*  ಕಿಂಗ್‌ಪಿನ್‌ಗೆ ಪೊಲೀಸರ ಗಾಳ*  ಮುರ್ಡೇಶ್ವರದಲ್ಲಿ 10 ಕೋಟಿ ಮೌಲ್ಯದ ಅಂಬರ್‌ಗ್ರೀಸ್‌ ಜಪ್ತಿ*  ಅಂಬರ್‌ ಗ್ರೀಸ್‌ ಮಾರಾಟದ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಣೆ 

ಹೊಸಪೇಟೆ/ಬೆಂಗಳೂರು(ಡಿ.26):  ವಿಜಯನಗರ ಜಿಲ್ಲೆಯ ಪೊಲೀಸರು ತಿಮಿಂಗಿಲ ವಾಂತಿ (ಅಂಬರ್‌ ಗ್ರೀಸ್‌)ಯ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮುರ್ಡೇಶ್ವರದಲ್ಲಿ ಶುಕ್ರವಾರ 10 ಕೋಟಿ ಮೌಲ್ಯದ 10 ಕೆಜಿ ಅಂಬರ್‌ಗ್ರೀಸ್‌(Ambergris) ಜಪ್ತಿ ಮಾಡಿಕೊಂಡು ಬಂದಿದ್ದಾರೆ.

ಈ ಹಿಂದೆ ಡಿ. 21ರಂದು ನಗರದ ಎಸ್‌ವಿಕೆ ಬಸ್‌ ನಿಲ್ದಾಣದ ಬಳಿ ಕೊಪ್ಪಳದ(Koppal) ಬಂಡಿಹರ್ಲಾಪುರ ಗ್ರಾಮದ ಲಂಬಾಣಿ ವೆಂಕಟೇಶ ಮತ್ತು ಅಬ್ದುಲ್‌ ವಹಾಬ್‌ ಎಂಬವರನ್ನು ಬಂಧಿಸಿದ್ದರು. ಬಂಧಿತರಿಂದ ಒಂದೂವರೆ ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಜಪ್ತಿ ಮಾಡಿಕೊಳ್ಳಲಾಗಿತ್ತು. ಬಳಿಕ ತನಿಖೆ ಕೈಗೊಂಡು ಮುರ್ಡೇಶ್ವರದ ಹಿರಮನೆ ಗಣಪತಿ (42), ಹುಬ್ಬಳ್ಳಿಯ ಪುಂಡಲೀಕ (34), ಮಹೇಶ್‌ (33) ಮತ್ತು ವಿಜಯಪುರದ ಶ್ರೀಧರ್‌ (35) ಎಂಬವರನ್ನು ಬಂಧಿಸಲಾಗಿತ್ತು.

Ambergris: ಹೊಸಪೇಟೆಯಲ್ಲಿ 1.5 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ಜಪ್ತಿ

ಮುರ್ಡೇಶ್ವರದಲ್ಲಿ 10 ಕೆಜಿ ಪತ್ತೆ:

ಮುರ್ಡೇಶ್ವರದ ಹಿರಮನೆ ಗಣಪತಿಯನ್ನು ಪೊಲೀಸ್‌(Police) ಕಸ್ಟಡಿಗೆ ಪಡೆದುಕೊಂಡ ಪೊಲೀಸರು ಡಿ. 24ರಂದು ಮುರ್ಡೇಶ್ವರಕ್ಕೆ ತೆರಳಿ ಆರೋಪಿ ಮನೆಯಿಂದ 10 ಕೋಟಿ ಮೌಲ್ಯದ 10 ಕೆಜಿ ತಿಮಿಂಗಿಲ ವಾಂತಿಯನ್ನು ಜಪ್ತಿ ಮಾಡಿದ್ದಾರೆ. ಪಟ್ಟಣ ಠಾಣೆ ಪೊಲೀಸರ ಕಾರ್ಯವನ್ನು ವಿಜಯನಗರ ಎಸ್ಪಿ ಡಾ. ಅರುಣ್‌ ಕೆ., ಶ್ಲಾಘಿಸಿದ್ದಾರೆ.

