*   ಹಲಸೂರು ಗೇಟ್‌ ಠಾಣೆಗೆ ಚಿನ್ನದ ವ್ಯಾಪಾರಿ ದೂರು*   ದರೋಡೆ ನಡೆದಿರುವ ಬಗ್ಗೆಯೇ ಪೊಲೀಸರಿಗೆ ಶಂಕೆ*   ಪಿಸ್ತೂಲ್‌ ತೋರಿಸಿ ದರೋಡೆ ಮಾಡಿದ್ದ ಐವರ ಬಂಧನ 

ಬೆಂಗಳೂರು(ನ.21):  ಜೀವ ಬೆದರಿಕೆ ಹಾಕಿ ದುಷ್ಕರ್ಮಿಗಳು(Miscreants) ತನ್ನಿಂದ 2.5 ಕೋಟಿ ಮೌಲ್ಯದ 5 ಕೆ.ಜಿ. ಚಿನ್ನದ ಗಟ್ಟಿಗಳನ್ನು ದೋಚಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್‌ ಠಾಣೆಗೆ ಚಿನ್ನಾಭರಣ ವ್ಯಾಪಾರಿಯೊಬ್ಬರು ದೂರು ನೀಡಿದ್ದಾರೆ. ಆದರೆ ಈ ದರೋಡೆ ನಡೆದಿರುವ ಬಗ್ಗೆಯೇ ಪೊಲೀಸರು ಶಂಕಿಸಿದ್ದಾರೆ.

ನಗರ್ತಪೇಟೆಯ ಡಿ.ಕೆ.ಮಾರ್ಕೆಟ್‌ನ ಸಂಸ್ಕಾರ್‌ ಎಂಟರ್‌ ಪ್ರೈಸಸ್‌ ಮಾಲೀಕರ ಸೋದರ ಸಿದ್ದೇಶ್ವರ್‌ ಹರಿಬಾ ಸಿಂಧೆ ಎಂಬುವರು ದೂರು ನೀಡಿದ್ದು, ಕಾಫಿ ಬೋರ್ಡ್‌ ಸಮೀಪದ ಅಟ್ಟಿಕಾ ಗೋಲ್ಡ್‌ ಕಂಪನಿಯಲ್ಲಿ ಶುಕ್ರವಾರ ಚಿನ್ನ ಸಾಲ ಪಡೆದು ಸಿಂಧೆ ತೆಗೆದುಕೊಂಡು ಹೋಗುವಾಗ ಈ ದರೋಡೆ(Robbery) ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

ಹೇಗೆ ಕೃತ್ಯ?

ಕಳೆದ ಆರು ವರ್ಷಗಳಿಂದ ನಗರ್ತಪೇಟೆಯಲ್ಲಿ ಸಿಂಧೆ ಸೋದರು ಚಿನ್ನಾಭರಣ(Gold) ಮಾರಾಟ ಮಳಿಗೆ ಹೊಂದಿದ್ದು, ಸಣ್ಣ ಪ್ರಮಾಣದಲ್ಲಿ ಚಿನ್ನದ ವಹಿವಾಟು ನಡೆಸುತ್ತಿದ್ದಾರೆ. ಕಾಫಿ ಬೋರ್ಡ್‌ ಸಮೀಪದ ಅಟ್ಟಿಕಾ ಗೋಲ್ಡ್‌ ಕಂಪನಿ ಕಚೇರಿಗೆ ಬೈಕ್‌ನಲ್ಲಿ ತಮ್ಮ ಕೆಲಸಗಾರ ಸೂರಜ್‌ ಶ್ರೀಕಾಂತ್‌ ಜಾದವ್‌ ಜತೆ ಶುಕ್ರವಾರ ರಾತ್ರಿ 8.30ರಲ್ಲಿ ಸಿಂಧೆ ತೆರಳಿದ್ದರು. ಅಲ್ಲಿ ಸಾಲದ ರೂಪದಲ್ಲಿ 5 ಕೆ.ಜಿ. ಚಿನ್ನದ ಗಟ್ಟಿಯನ್ನು ಪಡೆದ ಅವರು, ಅಲ್ಲಿಂದ ಬೈಕ್‌ನಲ್ಲಿ ಅಂಗಡಿಗೆ ತೆರಳುತ್ತಿದ್ದರು. ಆಗ ಕಬ್ಬನ್‌ಪೇಟೆ ಸಮೀಪ ಸಿಂಧೆ ಅವರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು, ಸಿಂಧೆಗೆ ಜೀವ ಬೆದರಿಕೆ(Life Threatening) ಚಿನ್ನದ ಗಟಿ ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ ನಮಸ್ಕಾರ ಮಾಡಿಕೊಂಡ! ವಿಡಿಯೋ

