ರೈಲ್ವೇ ಅಧಿಕಾರಿಗಳ ಎಡವಟ್ಟಿನಿಂದ ಕಾಲುವೆಯಲ್ಲಿ ಮುಳುಗಿ 3 ಮಕ್ಕಳ ಸಾವು
ರೈಲ್ವೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಮೂವರು ಮಕ್ಕಳ ಜೀವ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ.
ಕೋಲಾರ, (ಅ.10): ಜಿಲ್ಲೆಯ ಬಂಗಾರಪೇಟೆ ಹೊರವಲಯದ ಕುಂಬಾರಪಾಳ್ಯದಲ್ಲಿ ಶನಿವಾರ 3 ಮಕ್ಕಳು ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯ ಕೊಳೆಗೇರಿಯ ಸಾದಿಕ್ (12), ಫಯಾಜ್ (7) ಮತ್ತು ಮೋಹಿಕ್ (8) ಮೃತಪಟ್ಟ ಮಕ್ಕಳು. ಕುಂಬಾರಪಾಳ್ಯ ಸಮೀಪದ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ
ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ರೈಲ್ವೆ ಅಧಿಕಾರಿಗಳು ಕೆಳ ಸೇತುವೆಯಿಂದ ಮಳೆ ನೀರು ಹೊರಗೆ ಹರಿದು ಹೋಗಲು ಸುಮಾರು 200 ಮೀಟರ್ ದೂರದವರೆಗೆ ಕಾಲುವೆ ತೋಡಿಸಿದ್ದರು.
10 ಅಡಿ ಆಳವಿರುವ ಕಾಲುವೆಯಲ್ಲಿ 7 ಅಡಿಗೂ ಹೆಚ್ಚು ಮಳೆ ನೀರು ನಿಂತಿತ್ತು. ಕಾಲುವೆ ಬಳಿ ಹೋಗಿರುವ ಮಕ್ಕಳು ಆಕಸ್ಮಿಕವಾಗಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲುವೆ ಸುತ್ತಮುತ್ತ ಕೃಷಿ ಜಮೀನುಗಳಿದ್ದು, ನಿರ್ಜನ ಪ್ರದೇಶವಾದ ಆ ಭಾಗದಲ್ಲಿ ಜನರ ಓಡಾಟ ಕಡಿಮೆ ಇರುತ್ತದೆ. ಕುರಿಗಾಹಿಗಳು ಕಾಲುವೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಬಂಗಾರಪೇಟೆ ಪೊಲೀಸರು ಹೇಳಿದ್ದಾರೆ.