Asianet Suvarna News Asianet Suvarna News

ಯಾದಗಿರಿಯಲ್ಲಿ ನಕಲಿ ಬೀಜ ಮಾರಾಟ ದಂಧೆ: ಖದೀಮನ ಹೆಡೆಮುರಿ ಕಟ್ಟಿದ ಪೊಲೀಸರು

*  ಬೀಜ ಖರೀದಿ ಮಾಡುವ ಮುನ್ನ ರೈತರೇ ಹುಷಾರ್
*  ನಕಲಿ ಬೀಜ ಮಾರಾಟ ದಂಧೆ 
*  ರೈತರೇ ಸರಿಯಾಗಿ ನೋಡಿ ಬೀಜ ಖರಿದೀಸಿ
 

Accused Arrested For Fake Seed Racket in Yadgir grg
Author
Bengaluru, First Published Jun 22, 2022, 11:03 AM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಜೂ.22):  ಮುಂಗಾರು ಹಂಗಾಮಿನಲ್ಲಿ ರೈತರ ಕೃಷಿ ಚಟುವಟಿಕೆ ಗರಿಗೆದರಿವೆ. ರೈತರು ಈ ಬಾರಿ ಉತ್ತಮ ಬೆಳೆ ಬೆಳೆಯಲು ಭೂಮಿ ಹದ ಮಾಡಿ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ರೈತರು ಬೀಜ ಖರೀದಿ ಮಾಡಬೇಕೆಂದರೆ ರೈತರಿಗೆ ಆತಂಕವಾಗಿದೆ. ಯಾಕಂದ್ರೆ ಯಾದಗಿರಿ ಜಿಲ್ಲೆಯಲ್ಲಿ ನಕಲಿ ಬೀಜ ಹಾಗೂ ಅವಧಿ ಮಿರಿದ ಬೀಜ ಮಾರಾಟ ದಂಧೆ ನಡೆಯುತ್ತಿದೆ. ಗುಣಮಟ್ಟದ ಕಂಪನಿಯ ಬೀಜ ಇದ್ದು, ಉತ್ತಮ ಇಳುವರಿ ಬರುತ್ತದೆ ಎಂದು ಅನಧಿಕೃತ ಬೀಜ ಮಾರಾಟಗಾರರು ಹಳ್ಳಿಗೆ ತೆರಳಿ ರೈತರನ್ನು ನಂಬಿಸಿ ಮೋಸ ಮಾಡುವ ಜಾಲ ಈಗ ಪತ್ತೆಯಾಗಿದೆ.

ಅನ್ನದಾತನಿಗೆ ಕನ್ನ ಹಾಕುತ್ತಿರುವ ನಕಲಿ ಕಂಪನಿಗಳು

ರೈತರು ಅಪ್ಪಿ ತಪ್ಪಿ ಅನಧಿಕೃತ ಮಾರಾಟಗಾರರಿಂದ ಬೀಜ ಖರೀದಿ ಮಾಡಿದರೆ ಮೋಸ ಹೋಗುವದು ಗ್ಯಾರಂಟಿಯಾಗಿದೆ. ಅತ್ತ ಹಣವು ಇಲ್ಲ, ಇತ್ತ ಬೆಳೆಯುವ ಬೆಳೆಯದೇ ಅನ್ನದಾತರು ಬೀದಿ ಪಾಲಾಗುವಂತಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ,  ಶಹಾಪುರ, ಗುರುಮಿಠಕಲ್, ವಡಗೇರಾ ಸೇರಿದಂತೆ ಮೊದಲಾದ ಕಡೆ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯಲ್ಲಿ ರೈತರು  ಬಿತ್ತನೆ ಮಾಡುವ ಗುರಿ ಹೊಂದಿದ್ದು, ಇದನ್ನೆ ಬಂಡವಾಳ ಮಾಡಿಕೊಂಡ ನಕಲಿ ಕಂಪನಿಗಳು ರೈತರಿಗೆ ಮೋಸ ಮಾಡಲು ಮುಂದಾಗಿದ್ದಾವೆ. ಈಡೀ ಜಗತ್ತಿಗೆ ಅನ್ನ ನೀಡುವ ಅನ್ನದಾತನಿಗೆ ಕನ್ನ ಹಾಕುವ ಕೆಲಸವನ್ನು ಕೆಲವು ನಕಲಿ ಕಂಪನಿಗಳು ಮಾಡುತ್ತಿವೆ. ಇದರಿಂದಾಗಿ ರೈತಾಪಿ ವರ್ಗವನ್ನು ಆತಂಕಕ್ಕೀಡು ಮಾಡಿದೆ.

