Bengaluru: ಏರಿಯಾದಲ್ಲಿ ಹವಾ ಸೃಷ್ಟಿಸಲು ಕೊಲೆ ಮಾಡಿದ್ದ ಮೂವರ ಸೆರೆ
ಇತ್ತೀಚೆಗೆ ಮಾಗಡಿ ರಸ್ತೆಯ ಚೆಲುವಪ್ಪ ಗಾರ್ಡನ್ ಬಳಿ ನಡೆದಿದ್ದ ರೌಡಿ ಸಾಗರ್ ಅಲಿಯಾಸ್ ಚಿನ್ನು ಕೊಲೆ ಪ್ರಕರಣ ಸಂಬಂಧ ಮೂವರನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಮೇ.28): ಇತ್ತೀಚೆಗೆ ಮಾಗಡಿ ರಸ್ತೆಯ ಚೆಲುವಪ್ಪ ಗಾರ್ಡನ್ ಬಳಿ ನಡೆದಿದ್ದ ರೌಡಿ ಸಾಗರ್ ಅಲಿಯಾಸ್ ಚಿನ್ನು ಕೊಲೆ ಪ್ರಕರಣ ಸಂಬಂಧ ಮೂವರನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆಲುವಪ್ಪ ಗಾರ್ಡನ್ ನಿವಾಸಿಗಳಾದ ಕೆ.ನವೀನ್, ಹೇಮಂತ್ಕುಮಾರ್ ಅಲಿಯಾಸ್ ರೋಸಿ ಹಾಗೂ ಡಿ.ಕುಮಾರ್ ಅಲಿಯಾಸ್ ಡಿಯೋ ಕುಮಾರ ಬಂಧಿತರು.
ತಪ್ಪಿಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಧನುಷ್ ಅಲಿಯಾಸ್ ವಾಲೆ ಪತ್ತೆಗೆ ತನಿಖೆ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಾಗರ್ ಮೇಲೆ ಸೋಮವಾರ ಸಂಜೆ ಹಲ್ಲೆ ನಡೆಸಿ ಕೊಂದು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ರವಿಪ್ರಕಾಶ್ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2 ಸಾವಿರ ನೋಟು ಸ್ವೀಕರಿಸಬೇಡಿ ಎಂದ ಬಿಎಂಟಿಸಿ: ಪ್ರಯಾಣಿಕರ ಆಕ್ರೋಶ
ಹವಾ ಸೃಷ್ಟಿಸಲು ಹೋಗಿ ಕೊಲೆ: ಮೃತ ಸಾಗರ್, ಆರೋಪಿಗಳಾದ ನವೀನ್ ಹಾಗೂ ವಾಲೆ ಸ್ನೇಹಿತರಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಮೂವರು ಪ್ರತ್ಯೇಕವಾಗಿ ತೊಡಗಿದ್ದರು. ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಸಾಗರ್ ಹಾಗೂ ನವೀನ್ ಮೇಲೆ ರೌಡಿಪಟ್ಟಿತೆರೆಯಲಾಗಿತ್ತು. ಕೆ.ಪಿ.ಅಗ್ರಹಾರ ವ್ಯಾಪ್ತಿಯಲ್ಲಿ ಹಿಡಿತ ಸಾಧಿಸಲು ಈ ಮೂವರ ಮಧ್ಯೆ ಪೈಪೋಟಿ ಸೃಷ್ಟಿಯಾಗಿತ್ತು.
ತಮ್ಮದೇ ಗುಂಪುಗಳನ್ನು ಕಟ್ಟಿಕೊಂಡು ಹಿಡಿತ ಸಾಧಿಸಲು ಯತ್ನಿಸುತ್ತಿದ್ದರು. ಇದೇ ವಿಚಾರವಾಗಿ ಆಗಾಗ ಅವರ ನಡುವೆ ಜಗಳಗಳು ಸಹ ನಡೆದಿದ್ದವು. ಇತ್ತೀಚೆಗೆ ವಾಲೆ ಹಾಗೂ ಸಾಗರ್ ಗುಂಪುಗಳ ಮಧ್ಯೆ ಗಲಾಟೆಯಾಗಿತ್ತು. ಹೀಗಾಗಿ ಅವರಿಬ್ಬರ ಮಧ್ಯೆ ರಾಜಿ ಸಂಧಾನಕ್ಕೆ ಸೋಮವಾರ ಸಂಜೆ ಮದ್ಯ ಪಾರ್ಟಿಯನ್ನು ನವೀನ್ ಆಯೋಜಿಸಿದ್ದ. ನವೀನ್ ಕರೆ ಮೇರೆಗೆ ಸಾಗರ್ ತೆರಳಿದ್ದ. ಆಗ ಎರಡು ಗಂಟೆಗಳು ಎಲ್ಲರೂ ಕಂಠಮಟ್ಟಮದ್ಯ ಸೇವಿಸಿ ಮಾತುಕತೆಯಲ್ಲಿ ತೊಡಗಿದ್ದರು.
ಬಿಬಿಎಂಪಿಗೆ ಸಾಲ ಕೊಡಲು ಬ್ಯಾಂಕ್ಗಳ ಹಿಂದೇಟು: ಕಾರಣವೇನು?
ವಿಪರೀತ ಮದ್ಯ ಸೇವಿಸಿದ್ದರಿಂದ ವಾಹನ ಓಡಿಸಲಾಗದೆ ವಾಲೆ, ತನ್ನ ಸಹಚರರಿಗೆ ತನ್ನನ್ನು ಕರೆದುಕೊಂಡು ಹೋಗಲು ಬರುವಂತೆ ಕರೆ ಮಾಡಿದ್ದ. ಆಗ ಅಲ್ಲಿಗೆ ಮಾರಕಾಸ್ತ್ರದೊಂದಿಗೆ ಬಂದ ವಾಲೆ ಸಹಚರರನ್ನು ಕಂಡ ಸಾಗರ್, ಬಿಯರ್ ಬಾಟಲ್ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಆಗ ಆರೋಪಿಗಳು ಸಾಗರ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡು ಸಾಗರ್ ಮೃತಪಟ್ಟಎಂದು ಪೊಲೀಸರು ವಿವರಿಸಿದ್ದಾರೆ.