ಅತುಲ್ ಸುಭಾಷ್, ಪುನೀತ್ ಖುರಾನಾ ಪ್ರಕರಣದ ಬಳಿಕ ಇದೀಗ ಮತ್ತೊಬ್ಬ ಪತಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ಪತ್ನಿ ಟಾರ್ಚರ್‌ಗೆ ಕಣ್ಣೀರಿಟ್ಟ ಪತಿ ಕೊನೆಯ ಮನಕಲುಕುವ ಮಾತುಗಳನ್ನಾಡಿ ಇಹಲೋಹ ತ್ಯಜಿಸಿದ ಘಟನೆ ನಡೆದಿದೆ.

ರಾಜ್‌ಕೋಟ್(ಜ.06) ಪತ್ನಿ ಟಾರ್ಚರ್ ತಾಳಲಾರದೆ ದುರಂತ ಅಂತ್ಯ ಕಾಣುತ್ತಿರುವ ಪತಿಯರ ಲಿಸ್ಟ್ ಬೆಳೆಯುತ್ತಿದೆ. ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ಬದುಕಿನ ಕರಾಳತೆಯನ್ನು ಬಿಚ್ಚಿಟ್ಟಿತ್ತು. ಇದರ ಬೆನ್ನಲ್ಲೇ ಪುನೀತ್ ಖುರಾನಾ ಪ್ರಕರಣ ದೇಶಾದ್ಯಂತ ಎಚ್ಚರಿಕೆ ನೀಡಿತ್ತು. ಈ ಪ್ರಕರಣದ ಬೆನ್ನಲ್ಲೇ ಇದೀಗ ಗುಜರಾತ್‌ನ ರಾಜ್‌ಕೋಟ್‌ ಬಳಿ ನಿವಾಸಿ ಸುರೇಶ್ ಸಥಾದಿಯಾ ದುರಂತ ಅಂತ್ಯಕಂಡಿದ್ದಾರೆ. ನನ್ನ ಅಗಲುವಿಕೆ ಪತ್ನಿಗೆ ಪಾಠವಾಗಬೇಕು. ಆಕೆ ನನ್ನವಳು ಅಥವಾ ನನ್ನ ಮಕ್ಕಳ ಹೆತ್ತವಳು ಎಂದು ಕಣ್ಣೀರಿಟ್ಟು ಬದುಕು ಅಂತ್ಯಗೊಳಿಸಿದ ಘಟನೆ ನಡೆದಿದೆ. 39 ವರ್ಷದ ಸುರೇಶ್ ಕೊನೆಯದಾಗಿ ಆಡಿದ ಮಾತಿನ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ. ಈ ವಿಡಿಯೋ ಹಲವರ ಕಣ್ತೆರೆಸಲಿದೆ.

Add Asianetnews Kannada as a Preferred SourcegooglePreferred

ಸುರೇಶ್ ಸಥಾದಿಯಾ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುರೇಶ್ ಪತ್ನಿ ಜಯಾ ಸಥಾದಿಯಾಳನ್ನು ಬಂಧಿಸಿದ್ದಾರೆ. 17 ವರ್ಷಗಳ ಹಿಂದೆ ಸುರೇಶ್ ಹಾಗೂ ಜಯಾ ಮದುವೆಯಾಗಿದೆ. ಆದರೆ ಇವರ ದಾಂಪತ್ಯ ಜೀವನ ಕೆಲವೇ ಕೆಲವು ವರ್ಷ ಮಾತ್ರ ಚೆನ್ನಾಗಿತ್ತು. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. 15 ಹಾಗೂ 10 ವರ್ಷದ ಇಬ್ಬರು ಪುತ್ರಿಯರು ಹಾಗೂ 6 ಮತ್ತು 4 ವರ್ಷಗ ಪುತ್ರರು. ಇದೀಗ ಈ ಮಕ್ಕಳು ಅನಾಥರಾಗಿದ್ದಾರೆ.

