Asianet Suvarna News Asianet Suvarna News

Life Threatening to Woman: ಪಟಾಕಿ ಗನ್‌ ತೋರಿಸಿ ಸರ ಕದ್ದವನ ಬಂಧನ

*  ಮನೆಗೆ ದಿಢೀರ್‌ ನುಗ್ಗಿ ಗೃಹಿಣಿಯನ್ನು ಬೆದರಿಸಿ ದರೋಡೆ
*  ಉಪ್ಪಿನಂಗಡಿ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, 
*  ಮಾನಭಂಗ ಯತ್ನ, ಕೊಲೆ ಯತ್ನ ಪ್ರಕರಣ ದಾಖಲು
 

Accused Arrested for Theft Gold Chain in Bengaluru grg
Author
Bengaluru, First Published Dec 17, 2021, 10:23 AM IST

ಬೆಂಗಳೂರು(ಡಿ.17):  ಮನೆಯೊಂದಕ್ಕೆ ದಿಢೀರ್‌ ನುಗ್ಗಿ ಗೃಹಿಣಿಗೆ ನಕಲಿ ಪಿಸ್ತೂಲ್‌ ತೋರಿಸಿ ಬೆದರಿಕೆ(Threat) ಹಾಕಿ ಮಾಂಗಲ್ಯ ದೋಚಿ ಪರಾರಿಯಾಗಿದ್ದ ಕ್ಯಾಬ್‌ ಚಾಲಕನೊಬ್ಬನನ್ನು ಕೃತ್ಯ ನಡೆದ ಕೆಲವೇ ತಾಸಿನಲ್ಲೇ ಗಂಗಮ್ಮನಗುಡಿ ಠಾಣೆ ಪೊಲೀಸರು(Police) ಸೆರೆ ಹಿಡಿದಿದ್ದಾರೆ. ಸಿಂಗಾಪುರ ಲೇಔಟ್‌ ನಿವಾಸಿ ಲಿಂಗಪ್ಪ ಬಂಧಿತ. ಆರೋಪಿಯಿಂದ(Accused) 5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಮಾಂಗಲ್ಯ, ಕಾರು ಹಾಗೂ ನಕಲಿ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ. ಗಂಗಮ್ಮನಗುಡಿ ಹತ್ತಿರದ ನಂದಿನಿ ಎಂಬುವರನ್ನು ಬೆದರಿಸೆ ಆರೋಪಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯನಪುರ ಜಿಲ್ಲೆಯ ಲಿಂಗಪ್ಪ, ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿ ಜತೆ ಸಿಂಗಾಪುರ ಲೇಔಟ್‌ನಲ್ಲಿ ನೆಲೆಸಿದ್ದ. ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ, ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ಇದರಿಂದ ಬೇಸತ್ತ ಆತ, ಜನರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಲು ಮುಂದಾಗಿದ್ದ. ಅಂತೆಯೇ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ನಂದಿನಿ ಅವರ ಮನೆಗೆ ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಏಕಾಏಕಿ ಆರೋಪಿ ನುಗ್ಗಿದ್ದಾನೆ. ಆ ವೇಳೆ ತಮ್ಮ ಮೂರು ವರ್ಷದ ಮಗು ಜತೆ ನಂದಿನಿ ಇದ್ದರು. ಆಗ ಅವರಿಗೆ ಪಿಸ್ತೂಲ್‌ ತೋರಿಸಿ ಬೆದರಿಸಿದ ಆತ, ನಂದಿನಿ ಅವರಿಂದ ಮಾಂಗಲ್ಯ ಕಸಿದು ಪರಾರಿಯಾಗಿದ್ದ. ಈ ಬಗ್ಗೆ ಗಂಗಮ್ಮನಗುಡಿ ಠಾಣೆಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಘಟನಾ ಸ್ಥಳ ವ್ಯಾಪ್ತಿಯ ಸಿಸಿಟಿವಿ(CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಕ್ಯಾಬ್‌ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

CCB Operation : ಸಿಎಂ ಕಚೇರಿ ನಕಲಿ ಅಧಿಕಾರಿ ಬಲೆಗೆ, ಈತ ಬಾಳೆಕಾಯಿ ವ್ಯಾಪಾರಿ!

ಪಟಾಕಿ ಹೊಡೆಯಲು ಬಳಸುವ ಪಿಸ್ತೂಲ್‌ ಅನ್ನು ಅಸಲಿ ಎಂದು ತೋರಿಸಿ ಬೆದರಿಸಿದ್ದ. ಹಣಕಾಸು ಸಮಸ್ಯೆಯಿಂದ ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌, ಮಹಿಳಾ ಸಿಬ್ಬಂದಿಗೆ ಹಲ್ಲೆ: 10 ಮಂದಿ ಬಂಧನ