ಕಲಬುರಗಿ: ನಕಲಿ ಹೆಸರು ಬೀಜದ ದಂಧೆಗೆ ರೈತ ಪರೇಶಾನ್‌..!

ಕಡಿಮೆ ಬೆಲೆ ಅಂತ ಬೀಜ ಖರಿದಿಸಿದ್ರೆ ಯಾಮಾರೋದು ಪಕ್ಕಾ

ಈಗ ರೈತರಿಗೆ ಸರಯಾದ ಸಮಯಕ್ಕೆ ಬಿತ್ತನೆ ಬೀಜ ಸಿಗುವುದು ಭಾರಿ ಕಸರತ್ತಿನ ಕೆಲಸವಾಗಿದೆ. ಯಾಕಂದ್ರೆ ಒಳ್ಳೆಯ ಕಂಪನಿಯ ಬೀಜ ಬಿತ್ತಿದ್ರೆ ಒಳ್ಳೆಯ ಫಸಲು ಬರುವ ನಿರೀಕ್ಷೆಯಲ್ಲಿ ರೈತರಿರ್ತಾರೆ. ಅದಕ್ಕಾಗಿ ಅಂದ್ರೆ ಬಿತ್ತನೆ ಬೀಜಕ್ಕಾಗಿ ಅಲೆಯುವ ಪರಿಸ್ಥಿತಿ ರೈತರು ಸಮಸ್ಯೆಯನ್ನು ಎದರಿಸಿರ್ತಾರೆ. ಗ್ರಾಮೀಣ ಭಾಗದ ರೈತರ ಮುಗ್ಧತನವನ್ನೇ ಬಂಡವಾಳ ಮಾಡಿಕೊಂಡ ಕೆಲವು ನಕಲಿ ಕಂಪನಿಗಳು ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಒಂದು ವೇಳೆ ನಿಮ್ಮ ಹಳ್ಳಿಗೆ ಬಂದು ನಕಲಿ ಕಂಪನಿಯ ಬಿತ್ತನೆ ಬೀಜವನ್ನು ಕಡಿಮೆ ಬೆಲೆಗೆ ಸೀಗುತ್ತವೆ ಅಂತಹ ತಗೊಂಡ್ರೆ ಯಾಮಾರೋದು ಮಾತ್ರ ಪಕ್ಕಾ.

ರೈತರೇ ನಕಲಿ ಕಂಪನಿಗಳ ಬಣ್ಣದ ಮಾತಿಗೆ ಮರಳಾಗಬೇಡಿ

ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಅಕ್ಷರಸ್ಥರು ಇಲ್ಲ. ಯಾವ ಕಂಪನಿಯ ಬಿತ್ತನೆ ಬೀಜ ಅಂತಲೂ ಗೊತ್ತಿರುವುದಿಲ್ಲ. ಇದು  ಒಳ್ಳೆಯದಿದೆ, ತಗೊಳ್ಳಿ ಅಂತ ಯಾರಾದ್ರು ಹೇಳಿದ್ರೆ ಅದನ್ನೆ ನಂಬುವ ಜನರಿದ್ದಾರೆ. ಹಾಗಾಗಿ ಅನಧಿಕೃತ ಮಾರಾಟಗಾರರ ಬಣ್ಣದ ಬಣ್ಣದ ಮಾತಿಗೆ ಮರಳಾಗಿ ಬೀಜ ಖರೀದಿ ಮಾಡದೇ ಅನ್ನದಾತರು ಎಚ್ಚರ ವಹಿಸುವುದು ಅಗತ್ಯವಾಗಿದೆ.

