Asianet Suvarna News Asianet Suvarna News

ಭಾನುವಾರದಂದೇ ಮೂರು ವಂದೇ ಭಾರತ್ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ!

ಭಾನುವಾರ ನೈಋತ್ಯ ರೈಲ್ವೆ ವಲಯದ ಮೂಲಕ ಹಾದುಹೋಗುವ ಮೂರು ವಿಭಿನ್ನ ವಂದೇ ಭಾರತ್ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಯಾವುದೇ ಗಾಯಗಳಾಗದಿದ್ದರೂ ರೈಲಿನ ಗಾಜಿನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

3 Different Vande Bharat Trains Pelted With Stones at bengaluru rav
Author
First Published Mar 4, 2024, 1:37 PM IST

ಬೆಂಗಳೂರು (ಮಾ.4): ಭಾನುವಾರ ನೈಋತ್ಯ ರೈಲ್ವೆ ವಲಯದ ಮೂಲಕ ಹಾದುಹೋಗುವ ಮೂರು ವಿಭಿನ್ನ ವಂದೇ ಭಾರತ್ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಯಾವುದೇ ಗಾಯಗಳಾಗದಿದ್ದರೂ ರೈಲಿನ ಗಾಜಿನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಈ ಸಂಬಂಧ ಇದುವರೆಗೂ ಯಾರೋಬ್ಬರನ್ನು ಬಂಧಿಸಿಲ್ಲ ಎಂದು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ನ ಇನ್‌ಸ್ಪೆಕ್ಟರ್ ಜನರಲ್ ಕಮ್ ಪ್ರಿನ್ಸಿಪಲ್ ಚೀಫ್ ಸೆಕ್ಯುರಿಟಿ ಕಮಿಷನರ್ ಆರ್, ರಾಮ ಶಂಕರ್ ಪ್ರಸಾದ್ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ದುರದೃಷ್ಟವಶಾತ್, ಒಂದೇ ದಿನದಲ್ಲಿ ಮೂರು ಘಟನೆಗಳು ನಡೆದಿವೆ. ನಮ್ಮ ಪೊಲೀಸರು ವಿವಿಧ ಸ್ಥಳಗಳಿಗೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಮೂರು ಘಟನೆಗಳಲ್ಲಿ ಎರಡು ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಸಂಭವಿಸಿವೆ.

ವಂದೇ ಭಾರತ್‌ ರೈಲಿಗೆ ಮತ್ತೆ ಕಲ್ಲೆಸೆತ! ಮೂರ್ನಾಲ್ಕು ಕಿಟಕಿಗಳ ಗಾಜು ಪೀಸ್‌ಪೀಸ್‌

ಬೆಳಗ್ಗೆ 6.15ಕ್ಕೆ ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20661) ಬೆಂಗಳೂರು ರೈಲ್ವೆ ವಿಭಾಗದ ಚಿಕ್ಕಬಾಣಾವರ ರೈಲು ನಿಲ್ದಾಣವನ್ನು ದಾಟಿದಾಗ ಮೊದಲ ಘಟನೆ ನಡೆದಿದೆ. ಕೋಚ್ C6 ನ 40, 41 ಮತ್ತು 42 ಸೀಟ್‌ಗಳಲ್ಲಿರುವ ಕಿಟಕಿಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಎರಡನೇ ಘಟನೆ ಮಧ್ಯಾಹ್ನ 3.20 ರ ಸುಮಾರಿಗೆ ಧಾರವಾಡ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20662) ಸಂಚರಿಸುತ್ತಿದ್ದ ವೇಳೆ ಸಂಭವಿಸಿದೆ. ಮೈಸೂರು ವಿಭಾಗದ ಹಾವೇರಿ ಮತ್ತು ಹರಿಹರ ರೈಲು ನಿಲ್ದಾಣದ ಸಿ 5 ಕೋಚ್‌ನ ಕಿಟಕಿ ಗಾಜುಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಮೂರನೇ ಘಟನೆ ಮೈಸೂರು-ಎಂಜಿಆರ್ ಸೆಂಟ್ರಲ್ ವಂದೇ ಭಾರತ್ ನಲ್ಲಿ ಬೆಂಗಳೂರು ವಿಭಾಗದ ಕುಪ್ಪಂ ನಿಲ್ದಾಣದ 200 ಮೀಟರ್ ಮೊದಲು ಸಂಜೆ 4.30 ಕ್ಕೆ ಸಂಭವಿಸಿದೆ. "ಇಂಜಿನ್‌ನ ಬಲಭಾಗದಿಂದ, 40, 41 ಮತ್ತು 42 ಆಸನಗಳಿರುವ C4 ಕೋಚ್‌ನಲ್ಲಿ ದುಷ್ಕರ್ಮಿಗಳು ಗಾಜಿನ ಫಲಕಗಳನ್ನು ಹಾನಿಗೊಳಿಸಿದರು" ಎಂದು ಸಿಂಗ್ ಹೇಳಿದರು.

ಸೆಕ್ಷನ್ 147 (ರೈಲ್ವೆ ಹಳಿಯಲ್ಲಿ ಅತಿಕ್ರಮಣ) ಮತ್ತು ಸೆಕ್ಷನ್ 153 (ಉದ್ದೇಶಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದರು.

40000 ಬೋಗಿಗಳಿಗೆ ವಂದೇ ಭಾರತ್‌ನ ಹೈಟೆಕ್‌ ಸ್ಪರ್ಶ: 3 ಆರ್ಥಿಕ ರೈಲ್ವೆ ಕಾರಿಡಾರ್‌ಗೆ ನಿರ್ಧಾರ

ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ ಪ್ರಕರಣಗಳಲ್ಲಿ ಕಳೆದ ವರ್ಷ ಜುಲೈನಿಂದ ಡಿಸೆಂಬರ್ ವರೆಗೆ 45 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದರು. ಇವರಲ್ಲಿ ಸುಮಾರು 70 ಪ್ರತಿಶತ ಅಪ್ರಾಪ್ತ ವಯಸ್ಕರು ಇವರು ಇದನ್ನು ಮೋಜಿಗಾಗಿ ಮಾಡುತ್ತಾರೆ.

ನಾವು ಅವರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಸ್ತಾಂತರಿಸುತ್ತೇವೆ ಮತ್ತು ಅವರು ತೆಗೆದುಕೊಳ್ಳಬೇಕಾದ ಕ್ರಮವನ್ನು ನಿರ್ಧರಿಸುತ್ತಾರೆ. ವಯಸ್ಕರ ವಿಷಯದಲ್ಲಿ, ನಾವು ಅವರನ್ನು ರೈಲ್ವೆ ಕಾಯಿದೆಯಡಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಂಗ್ ಹೇಳಿದರು. ಆರ್‌ಪಿಎಫ್ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದ ನಂತರ, ಘಟನೆಗಳು ತೀವ್ರವಾಗಿ ಕಡಿಮೆಯಾಗಿತ್ತು, ಆದರೆ ಭಾನುವಾರ ಮತ್ತೆ ಹೆಚ್ಚಾಗಿದೆ ಎಂದಿದ್ದಾರೆ.

Follow Us:
Download App:
  • android
  • ios