ಉಪ್ಪಿನಂಗಡಿ: ಪಿಎಫ್‌ಐ(PFI) ಹಾಗೂ ಎಸ್‌ಡಿಪಿಐ(SDPI) ಸಂಘಟನೆಗಳ ಕಾರ್ಯಕರ್ತರು ಉಪ್ಪಿನಂಗಡಿಯಲ್ಲಿ ಇತ್ತೀಚೆಗೆ ನಡೆಸಿದ ಪ್ರತಿಭಟನೆಯ(Protest) ವೇಳೆ ಮಹಿಳಾ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಮಾನಭಂಗ ಯತ್ನ , ಕೊಲೆ ಯತ್ನ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹತ್ತು ಮಂದಿ ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಉಪ್ಪಿನಂಗಡಿಯ ಹಳೆಗೇಟು ಎಂಬಲ್ಲಿ ಹಿಂದೂ ಸಮುದಾಯದ ಮೀನು ಮಾರಾಟದ ಅಂಗಡಿಗೆ ನುಗ್ಗಿ ತಲವಾರು ದಾಳಿ ನಡೆಸಿ ಮೂವರನ್ನು ಕೊಲೆಗೈಯಲು ಯತ್ನಿಸಿದ ಪ್ರಕರಣದಲ್ಲಿ ಲಭಿಸಿದ ಮಾಹಿತಿಯನ್ವಯ ಪೊಲೀಸರು ಉಭಯ ಸಂಘಟನೆಗಳ ಮುಖಂಡರಾದ ಹಮೀದ್‌ ಮೆಜೆಸ್ಟಿಕ್‌, ಝಕಾರಿಯಾ ಕೊಡಿಪ್ಪಾಡಿ, ಮುಸ್ತಾಫÜ ಎಂಬ ಮೂವರನ್ನು ಗಲಭೆಯ ದಿನ ರಾತ್ರಿಯೇ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ದಿನವಿಡೀ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಓರ್ವ ಮುಖಂಡನನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾದರು. ಉಳಿದಿಬ್ಬರು ಮುಖಂಡರ ಬಿಡುಗಡೆಗೆ ಪ್ರತಿಭಟನೆಯನ್ನು ಮುಂದುವರಿಸಿ ರಾತ್ರಿ 9 ಗಂಟೆ ಸುಮಾರಿಗೆ ಮತ್ತೆ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಠಾಣೆಗೆ ನುಗ್ಗಲು ಯತ್ನಿಸಿದರೆಂದೂ, ತಡೆಯಲು ಬಂದ ಮಹಿಳಾ ಎಸ್‌ಐ ಹಾಗೂ ಮಹಿಳಾ ಸಿಬ್ಬಂದಿ ಎಂಬವರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರವನ್ನು ಹರಿದು ಹಾಕಿ ಮಾನಭಂಗ ಮಾಡಿರುವುದಲ್ಲದೆ, ಕೊಲೆ ಯತ್ನ ನಡೆಸಿದ್ದಾರೆಂದೂ, ತಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿರುವುದಾಗಿಯೂ ದೂರಿನಲ್ಲಿ ಆಪಾದಿಸಿದ್ದಾರೆ.

ಘಟನಾವಳಿಯ ದೃಶ್ಯಾವಳಿಯನ್ನು ಪರಿಶೀಲಿಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಮೊಹಮ್ಮದ್‌ ತಾಹೀರ್‌, ಸ್ವಾದಿಕ್‌, ಅಬ್ದುಲ್‌ ಮುಬಾರಕ್‌, ಅಬ್ದುಲ್‌ ಶರೀನ್‌, ಮೊಹಮ್ಮದ್‌ ಜಾಹೀರ್‌, ಸುಜೀರ್‌ ಮಹಮ್ಮದ್‌ ಫೈಜಲ್‌, ಮೊಹಮ್ಮದ್‌ ಹನೀಫ್‌, ಎನ್‌ ಕಾಸೀಮ್‌, ಮೊಹಮ್ಮದ್‌ ಆಸೀಫ್‌, ತುಪೈಲ್‌ ಮಹಮ್ಮದ್‌ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Jewellery Shop Theft : ಚಿನ್ನದಂಗಡಿಗೆ ಕನ್ನ ಹಾಕಿಸಿದ್ದ ವ್ಯಾಪಾರಿಗಳು! 9 ಮಂದಿ ಸೆರೆ

ಬಿಗಿ ಭದ್ರತೆ: 

ಘಟನೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಪೊಲೀಸ್‌ ಭದ್ರತೆಯನ್ನು(Police Security) ಮುಂದುವರಿಸಲಾಗಿದ್ದು, ಮೀನು ಮಾರಾಟ ಕೇಂದ್ರಕ್ಕೆ ದಾಳಿ ನಡೆಸಿ ಕೊಲೆ ಯತ್ನ ನಡೆಸಿದ ತಂಡದ ಓರ್ವ ಆರೋಪಿಯ ವಿಚಾರಣೆ ಮುಂದುವರಿದಿದ್ದು, ಆತ ನೀಡಿದ ಮಾಹಿತಿಯಾಧಾರದಲ್ಲಿ ಉಳಿದ ಆರೋಪಿಗಳ ಬಂಧನವನ್ನು ಅತಿ ಶೀಘ್ರದಲ್ಲಿ ನಡೆಸುವ ವಿಶ್ವಾಸವನ್ನು ಪೊಲೀಸ್‌ ಇಲಾಖೆ ವ್ಯಕ್ತಪಡಿಸಿದೆ.

ಈ ಮಧ್ಯೆ ಪೊಲೀಸರ ಗಮನ ಡಿ.14ರ ಗಲಭೆಯ ಆರೋಪಿಗಳನ್ನು ಬಂಧಿಸುವತ್ತ ಕೇಂದ್ರಿಕೃತವಾಗಿದ್ದು, ಬಹುತೇಕ ಆರೋಪಿಗಳು ಲಾಠಿಯೇಟಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಬಂಧನ ಕಾರ್ಯ ಒಂದಷ್ಟು ಸುಲಲಿತವಾಗುವ ವಿಶ್ವಾಸ ಪೊಲೀಸ್‌ ಇಲಾಖೆಯಲ್ಲಿ(Police Department) ಮೂಡಿದೆ.
 

Follow Us:
Download App:
  • android
  • ios