ಹತ್ತಿ ಬೀಜಕ್ಕೆ ಡಿಮ್ಯಾಂಡ್, ನಕಲಿ ಹಾವಳಿ 

ಮುಂಗಾರು ಬಿತ್ತನೆ ಚುರುಕು ಪಡೆದುಕೊಂಡ ಹಿನ್ನೆಲೆ ರೈತರು ಹತ್ತಿ ಬೀಜ ಬಿತ್ತನೆ ಮಾಡುತ್ತಿದ್ದು, ಯಾದಗಿರಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಹತ್ತಿ  ಬೀಜಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೊರರು ನಕಲಿ ಹಾಗೂ ಅವಧಿ ಮುಗಿದ ಹತ್ತಿ ಬೀಜ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡಲು ಮುಂದಾಗಿದ್ದಾರೆ.

ನಕಲಿ ಬೀಜ ಸಂಗ್ರಹ, ಕ್ರಮಕ್ಕೆ ಕೃಷಿ ಸಚಿವರ ಹಿಂದೇಟು: ತಂಗಡಗಿ

ಕೃಷಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ನಕಲಿ ಬೀಜ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬೂಳದ ಆಂಧ್ರ ಕ್ಯಾಂಪನ್ ನಲ್ಲಿ ನಕಲಿ ಹಾಗೂ ಅವಧಿ ಮಿರಿದ ಬೀಜ ಮಾರಾಟ ಮಾಡಲು ಸಂಗ್ರಹಿಸಿಡಲಾಗಿತ್ತು. ಈ ವೇಳೆ ಖಚಿತ ಮಾಹಿತಿ ಮೆರೆಗೆ ಅಧಿಕಾರಿಗಳು ದಾಳಿ ನಡೆಸಿ 60 ಸಾವಿರ ಮೌಲ್ಯದ 80 ನಕಲಿ ಹತ್ತಿ ಬೀಜದ ಪ್ಯಾಕೆಟ್ ಗಳನ್ನು ಜಪ್ತಿ ಮಾಡಿ,ಆರೋಪಿ ಶ್ರೀನಿವಾಸರಾವ್ ಅವರನ್ನು ಬಂಧಿಸಲಾಗಿದೆ.

ರೈತರೇ ಸರಿಯಾಗಿ ನೋಡಿ ಬೀಜ ಖರಿದೀಸಿ

ಈ ಬಗ್ಗೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಪ್ರತಿಕ್ರಿಯೆ ನೀಡಿದ್ದು, ಅವಧಿ ಮುಗಿದ ಹಾಗೂ ನಕಲಿ ಬೀಜ ಸಂಗ್ರಹ ಮಾಹಿತಿ ತಿಳಿದು ಭೀಮರಾಯನಗುಡಿ ಪೊಲೀಸರು ದಾಳಿ ನಡೆಸಿ ಹತ್ತಿ ಬೀಜ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ರೈತರು ಸರಿಯಾದ ಬೀಜ ನೋಡಿ ಖರೀದಿ ಮಾಡಬೇಕು. ಅಧಿಕೃತ ಮಾರಾಟಗಾರರಿಂದ ಬೀಜ ಖರೀದಿ ಮಾಡಬೇಕೆಂದಿದ್ದಾರೆ. ಕೃಷಿ ಹಾಗೂ ಭೀಮರಾಯಗುಡಿ ಪೊಲೀಸರು ದಾಳಿ ನಡೆಸಿ ಬೀಜ ಜಪ್ತಿ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
 

Follow Us:
Download App:
  • android
  • ios