ಅನುಮಾನಾಸ್ಪದ ಓಡಾಟ: ಕೇರಳದ ಮೂಲದ ಇಬ್ಬರ ಬಳಿ ದಾಖಲೆ ಇಲ್ಲದ 27 ಲಕ್ಷ ಪತ್ತೆ
ದಾಖಲೆ ಅಥವಾ ಮಾಹಿತಿ ನೀಡಲು ಹಿಂದೇಟು ಹಾಕಿದ ಆರೋಪಿಗಳು| ಸ್ವ ದೂರು ದಾಖಲಿಸಿಕೊಂಡು ಹಣ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ ಪೊಲೀಸರು| ಪೊಲೀಸರ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಶಂಸೆ|
ಬೆಂಗಳೂರು(ಅ.11): ತಾವರೆಕೆರೆ ಮುಖ್ಯರಸ್ತೆಯ ಎಸ್ಬಿಐ ಬ್ಯಾಂಕ್ ಎದುರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಶನಿವಾರ ಬಂಧಿಸಿರುವ ಸುದ್ದಗುಂಟೆ ಠಾಣೆ ಪೊಲೀಸರು, ಅವರಿಂದ 27.17 ಲಕ್ಷ ರು. ಹಣ ಜಪ್ತಿ ಮಾಡಿದ್ದಾರೆ.
ಕೇರಳದ ಕೋಜಿಕೋಡ್ ಜಿಲ್ಲೆಯ ಪೂಕಟ್ ಪುರಿಯಲ್ ಹೌಸ್ನ ಮೊಹಮ್ಮದ್ ನಿಹಾಲ್ (21) ಹಾಗೂ ಅದೇ ಜಿಲ್ಲೆಯ ಕೈವೇಲಿ ಕಡವು ಗ್ರಾಮದ ಕೆ.ಕೆ.ಅನ್ವರ್ ಬಂಧಿತರು. ಆರೋಪಿಗಳು ತಾವರೆಕೆರೆ ಮುಖ್ಯರಸ್ತೆಯ ಎಸ್ಬಿಐ ಬ್ಯಾಂಕ್ ಎದುರು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದರು. ಈ ವೇಳೆ ಪೊಲೀಸು ಪ್ರಶ್ನಿಸಲು ಮುಂದಾದಾಗ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾರೆ.
ಅಶ್ಲೀಲ ಫೋಟೋ ತೋರಿಸಿ ಬ್ಲ್ಯಾಕ್ಮೇಲ್: ಆರೋಪಿ ಸೆರೆ
ಈ ವೇಳೆ ಹಿಡಿದು ಪರಿಶೀಲಿಸಿದಾಗ 27.17 ಲಕ್ಷ ರು. ಹಣ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಯಾವುದೇ ದಾಖಲೆ ಅಥವಾ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಈ ಹಣವನ್ನು ಕಳವು ಅಥವಾ ಹವಾಲ ಹಣ ಇರಬಹುದೆಂದು ಅನುಮಾನಿಸಿರುವ ಪೊಲೀಸರು, ಸ್ವ ದೂರು ದಾಖಲಿಸಿಕೊಂಡು ಹಣವನ್ನು ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಯಾವುದೇ ಮಾಹಿತಿ ನೀಡುತ್ತಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತರು ಪ್ರಶಂಸಿದ್ದಾರೆ.