Asianet Suvarna News Asianet Suvarna News

Online Betting| ಹೊಸ ಕಾಯ್ದೆಯಡಿ ಮೂವರ ಬಂಧನ

*  ಆನ್‌ಲೈನ್‌ ಜೂಟಾಟ ನಿಷೇಧಿಸಿದ ಬಳಿಕ ಮೊದಲ ಕೇಸ್‌
*  10 ಲಕ್ಷ ಮೌಲ್ಯದ ವಸ್ತುಗಳ ವಶ
*  ಎಲ್ಲ ರೀತಿಯ ಹಣ ಪಣಕ್ಕಿಡುವ ಆಟಗಳ ನಿಷೇಧ 

3 Arrested Under New Act of Online Betting in Bengaluru grg
Author
Bengaluru, First Published Oct 10, 2021, 8:25 AM IST

ಬೆಂಗಳೂರು(ಅ.10): ರಾಜ್ಯದಲ್ಲಿ ಆನ್‌ಲೈನ್‌ ಜೂಜಾಟಕ್ಕೆ(Online Betting) ನಿಷೇಧಿಸಿದ ಬಳಿಕ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಮೊದಲ ಬಾರಿಗೆ ಹೊಸ ಕಾಯ್ದೆಯನ್ವಯ ನಗರ ಪೊಲೀಸರು(Police) ಬಂಧಿಸಿದ್ದಾರೆ.

ಜೆ.ಪಿ.ನಗರದ ಬಾಲಚಂದ್ರನ್‌, ಗುಟ್ಟಹಳ್ಳಿಯ ಕಸ್ತೂರಿ ಬಾ ನಗರದ ರವಿಕುಮಾರ್‌ ಹಾಗೂ ಹೊರಮಾವು ಪೆನ್ನಿ ಚೇತನ್‌ ಬಂಧಿತರಾಗಿದ್ದು, ಆರೋಪಿಗಳಿಂದ 59 ಸಾವಿರ ನಗದು, ಕಾರು, ಸ್ಕೂಟರ್‌, ಮೊಬೈಲ್‌ ಸೇರಿ 10.41 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಐಪಿಎಲ್‌ನ(IPL) ಕೊಲ್ಕತ್ತಾ ನೈಟ್‌ ರೈಡ​ರ್ಸ್‌(Kolkata Knight Riders) ಮತ್ತು ರಾಜಸ್ಥಾನ ರಾಯಲ್ಸ್‌(Rajasthan Royals) ತಂಡಗಳ ನಡುವೆ ನಡೆದ ಪಂದ್ಯಾವಳಿ ವೇಳೆ ಹೊಸೂರು ರಸ್ತೆಯ ಲಾಡ್ಜ್‌ನ ರೂಮ್‌ ಬಾಡಿಗೆ ಪಡೆದು ಆರೋಪಿಗಳು(Accused) ಬೆಟ್ಟಿಂಗ್‌ನಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಲಾಡ್ಜ್‌ ಮೇಲೆ ದಾಳಿ ನಡೆಸಿ ಕರ್ನಾಟಕ(Karnataka) ಸರ್ಕಾರದ ಪೊಲೀಸ್‌ ಕಾಯ್ದೆ -1963 ತಿದ್ದುಪಡಿ ಅಧಿನಿಯಮದ ಪ್ರಕಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಹೊಸ ಕಾಯ್ದೆ ಅನ್ವಯ ಆನ್‌ಲೈನ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಡ್ರೀಮ್ಸ್‌-11(Dream-11) ಆ್ಯಪ್‌ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮೊದಲ ಎಫ್‌ಐಆರ್‌(FIR) ದಾಖಲಾಗಿತ್ತು. ಈಗ ಕ್ರಿಕೆಟ್‌(Cricket) ಬೆಟ್ಟಿಂಗ್‌ ಸಂಬಂಧ ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ವಿಗ್ಗಿ ಬಾಯ್ಸ್ ವೇಷ ಧರಿಸಿ ಗಾಂಜಾ ಸಪ್ಲೈ ಗ್ಯಾಂಗ್ ಅಂದರ್, ಎನ್‌ಸಿಬಿಯಿಂದ ರೋಚಕ ಕಾರ್ಯಾಚರಣೆ

