ಕ್ರೆಡಿಟ್ ಕಾರ್ಡ್ ಸಾಲದಿಂದ ಹೆದರಿದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ. 

ಮೈಸೂರು(ಜೂ.30): ಕ್ರೆಡಿಟ್ ಕಾರ್ಡ್ ಸಾಲದಿಂದ ಹೆದರಿದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ. ಕೆ.ಆರ್ ತಾಲೂಕಿನ ಹೆಬ್ಬಾಳು ಕೊಪ್ಪಲು ಗ್ರಾಮದ ಹೆಚ್.ಆರ್ ಯತೀಕ್(25) ಮೃತ ಯುವಕ. 

Add Asianetnews Kannada as a Preferred SourcegooglePreferred

ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಯತೀಕ್ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಶಿರಸಿ: ಮದುವೆಯಾಗದ್ದಕ್ಕೆ ನೊಂದು ಯುವಕ ಆತ್ಮಹತ್ಯೆ

ಡೆತ್ ನೋಟ್‌ನಲ್ಲಿ ಏನಿದೆ?

ಮನೆಯಲ್ಲಿ ಸಮಸ್ಯೆ ಇದ್ದ ಹಿನ್ನಲೆಯಲ್ಲಿ ಕ್ರೆಡಿಟ್ ಕಾರ್ಡ್, ಪರ್ಸನಲ್ ಸಾಲವನ್ನು ತೆಗೆದುಕೊಂಡು ಜೀವನ ಸಾಗಿಸುತ್ತಿದ್ದು, ಕೆಲವು ನಿರ್ಧಾರಗಳಿಂದ, ಹೂಡಿಕೆಗಳಿಂದ ನನ್ನ ಹಣವನ್ನು ಹಾಗೂ ಇದ್ದಂತಹ ಅಂಗಡಿಯನ್ನು ಕಳೆದುಕೊಂಡು, ಹಣವಿಲ್ಲದೆ ಕೆಲಸ ಹುಡುಕಾಟ ನಡೆಸುತ್ತಿದೆ. ಎಲ್ಲಿಯೂ ಕೆಲಸ ಸಿಗಲಿಲ್ಲ. ಬೆಂಗಳೂರಿನಲ್ಲಿ ಜುಮೊಟೋ ಡಿಲವರಿಬಾಯ್ ಆಗಿ ಸಹ ಕೆಲಸ ಮಾಡಿದೆ. ನಾನು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿ ಮೂರು ತಿಂಗಳಲ್ಲಿ 6 ರಿಂದ 7 ಲಕ್ಷ ರೂ. ಸಂಪಾದನೆಯಾಗಿತ್ತು. ಆದರೇ ಎಲ್ಲಾ ಹಣವನ್ನು ಜನವರಿ ತಿಂಗಳಲ್ಲಿ ಕಳೆದುಕೊಂಡೆ. ಬೇರೆ ವ್ಯವಹಾರ ಮಾಡಲು ತೀರ್ಮಾನ ಮಾಡಿದ್ದಾಗ ಹಣದ ವ್ಯವಸ್ಥೆ ಆಗಲಿಲ್ಲ. ಇಎಂಐ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಸಾಲ ವಸೂಲಾತಿಗೆ ಅನಧಿಕೃತ ಬ್ಯಾಂಕ್ ಸಿಬ್ಬಂದಿಯಿಂದ ಕರೆಗಳು ಬರಲು ಪ್ರಾರಂಭಿಸಿ, ಚಿತ್ರಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಬ್ಯಾಂಕಿಗೆ ದೂರು ನೀಡಲು ಸಂಪರ್ಕಿಸಿದಾಗ ಯಾವುದೇ ಫೋನ್ ಸಂಪರ್ಕ ಸಿಗಲಿಲ್ಲ. ಆರ್ಬಿಐ ಬ್ಯಾಂಕುಗಳಿಗೆ ಸಾಲ ವಸೂಲಾತಿಗೆ ಹಲವು ನಿರ್ದೇಶನ ನೀಡಿದೆ ಆದರೆ ಯಾರೂ ಕೂಡ ಪಾಲಿಸುತ್ತಿಲ್ಲ. ಜೀವನದಲ್ಲಿ ನೂರಾರು ಕನಸುಗಳನ್ನು ಒತ್ತಂತ ನನಗೆ ಸಾಲದಿಂದ ಮುಕ್ತಿ ಸಿಗದ ಪರಿಣಾಮ ಈ ನಿರ್ಧಾರಕ್ಕೆ ಬರುತ್ತಿದ್ದೇನೆ. ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡಬೇಕು.' ಎಂದು ಮೃತಪಟ್ಟ ಯುವಕ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. 

ಬ್ಯಾಂಕ್ ಸಿಬ್ಬಂದಿಗಳ ಕಿರುಕಳ ಹಾಗೂ ಸಾಲಭಾದೆಯಿಂದ ನನ್ನ ಮಗ ತುಂಬಾ ಮನನೊಂದು ಜು.29ರಂದು ಮನೆಯಿಂದ ಹೊರ ಹೋಗಿದ್ದನು. ಶನಿವಾರ ಬೆಟ್ಟದಪುರದ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಹಾಗೂ ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮೃತ ಯುವಕನ ತಂದೆ ಎಚ್.ಟಿ ರಮೇಶ್ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.