ಲಾರಿ, ಟಾಟಾ ಏಸ್ ಡಿಕ್ಕಿ: ಪತ್ರಿಕಾ ವಿತರಕ ಸಾವು
ಲಾರಿ, ಟಾಟಾ ಏಸ್ ಡಿಕ್ಕಿ: ಪತ್ರಿಕಾ ವಿತರಕ ಸಾವು| ಮಂಗಳವಾರ ಬೆಳಗ್ಗೆ ಟಾಟಾ ಏಸ್ನಲ್ಲಿ ಪತ್ರಿಕೆಗಳನ್ನು ಸಾಗಿಸಲಾಗುತ್ತಿತ್ತು
ಆನೇಕಲ್[ಜ.01]: ಟಿಪ್ಪರ್ ಲಾರಿ ಮತ್ತು ಪೇಪರ್ ಬಂಡಲ್ ಸಾಗಿಸುತ್ತಿದ್ದ ಟಾಟಾ ಏಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದಿನ ಪತ್ರಿಕೆಯ ವಿತರಕರೊಬ್ಬರು ಮೃತಪಟ್ಟಘಟನೆ ಮಂಗಳವಾರ ನಡೆದಿದೆ.
ದಿನಪತ್ರಿಕೆಯ ವಿತರಕರಾದ ಕೃಷ್ಣ (26) ಮೃತಪಟ್ಟವ್ಯಕ್ತಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಟಾಟಾ ಏಸ್ನಲ್ಲಿ ಪತ್ರಿಕೆಗಳನ್ನು ಸಾಗಿಸಲಾಗುತ್ತಿತ್ತು. ತಾಲೂಕಿನ ಕೊಪ್ಪಗೇಟ್ ಬಳಿ ಅಪಘಾತ ಸಂಭವಿಸಿದೆ. ಟಾಟಾ ಏಸ್ನಲ್ಲಿದ್ದ ಕೃಷ್ಣ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಅಪಘಾತದ ರಭಸಕ್ಕೆ ಟಾಟಾ ಏಸ್ ನುಜ್ಜುಗುಜ್ಜಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಆನೇಕಲ್ ತಾಲೂಕು ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳಾದ ರಾಕೇಶ್, ನವೀನ್, ಸಾಗರ್, ಪತ್ರಕರ್ತರ ಸಂಘದ ಅಧ್ಯಕ್ಷ ಅಂಬರೀಶ್ ಶಾಸ್ತ್ರಿ ಹಾಗೂ ಶಿವಣ್ಣ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.