ಕ್ಲಬ್‌ ಹೌಸ್‌ನಲ್ಲಿ ಸ್ನೇಹ:

ಬಾಲಚಂದ್ರನ್‌, ರವಿ ಹಾಗೂ ಚೇತನ್‌ ವೃತ್ತಿಪರ ಜೂಜುಕೋರರಾಗಿದ್ದು, ಕೆಲ ತಿಂಗಳ ಹಿಂದೆ ಕ್ಲಬ್‌ ಹೌಸ್‌(Club House) ಆ್ಯಪ್‌ನಲ್ಲಿ ಈ ಮೂವರಿಗೆ ಸ್ನೇಹವಾಗಿದೆ. ಬಳಿಕ ಬ್ಲಾಕ್‌ ಗೇಮ್‌ ಹೆಸರಿನ ಆ್ಯಪ್‌ನಲ್ಲಿ ಆರೋಪಿಗಳು ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದರು. ಕ್ರಿಕೆಟ್‌ ಬೆಟ್ಟಿಂಗ್‌ ಅನ್ನು ಈ ಮೂವರು ವೃತ್ತಿಯಾಗಿಸಿಕೊಂಡಿದ್ದರು. ಆನ್‌ಲೈನ್‌ ಜೂಜಾಟದ ಮೇಲೆ ನಿಗಾವಹಿಸಿದಾಗ ಇವರ ಬಗ್ಗೆ ಮಾಹಿತಿ ಸಿಕ್ಕಿತು. ಅಂತೆಯೇ ದಾಳಿ ನಡೆಸಿ ಗ್ರಾಹಕರಿಗೆ ಹಣ ತಲುಪಿಸಲು ಬಂದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾನು ಕ್ಯಾಸಿನೋದಲ್ಲಿ(Casino) ಹಣ ಕಳೆದುಕೊಂಡಿದ್ದೆ. ಹೀಗಾಗಿ ಮತ್ತೆ ಹಣ ಸಂಪಾದನೆ ಸಲುವಾಗಿಯೇ ಬೆಟ್ಟಿಂಗ್‌ನಲ್ಲಿ ತೊಡಗಿದ್ದೆ ಎಂದು ವಿಚಾರಣೆ ವೇಳೆ ರವಿ ಹೇಳಿಕೆ ನೀಡಿದ್ದಾನೆ. ಇನ್ನುಳಿದವರು ಸುಲಭವಾಗಿ ಹಣ ಸಂಪಾದನೆಗೆ ಬೆಟ್ಟಿಂಗ್‌ ದಾರಿ ತುಳಿದಿದ್ದರು. ಇನ್ನು ಚೇತನ್‌ ಮೂಲತಃ ಕೇರಳ ರಾಜ್ಯದವನಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಇಸ್ಪೀಟ್‌ ಮಾತ್ರವಲ್ಲದೆ ಎಲ್ಲ ರೀತಿಯ ಹಣ ಪಣಕ್ಕಿಡುವ ಆಟಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಈ ಮೂವರ ವಿರುದ್ಧ ಪೊಲೀಸ್‌ ಕಾಯ್ದೆಯ ಹೊಸ ತಿದ್ದುಪಡಿ ಅನ್ವಯ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿವಾಳ ಉಪ ವಿಭಾಗದ ಎಸಿಪಿ ಎಸಿಪಿ ಸುಧೀರ್‌ ಹೆಗ್ಡೆ ಹಾಗೂ ಇನ್‌ಸ್ಪೆಕ್ಟರ್‌ ಸುನೀಲ್‌ ನಾಯ್ಕ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
 

Follow Us:
Download App:
  • android
  • ios