* ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಕೋಲ್ಡ್ ವಾರ್..! * ಜಯಕರ್ನಾಟಕ ಸಂಘಟನೆ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಆರೋಪ* ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈ ನಿಂದ ಕೊಲೆಗೆ ಸ್ಕೆಚ್ ಎಂಬ ವದಂತಿ

ಬೆಂಗಳೂರು(ಜೂ.12): ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಕೋಲ್ಡ್ ವಾರ್ ಆರಂಭವಾಗಿದ್ದು, ಇದರ ಬೆನ್ನಲ್ಲೇ ಜಯಕರ್ನಾಟಕ ಸಂಘಟನೆ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಆರೋಪ ಕೇಳಿ ಬಂದಿದೆ. ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈ ನಿಂದ ಕೊಲೆಗೆ ಸ್ಕೆಚ್ ಎಂಬ ವದಂತಿ ಹಬ್ಬಿದೆ. ಹೀಗಿದ್ದರೂ ಮನ್ಮಿತ್ ರೈ ತಾನು ಬ್ಯುಸಿನೆಸ್ ವಿಚಾರವಾಗಿ ವಿದೇಶದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. 

ಇನ್ನೊಂದೆಡೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗುಣರಂಜನ್ ಶೆಟ್ಟಿಗೆ ಮನ್ಮಿತ್ ರೈನಿಂದ ಜೀವ ಬೆದರಿಕೆಯಿದೆ. ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಒಂದು ಕಾಲದಲ್ಲಿ ಗುಣರಂಜನ್ ಶೆಟ್ಟಿ ಹಾಗೂ ಮುನ್ಮಿತ್ ರೈ ಇಬ್ಬರೂ ಮುತ್ತಪ್ಪ ರೈ ಆಪ್ತವಲಯದಲ್ಲಿಯೇ ಗುರುತಿಸಿಕೊಂಡಿದ್ದರು. ಇದೀಗ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗುತ್ತಿದೆ.

ಮನ್ಮಿತ್ ರೈ ಹೇಳಿದ್ದೇನು?

ತಮ್ಮ ವಿರುದ್ಧ ಕೇಳಿ ಬವಂದಿರುವ ಆರೋಪದ ಬಗ್ಗೆ ಮಾತನಾಡಿರುವ ಮನ್ಮಿತ್ ರೈ, ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಎಂಬ ವದಂತಿಗಳು ಬರ್ತಾ ಇವೆ. ಇದು ಎಷ್ಟು ಸತ್ಯ ಎಂಬುದನ್ನ ಪೊಲೀಸರು ತನಿಖೆ ಮಾಡ್ತಾರೆ. ಆದರೆ ಈ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರ್ತಾ ಇದೆ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ತನಿಖೆ ಆಗ್ತಾ ಇದ್ರೆ ಯಾರ ಹೆಸರು ಇದೆಯೋ ಅದು ಹೊರಗೆ ಬರುತ್ತೆ. ಆದರೆ ಅದಕ್ಕೂ ಮೊದಲೇ ನನ್ನ ಹೆಸರು ಯಾಕ್ ಬಳಸ್ತಾ ಇದ್ದಾರೊ ಗೊತ್ತಿಲ್ಲ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ್ ಸ್ಟೇಷನ್ ನಲ್ಲೂ ಎಫ್ ಐ ಆರ್ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಲ್ಲಿ ಇಲ್ಲದೆ ಇರುವಾಗಲೂ ಯಾಕೆ ನನ್ನ ವಿರುದ್ದ ಆರೋಪ ಬರುತ್ತಿದೆ. ಏನು ಇಲ್ಲದೆ ಮನ್ಮಿತ್ ರೈರಿಂದ ಸಂಚು ನಡೆಯುತ್ತಿದೆ ಹೇಗ್ ಹೇಳ್ತಾ ಇದ್ದಾರೆಂದು ಗೊತ್ತಾಗ್ತಾ ಇಲ್ಲ ಎಂದಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಸದ್ದು ಮಾಡಿದ್ದ ಮುತ್ತಪ್ಪ ರೈ ಅಪ್ತ ಬಳಗದ ಗಲಾಟೆ ನಡೆದಿತ್ತು. ಗುಣರಂಜನ್ ಶೆಟ್ಟಿ ಹಾಗೂ ಮನ್ಮಿತ್ ರೈ ಇಬ್ಬರು ಮುತ್ತಪ್ಪ ರೈ ಜೊತೆ ಇದ್ದರು. ಮನ್ಮಿತ್ ರೈ ಮುತ್ತಪ್ಪ ರೈ ಹತ್ತಿರದ ಸಂಬಂಧಿಯಾಗಿದ್ದರೆ, ಇತ್ತ ಗುಣರಂಜನ್ ಶೆಟ್ಟಿ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. 

ಇನ್ನು ಕೆಲ ಸಮಯದ ಹಿಂದೆ ಮನ್ಮಿತ್ ರೈ, ಮುತ್ತಪ್ಪ ರೈ ಜೊತೆಯಿಂದ ಹೊರಬಂದಿದ್ದ. ಆದರೀಗ ಕೆಳಿ ಬಂದ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ವಿಚಾರ ಮತ್ತೆ ಭಾರೀ ಸದ್ದು ಮಾಡುತ್ತಿದೆ. 

"