ದೂರುದಾರನ ಮೇಲೆ ಶಂಕೆ:

ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ದೂರುದಾರನ ಮೇಲೆ ಪೊಲೀಸರು(Police) ಶಂಕೆ ವ್ಯಕ್ತಪಡಿಸಿದ್ದಾರೆ. ನಗರ್ತಪೇಟೆಯಲ್ಲಿ 10*10 ಅಡಿ ಅಳತೆಯಲ್ಲಿ ಸಿದ್ದೇಶ್ವರ ಸಿಂಧೆ ಸೋದರ ಅಂಗಡಿ ಇದ್ದು, ಕೋಟ್ಯಂತರ ಮೊತ್ತದ ವಹಿವಾಟು ನಡೆಸುವ ಬಗ್ಗೆ ಅನುಮಾನವಿದೆ. ಅಟ್ಟಿಕಾ ಕಂಪನಿಯಲ್ಲಿ 5 ಕೆ.ಜಿ ಚಿನ್ನದ ಗಟ್ಟಿಸಾಲವನ್ನು ಪಡೆದಿದ್ದಾಗಿ ಸಿಂಧೆ ಹೇಳಿದ್ದಾರೆ. ಇನ್ನು ದರೋಡೆ ಕೃತ್ಯ ನಡೆದಿರುವುದು ಜನನಿಬಿಡ ಪ್ರದೇಶದಲ್ಲಿ. ಹೀಗಾಗಿ ದರೋಡೆ ನಡೆದಿದೆಯೇ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಸ್ತೂಲ್‌ ತೋರಿಸಿ ದರೋಡೆ ಮಾಡಿದ್ದ ಐವರ ಬಂಧನ

ಹಣಕಾಸು ವ್ಯವಹಾರ ಸಂಬಂಧ ಹಾಡಹಗಲೇ ಮನೆಗೆ ನುಗ್ಗಿ ಪಿಸ್ತೂಲ್‌ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ, ಐವರು ದುಷ್ಕರ್ಮಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ(Arrest).

ಜೆ.ಜೆ.ನಗರದ ಸೈಮನ್‌, ಜೀವನ್‌ಕುಮಾರ್‌, ಟಿಪ್ಪು, ಪುನೀತ್‌ ಕುಮಾರ್‌, ಮೋಹನ್‌ ಬಂಧಿತರು. ಆರೋಪಿಗಳಿಂದ 25 ಲಕ್ಷ ರು. ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕೊಡಿಗೇಹಳ್ಳಿಯ ಶ್ರೀನಿಧಿ ಟಿಆರ್‌ಬಿ ಲೇಔಟ್‌ನ ಶಶಿಕಲಾ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಮಿಯ ಮನೆಗೆ ನುಗ್ಗಿ 2 ಕೋಟಿ ನಗದು, ಚಿನ್ನಾಭರಣ ದರೋಡೆ!

ದೂರದಾರೆ ಶಶಿಕಲಾ ಹಾಗೂ ಆರೋಪಿ ಸೈಮನ್‌ ಪರಿಚಿತರು. ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಮೇ 26ರಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಶಶಿಕಲಾ ಮನೆಗೆ ಬಂದಿರುವ ಆರೋಪಿಗಳು ಹಣಕಾಸು ವಿಚಾರವಾಗಿ ಮತ್ತೆ ಕಿರಿಕ್‌ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಆರೋಪಿಗಳು ಏಕಾಏಕಿ ಪಿಸ್ತೂಲ್‌ ತೆಗೆದು ಶಶಿಕಲಾ ಅವರನ್ನು ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಆರೋಪಿಗಳ ಬಂಧನದಿಂದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಏಳು ಮನೆಗಳವು ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ಬಳಿ ಇದ್ದ ಪಿಸ್ತೂಲ್‌ ವಶಕ್ಕೆ ಪಡೆದಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.