Asianet Suvarna News Asianet Suvarna News

ಜಡ್ಜ್‌ಗಳನ್ನು ನಿಂದಿಸಿದ ವಕೀಲನಿಗೆ ಜೈಲು; ಜಡ್ಜ್‌ಗಳು ಭ್ರಷ್ಟರು ಎಂದಿದ್ದಕ್ಕೆ 8 ದಿನ ನ್ಯಾಯಾಗ ಬಂಧನ

ವಕೀಲ ಕೆ.ಎಸ್‌. ಅನಿಲ್‌ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

8 days jail punishment for lawyer for calling judge as corrupted ash
Author
First Published Feb 9, 2023, 1:05 PM IST

ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ನ್ಯಾಯಾಂಗ ಹಾಗೂ ನ್ಯಾಯಮೂರ್ತಿಗಳ ವಿರುದ್ಧ ವೃಥಾ ಆರೋಪ ಮಾಡಿದ ಹಿನ್ನೆಲೆಯಲ್ಲಿ ವಕೀಲ ಕೆ.ಎಸ್‌. ಅನಿಲ್‌ ಅವರನ್ನು ಹೈಕೋರ್ಟ್‌ ಫೆಬ್ರವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಕೀಲ ಕೆ.ಎಸ್‌. ಅನಿಲ್‌ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಫೆಬ್ರವರಿ 2ರಂದು ಈ ಆದೇಶ ಹೊರಡಿಸಿದೆ. 

ಇದನ್ನು ಓದಿ: ಅಕ್ರಮವಾಗಿ ವಾಸ: ಬಾಂಗ್ಲಾ ಪ್ರಜೆಗೆ ಜಾಮೀನು ನೀಡಲು ಒಪ್ಪದ ಹೈಕೋರ್ಟ್‌

ಆರೋಪಿ ವಕೀಲ ನ್ಯಾಯಾಂಗ ನಿಂದನೆ ಎಸಗಿರುವುದು ಸಾಬೀತಾಗಿದೆ. ಇದರಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆದೇಶ ಹೊರಡಿಸದೆ ಅನ್ಯ ಮಾರ್ಗವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ಫೆಬ್ರವರಿ 10ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಲ್ಲಿರಿಸಿ ಮತ್ತೆ ಕೋರ್ಟ್‌ ಮುಂದೆ ಹಾಜರುಪಡಿಸಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿಗಳು ಹಾಗೂ ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ದೂರು ನೀಡಲಾಗಿದೆ. ಆ ನ್ಯಾಯಪೀಠಗಳನ್ನು ಹೊರತುಪಡಿಸಿ ಬೇರೆ ಪೀಠಕ್ಕೆ ತಮ್ಮ ಅರ್ಜಿಯನ್ನು ವರ್ಗಾಯಿಸಬೇಕು ಎಂದು ತಿಳಿಸಿ ವಿಚಾರಣೆ ವೇಳೆ ಆರೋಪಿ ಮೆಮೊ ಸಲ್ಲಿಸಿದ್ದರು. ಮೆಮೋದಲ್ಲಿ ಕೆಲ ಅವಹೇಳನಕಾರಿ ಹೇಳಿಕೆ ಉಲ್ಲೇಖಿಸಿದ್ದರಲ್ಲದೆ, ನ್ಯಾಯಾಲಯದ ಮುಂದೆ ಉಡಾಫೆಯ ವರ್ತನೆ ತೋರಿದ್ದಾರೆ. 

ಇದನ್ನೂ ಓದಿ: ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೆಹಿತನ ಇರಿದು ಕೊಂದ ಗೆಳೆಯ: ಒಟ್ಟಿಗೇ ಮದ್ಯ ಸೇವನೆ ವೇಳೆ ಜಗಳ

ನ್ಯಾಯಮೂರ್ತಿಗಳ ವಿರುದ್ಧವೇ ಆರೋಪ ಮಾಡಿರುವ ಆರೋಪಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವವಿಲ್ಲ ಎಂದೆನಿಸುತ್ತದೆ. ಖುದ್ದು ವಕೀಲರಾಗಿರುವ ಆರೋಪಿ ನಿರಂತರವಾಗಿ ವೃಥಾ ಆರೋಪ ಮಾಡುವ ಮೂಲಕ ನ್ಯಾಯಾಂಗದ ಘನತೆಗೆ ಕುಂದುಂಟಾಗುವಂತೆ ನಡೆದುಕೊಂಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದ ಹೈಕೋರ್ಟ್‌, ಆರೋಪಿಯನ್ನು ಫೆಬ್ರವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ವಕೀಲ ಅನಿಲ್‌ ಅವರಿಗೆ ಸಂಬಂಧಿಸಿದ ತಕರಾರು ಅರ್ಜಿಯೊಂದನ್ನು ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. 2019ರ ಜೂನ್‌ 18ರಂದು ಮೆಮೊ ಸಲ್ಲಿಸಿದ್ದ ವಕೀಲ, ಏಕ ಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳು ಭ್ರಷ್ಟರು ಎಂದು ಆರೋಪ ಮಾಡಿದ್ದರು. ಅಲ್ಲದೆ, ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳು ಭ್ರಷ್ಟನ್ಯಾಯಮೂರ್ತಿಗಳು ಎಂದು ಹೇಳಿಕೆ ನೀಡಿದ್ದರು. ಅದನ್ನು ಗಂಭಿರವಾಗಿ ಪರಿಗಣಿಸಿದ್ದ ವಿಭಾಗೀಯ ಪೀಠ, ವಕೀಲ ಅನಿಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾತಿಗೆ ಆದೇಶಿಸಿತ್ತು.

ಇದನ್ನೂ ಓದಿ: TUMAKURU: ಹಫ್ತಾ ವಸೂಲಿ ಆರೋಪ : ಪುಂಡರಿಂದ ವ್ಯಾಪಾರಿ ಮೇಲೆ ಹಲ್ಲೆ

Follow Us:
Download App:
  • android
  • ios