ಬೆಂಗಳೂರಿನಲ್ಲಿ ಉತ್ತರ ಭಾರತದ ಟೆಕ್ಕಿಯ ದುರಂತ ಅಂತ್ಯ; ಹೆಂಡತಿಯ ಕರಾಳತೆ ಬಿಚ್ಚಿಟ್ಟ ಡೆತ್ ನೋಟ್!

ಕಳೆದ ಕೆಲ ವರ್ಷಗಳಿಂದ ಇವರಿಬ್ಬರ ನಡುವೆ ಕಲಹ ನಡೆಯುತ್ತಲೇ ಇದೆ. ಹಲವು ಬಾರಿ ದಾಂಪತ್ಯ ಜೀವನದ ವಿಚಾರದಲ್ಲಿ ಜಗಳವಾಡಿದ್ದಾರೆ. ಇತ್ತ ಕಲಹ ಹೆಚ್ಚಾದಾಗ ಪತ್ನಿ ತವರು ಮನೆಗೆ ತೆರಳಿದ್ದಾಳೆ. ಹೀಗಾಗಿ ಸುರೇಶ್ ಪತ್ನಿಯ ತವರು ಮನೆಗೆ ತೆರಳಿ ಮನ ಒಲಿಸುವ ಪ್ರಯತ್ನ ಮಾಡಿದ್ದಾನೆ. ಮಕ್ಕಳ ಭವಿಷ್ಯ ಹಾಳಾಗಲಿದೆ ಎಂದು ಪತ್ನಿಯನ್ನು ಕರೆ ತರುವ ಪ್ರಯತ್ನ ಮಾಡಿದ್ದಾನೆ. ಆದರೆ ಯಾವುದು ಕೈಗೂಡಲಿಲ್ಲ. ಕೊನೆಗೆ ಮನೆಗೆ ಮರಳಿದ ಸುರೇಶ್, ವಿಡಿಯೋ ರೆಕಾರ್ಡ್ ಮಾಡಿ ಬದುಕು ಅಂತ್ಯಗೊಳಿಸಿದ್ದಾನೆ. ಸುರೇಶ್ ಮೊಬೈಲ್ ಫೋನ್‌ನಲ್ಲಿ ಈ ವಿಡಿಯೋ ಪತ್ತೆಯಾಗಿದೆ. 

ಸುರೇಶ್ ಮೊಬೈಲ್ ಫೋನ್‌ನಲ್ಲಿ ಪತ್ತೆಯಾದ ವಿಡಿಯೋದಲ್ಲಿ ಏನಿದೆ?
ಮನೆಗೆ ಮರಳಿದ ಸುರೇಶ್ ಸಥಾದಿಯಾ ಕಣ್ಣೀರಿಟ್ಟಿದ್ದಾನೆ. ಕೆಲ ವರ್ಷಗಳಿಂದ ಪತ್ನಿಯ ಕಿರುಕುಳ ಸಹಿಸಿಕೊಂಡು ಬಂದಿದ್ದೇನೆ. ಆದರೆ ಇನ್ನು ಸಾಧ್ಯವಾಗುತ್ತಿಲ್ಲ. ನನ್ನ ಅಗಲಿಕೆಗೆ ಜೀವಮಾನದ ಉದ್ದಕ್ಕೂ ಪತ್ನಿಗೆ ಪಾಠವಾಗಬೇಕು. ನನ್ನ ಪತ್ನಿ ನನಗೆ ಮೋಸ ಮಾಡಿದ್ದಾಳೆ. ಆಕೆ ಕಾರಣದಿಂದಲೇ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಆಕೆ ಯಾವತ್ತಿಗೂ ನನ್ನವಳು, ನನ್ನ ಮಕ್ಕಳ ಹೆತ್ತವಳು. ಆದರೆ ಆಕೆ ಮಾತ್ರ ನನಗೆ ಮೋಸ ಮಾಡಿದ್ದಾಳೆ. ಮದುವೆ ಬಳಿಕ ಕುಟುಂಬಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟಿದೆ. ಎಲ್ಲರ ವಿರೋಧದ ನಡುವೆಯೂ ಪತ್ನಿ ಮಕ್ಕಳ ಪರ ನಿಂತು ಜೀವನ ಸಾಗಿಸಿದ್ದೇನೆ. ಆದರೆ ಕೊನೆಗೆ ನನಗೆ ದಕ್ಕಿದ್ದು ಮೋಸ ಮಾತ್ರ ಎಂದು ಕೊನೆಯ ಮಾತುಗಳನ್ನಾಡಿದ್ದಾನೆ.

