ಯಲಹಂಕದ ಆರ್‌ಎಂಝಡ್‌ ಗ್ಯಾಲೇರಿಯಾ ಮಾಲ್‌ನ 1ನೇ ಮಹಡಿಯಲ್ಲಿರುವ ಲೈಫ್‌ ಸ್ಟೈಲ್‌ ಶೋ ರೂಂ ಕ್ಯಾಶಿಯರ್ ಕುರುವ ಮಲ್ಲಿಕಾರ್ಜುನ್ ಹತ್ಯೆಯಾಗೀಡಾದ ಯುವಕ. ಈ ಪ್ರಕರಣ ಸಂಬಂಧ ಮೃತನ ಸಹೋದ್ಯೋಗಿ ರಾಜರಥನ್‌ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು(ಸೆ.29):  ಪ್ರತಿಷ್ಠಿತ ಮಾಲ್‌ವೊಂದರ ಸಿದ್ಧ ಉಡುಪು ಮಾರಾಟ ಮಳಿಗೆಯಲ್ಲಿ ಬಿಲ್ ಮಾಡುವ ವಿಚಾರವಾಗಿ ಆ ಮಳಿಗೆಯ ಇಬ್ಬರು ಕ್ಯಾಶಿಯರ್‌ಗಳ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Add Asianetnews Kannada as a Preferred SourcegooglePreferred

ಯಲಹಂಕದ ಆರ್‌ಎಂಝಡ್‌ ಗ್ಯಾಲೇರಿಯಾ ಮಾಲ್‌ನ 1ನೇ ಮಹಡಿಯಲ್ಲಿರುವ ಲೈಫ್‌ ಸ್ಟೈಲ್‌ ಶೋ ರೂಂ ಕ್ಯಾಶಿಯರ್ ಕುರುವ ಮಲ್ಲಿಕಾರ್ಜುನ್ (24) ಹತ್ಯೆಯಾಗೀಡಾದ ಯುವಕ. ಈ ಪ್ರಕರಣ ಸಂಬಂಧ ಮೃತನ ಸಹೋದ್ಯೋಗಿ ರಾಜರಥನ್‌ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಶೋ ರೂಂನಲ್ಲಿ ಬಿಲ್ ಮಾಡುವ ವಿಚಾರವಾಗಿ ಇಬ್ಬರು ಪರಸ್ಪರ ಜಗಳ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಯಚೂರು: ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆ, ಪಾಲಕರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥ

ಬಟ್ಟೆ ಕತ್ತರಿಸುವ ಕತ್ತರಿಯಿಂದ ಇರಿತ:

ಹಲವು ದಿನಗಳಿಂದ ಲೈಫ್ ಸ್ಟೈಲ್‌ ಶೋ ರೂಂನಲ್ಲಿ ಬಳ್ಳಾರಿ ಜಿಲ್ಲೆಯ ಮೃತ ಮಲ್ಲಿಕಾರ್ಜುನ್‌ ಹಾಗೂ ಆಂಧ್ರಪ್ರದೇಶದ ರಾಜರಥನ್‌ ಕ್ಯಾಶಿಯರ್‌ಗಳಾಗಿದ್ದು, ಯಲಹಂಕ ಸಮೀಪ ಪಿಜಿಗಳಲ್ಲಿ ಇಬ್ಬರು ಪ್ರತ್ಯೇಕವಾಗಿ ನೆಲೆಸಿದ್ದರು. ಸೆ.26ರಂದು ಸಂಜೆ ಕ್ಯಾಷ್ ಕೌಂಟರ್‌ನಲ್ಲಿ ಕಂಪ್ಯೂಟರ್ ಬಿಲ್ ತೆಗೆದು ಗ್ರಾಹಕರಿಗೆ ಕೊಡುವ ವಿಚಾರಕ್ಕೆ ಮಲ್ಲಿಕಾರ್ಜುನ್ ಮತ್ತು ರಾಜರಥನ್ ನಡುವೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಕೈ ಕೈ ಮಿಲಾಯಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಮಳಿಗೆಯ ಇತರೆ ಸಿಬ್ಬಂದಿ, ಜಗಳವಾಡುತ್ತಿದ್ದ ಕ್ಯಾಶಿಯರ್‌ಗಳನ್ನು ಸಮಾಧಾನಪಡಿಸಲು ಯತ್ನಿಸಿ ವಿಫಲವಾಗಿದ್ದಾರೆ. ಇತ್ತ ತಳ್ಳಾಡಿಕೊಂಡು ಟೈಲರ್‌ ಕೊಠಡಿಗೆ ಮಲ್ಲಿಕಾರ್ಜುನ್ ಮತ್ತು ರಾಜರಥನ್ ತೆರಳಿದ್ದಾರೆ. ಈ ಹಂತದಲ್ಲಿ ಕೆರಳಿದ ರಾಜರಥನ್, ಮಲ್ಲಿಕಾರ್ಜುನ್‌ ಎದೆಗೆ ಬಟ್ಟೆ ಕತ್ತರಿಸುವ ಕತ್ತರಿಯಿಂದ ಇರಿದಿದ್ದಾನೆ. ಕೂಡಲೇ ಗಾಯಾಳುವನ್ನು ಮಳಿಗೆ ಕೆಲಸಗಾರರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಈ ಘಟನೆ ಮಾಹಿತಿ ಪಡೆದ ಸ್ಥಳಕ್ಕೆ ತೆರಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಣಕಿಸಿದ್ದಕ್ಕೆ ಕೆರಳಿದ ರಾಜರಥನ್‌

ಬಿಲ್‌ ಮಾಡುವ ವಿಚಾರವಾಗಿ ತನ್ನ ಸಹೋದ್ಯೋಗಿ ರಾಜರಥನ್‌ನನ್ನು ಮಲ್ಲಿಕಾರ್ಜುನ್ ಗೇಲಿ ಮಾಡುತ್ತಿದ್ದ. ಇದಕ್ಕೆ ಆತ ಆಕ್ಷೇಪಿಸಿದರೂ ರಾಜರಥನ್ ಅಣಕಿಸುವುದನ್ನು ಬಿಟ್ಟಿರಲಿಲ್ಲ. ಅಂತೆಯೇ ಮಂಗಳವಾರವೂ ಕೂಡ ಬಿಲ್ ಮಾಡುವಾಗ ನಿನಗೆ ಸರಿಯಾಗಿ ಕ್ಯಾಶ್ ಏಣಿಸಲು ಬರುವುದಿಲ್ಲ. ಬ್ಯಾಂಕ್‌ಗೆ ಹಣ ಜಮೆ ಮಾಡೋದಕ್ಕೂ ಬರುವುದಿಲ್ಲ ಎಂದು ರಾಜರಥನ್‌ಗೆ ಮಲ್ಲಿಕಾರ್ಜುನ್‌ ಛೇಡಿಸಿದ್ದಾನೆ. ಈ ಮಾತಿಗೆ ರಾಜರಥನ್ ಆಕ್ಷೇಪಿಸಿದಾಗ ಗಲಾಟೆ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.