೆ ಹಣ ಹಾಕಲಾಗಿದ್ದು, ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆಯೇ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Cyber Crime: ಸೈಬರ್‌ ದಾಳಿ ಸರ್ಕಾರದ ಗಮನಕ್ಕೆ ತನ್ನಿ: ರಾಜೀವ್‌ ಚಂದ್ರಶೇಖರ್‌

ಘಟನೆ ವಿವರ:
ಕುರುಗೋಡು ತಾಲೂಕಿನ ರಾಂಬಾಬು ಕ್ಯಾಂಪ್‌ನ ನಿವಾಸಿ, ಆಶಾ ಕಾರ್ಯಕರ್ತೆಯಾಗಿರುವ ಮಹಾಲಕ್ಷ್ಮಿ ಅವರಿಗೆ ಫೇಸ್‌ಬುಕ್‌ನಲ್ಲಿ ಇಂಗ್ಲೆಂಡ್‌ ಮೂಲಕ ಡಾ.ಅಲೆಕ್ಸ್‌ಸ್ಮಿತ್‌ ಎಂಬಾತನಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದ್ದು, ಮಹಾಲಕ್ಷ್ಮಿ ಸ್ವೀಕರಿಸಿದ್ದಾರೆ. ಬಳಿಕ ಇವರಿಬ್ಬರು ಸ್ನೇಹಿತರಂತೆ ಮಾತನಾಡಿದ್ದಾರೆ. ಕೆಲ ದಿನಗಳ ಬಳಿಕ ನಿನ್ನ ಮಕ್ಕಳಿಗೆ ಗಿಫ್ಟ್‌ ಆಗಿ 50 ಸಾವಿರ ಪೌಂಡು ಹಣ ಕಳಿಸುತ್ತಿದ್ದೇನೆ ಎಂದು ಅಲೆಕ್ಸ್‌ ಸ್ಮಿತ್‌ ಹೇಳಿದ್ದಾರೆ. ಇದಾದ ನಂತರ ಸುನಿತಾ ಶರ್ಮ ಎಂಬವರು ಕರೆ ಮಾಡಿ ದೆಹಲಿ ವಿಮಾನ ನಿಲ್ದಾಣದಿಂದ ಕರೆ ಮಾಡುತ್ತಿದ್ದು, ನಿಮಗೆ ಪಾರ್ಸಲ್‌ ಬಂದಿದೆ. ಈ ಪಾರ್ಸಲ್‌ ಕಳುಹಿಸಬೇಕಾದರೆ ಹಣ ಠೇವಣಿಯಿಡಬೇಕು ಎಂದು ಹೇಳಿದ್ದಾರೆ. ಅವರು ನೀಡಿದ ವಿವಿಧ ಖಾತೆಗಳಿಗೆ ಒಟ್ಟು . 21.79 ಲಕ್ಷ ಹಾಕಿ ಮೋಸ ಹೋಗಿದ್ದು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯ ಕೊಡಿಸುವಂತೆ ಮಹಾಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.

ಖರೀದಿಗೆ ನೆಪದಲ್ಲಿ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚನೆ
ಹಳೇ ಹಾಸಿಗೆಗಳನ್ನು ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದ ಯುವತಿಯರ ಬ್ಯಾಂಕ್‌ ಖಾತೆಯಿಂದ ಸೈಬರ್‌ ವಂಚಕರು ಒಂದು ಲಕ್ಷ ರು.ಕನ್ನ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.ಕಸವನಹಳ್ಳಿ ನಿವಾಸಿ ತೇಜಸ್ವಿ ಸಿಂಗ್‌ ಮತ್ತು ಸಪ್ನಾ ವಂಚನೆಗೊಳಗಾಗಿದ್ದು, ಈ ಸಂಬಂಧ ಕನ್ಹಯ್ಯ ಕುಮಾರ್‌ ಮತ್ತು ಉದಯ್‌ಭಾನ್‌ ಸಿಂಗ್‌ ಎಂಬುವರ ವಿರುದ್ಧ ವೈಟ್‌ಫೀಲ್ಡ್‌ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.ತೇಜಸ್ವಿ ಸಿಂಗ್‌ ಹಾಗೂ ಸಪ್ನಾ ಅವರು ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿ ಕರೆ ಮಾಡಿದ್ದ ಅಪರಿಚಿತರು, ಹಾಸಿಗೆಗಳನ್ನು ಖರೀದಿಸುತ್ತೇವೆ. ಆನ್‌ಲೈನ್‌ ಮೂಲಕ ಹಣ ಸಂದಾಯ ಮಾಡುವುದಾಗಿ ಹೇಳಿ, ಮೊಬೈಲ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿದ್ದರು.