ವಿಡಿಯೋದಲ್ಲಿ ಹಲವು ನಿಮಿಷಗಳ ಕಾಲ ಸುರೇಶ್ ಸಥಾದಿಯಾ ಕಣ್ಣೀರಿಟ್ಟಿದ್ದಾನೆ. ನಿಯಂತ್ರಿಸಲು ಸಾಧ್ಯವಾಗದೇ ಒದ್ದಾಡಿದ್ದಾನೆ. ಕೊನೆಗೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಪತ್ನಿ ಮೊಬೈಲ್ ಫೋನ್ ಸೇರಿದಂತೆ ಇತರ ಕೆಲ ದಾಖಲೆ ವಶಪಡಿಸಿಕೊಂಡು ತನಿಖೆ ಮುಂದುವರಿಯುತ್ತಿದೆ.

ಅತುಲ್ ಸುಭಾಷ್ ಹಾಗೂ ಪುನೀತ್ ಖುರಾನ ಘಟನೆಗಳು ಇದೇ ಕಾರಣಕ್ಕಾಗಿ ನಡೆದಿದೆ. ಮಹಿಳೆಯರ ಸುರಕ್ಷತೆ, ಅನುಕೂಲಕ್ಕಾಗಿ ಇರುವ ಕಾನೂನನ್ನೇ ಬಳಸಿಕೊಂಡು ಕಿರುಕುಳ ನೀಡಲಾಗಿದೆ ಅನ್ನೋ ಆರೋಪವನ್ನು ಇಬ್ಬರು ಮೃತರು ಮಾಡಿದ್ದಾರೆ. ಈ ಪ್ರಕರಣ ಭಾರತದ ಕಾನೂನು ವ್ಯವಸ್ಥೆ ಮೇಲೆ ಪ್ರಶ್ನೆ ಎತ್ತಿದೆ. ವ್ಯವಸ್ಥೆಯಲ್ಲಿ ಈಜಾಡಲು ಸಾಧ್ಯವಾಗದೆ ಬದುಕು ಅಂತ್ಯಗೊಳಿಸಿದ ಘಟನೆಗಳು ಹೆಚ್ಚಾಗುತ್ತಿದೆ.

ಸೂಚನೆ:
ಯಾವುದೇ ಕ್ಷಣದಲ್ಲಿ ಯಾವುದೇ ಸಂದರ್ಭದಲ್ಲೂ ದಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಆಪ್ತ ಸಹಾಯವಾಣಿಗಳು ಲಭ್ಯವಿದೆ. ಆಪ್ತರ ಜೊತೆ ಮಾತನಾಡಿ ಸಮಸ್ಯೆ ಹಂಚಿಕೊಳ್ಳಿ. ಇಲ್ಲವಾದರೆ ಸಹಾಯವಾಣಿಗೆ ಕರೆ ಮಾಡಿ. 


ವಿಚ್ಚೇದನ ಗಲಾಟೆ ಉದ್ಯಮದಲ್ಲೂ ಕಲಹ: ಸಾವಿಗೆ ಶರಣಾದ ಬ್ಯುಸಿನೆಸ್‌ ಮ್ಯಾನ್