ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಘಟನೆ, ದುಶ್ಚಟ ಬೇಡ ಅಂತಾ ಬುದ್ಧಿ ಹೇಳಿದ ತಂದೆಯನ್ನೇ ಕೊಂದ ಮಗ!
ಬುದ್ಧಿ ಮಾತು ಹೇಳಿದ ತಂದೆಯನ್ನೇ ಕೊಲೆ ಮಾಡಿದ ಪುತ್ರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಗಳರಪಾಳ್ಯದ ಬಾಲಾಜಿನಗರದ ನಿವಾಸಿ ಅಮಿತ್ ಬಂಧಿತನಾಗಿದ್ದು, ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆ ಚನ್ನಬಸವಯ್ಯ (61) ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಬೆಂಗಳೂರು (ಫೆ.19): ಬುದ್ಧಿ ಮಾತು ಹೇಳಿದ ತಂದೆಯನ್ನೇ ಕೊಲೆ ಮಾಡಿದ್ದ ಪುತ್ರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಗಳರಪಾಳ್ಯದ ಬಾಲಾಜಿನಗರದ ನಿವಾಸಿ ಅಮಿತ್ ಬಂಧಿತನಾಗಿದ್ದು, ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆ ಚನ್ನಬಸವಯ್ಯ (61) ಮೇಲೆ ಸೋಮವಾರ ಸಂಜೆ ಹಲ್ಲೆ ನಡೆಸಿ ಆತ ಕೊಂದಿದ್ದ. ಈ ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಯ ಮಾಜಿ ಸೈನಿಕ ಚನ್ನಬಸವಯ್ಯ ಕುಟುಂಬದ ಜತೆ ಬಾಲಾಜಿ ನಗರದಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಕಾವಲುಗಾರರಾಗಿದ್ದರು. ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಮಗ ಅಮಿತ್ ಕೆಲಸವಿಲ್ಲದೆ ಅಲೆಯುತ್ತಿದ್ದ. ವಿಪರೀತ ಮದ್ಯ ಹಾಗೂ ಮಾದಕ ವ್ಯಸನಿ ಸಹ ಆಗಿದ್ದ. ಹೀಗಾಗಿ ಮಗನಿಗೆ ಆಗಾಗಾ ಬೈದು ಚನ್ನಬಸವಯ್ಯ ಬುದ್ಧಿ ಮಾತು ಹೇಳುತ್ತಿದ್ದರು.
ಇದನ್ನೂ ಓದಿ: ಹಸುಗಳ್ಳತನಕ್ಕೆ ಎತ್ತಿದ ಕೈ, ಕದ್ದ ಹಸು ಕಾರಿನಲ್ಲಿ ಸಾಗಿಸುತ್ತಿದ್ದ ಭೂಪರು! ಫೈರೋಜ್ ಬೇಗ್, ಸೈಯದ್ ಬಂಧನ! ಕದ್ದಿದ್ದೆಷ್ಟು?
ಸೋಮವಾರ ಸಂಜೆ 5 ಗಂಟೆಯಲ್ಲಿ ಸಹ ಮಗನಿಗೆ ಬುದ್ಧಿ ಮಾತು ಹೇಳಿದ್ದಾರೆ. ಆಗ ತಂದೆ-ಮಗನ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೋಪಗೊಂಡ ಆರೋಪಿ, ತನ್ನ ತಂದೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಚನ್ನಬಸವಯ್ಯ ಅವರನ್ನು ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.