4 ಕೋಟಿ ಮೌಲ್ಯದ ಅಂಬರ್‌ ಗ್ರೀಸ್‌ ವಶ

ಬೆಂಗಳೂರು(Bengaluru) ನಗರದಲ್ಲಿ ಅಕ್ರಮವಾಗಿ ಅಂಬರ್‌ ಗ್ರೀಸ್‌(ತಿಮಿಂಗಲ ವಾಂತಿ) ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಮೈಕೋ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು(Tamil Nadu) ಮೂಲದ ಪನ್ನೀರ್‌ ಸೆಲ್ವಂ(32), ಆನಂದ ಶೇಖರ್‌(37) ಹಾಗೂ ಕೆ.ಮಂಜು(32) ಬಂಧಿತರು(Arrest). ಆರೋಪಿಗಳಿಂದ(Accused) ಸುಮಾರು 4 ಕೋಟಿ ರು. ಮೌಲ್ಯದ 4.10 ಕೆ.ಜಿ. ಅಂಬರ್‌ ಗ್ರೀಸ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್‌ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಡಿ.22ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮೈಕೋ ಲೇಔಟ್‌ನ ಸೋಮೇಶ್ವರ ಕಾಲೋನಿಯ ಲೇಕ್‌ ರಸ್ತೆಯಲ್ಲಿ ಸ್ವಿಫ್ಟ್‌ ಕಾರಿನಲ್ಲಿ ಕುಳಿತು ಅಂಬರ್‌ ಗ್ರೀಸ್‌ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಂಬರ್‌ ಗ್ರೀಸ್‌ ಮಾರಾಟಕ್ಕೆ ಗಿರಾಕಿಗಳಿಗಾಗಿ ಕಾಯುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ. ಬಳಿಕ ಕಾರನ್ನು ತಪಾಸಣೆ ಮಾಡಿದಾಗ ಅಂಬರ್‌ ಗ್ರೀಸ್‌ ಇರುವುದು ಪತ್ತೆಯಾಗಿದೆ.

Ambergris Smuggling : ವಿಜಯನಗರಕ್ಕೂ ಕಾಲಿಟ್ಟ ಅಂಬರ್‌ ಗ್ರೀಸ್ ಮಾರಾಟ ಜಾಲ!

ಈ ಅಂಬರ್‌ ಗ್ರೀಸ್‌ ಮಾರಾಟದ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿರುವುದು ತಿಳಿದು ಬಂದಿದೆ. ಆರೋಪಿಗಳು ತಮಿಳುನಾಡಿನ ಕೊಯಮತ್ತೂರಿನ ಕೆಲ ವ್ಯಕ್ತಿಗಳಿಂದ ಅಂಬರ್‌ ಗ್ರೀಸ್‌ ಪಡೆದು, ಗಿರಾಕಿ ಹುಡುಕಿ ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ದಂಧೆಯ ಕಿಂಗ್‌ಪಿನ್‌ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದು, ಆತನ ಬಂಧನದ ಬಳಿಕ ಈ ಅಂಬರ್‌ ಗ್ರೀಸ್‌ನ ಮೂಲ ಪತ್ತೆಯಾಗಲಿದೆ. ತಮಿಳುನಾಡಿನ ಸಮುದ್ರ ಭಾಗದಲ್ಲಿ ಅಂಬರ್‌ ಗ್ರೀಸ್‌ ಸಂಗ್ರಹಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಮೈಕೋ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಮಾಡುತ್ತಿದ್ದ ತಾಯಿ-ಮಗಳ ಬಂಧನ

ಬಳ್ಳಾರಿ(Balllari): ನಗರದ ಸೂಪರ್‌ ಮಾರ್ಕೆಟ್‌ಗಳಲ್ಲಿ ಕಳ್ಳತನ ಮಾಡುತಿದ್ದ ತಾಯಿ-ಮಗಳನ್ನು ಇಲ್ಲಿನ ಗಾಂಧಿನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ಶುಕ್ರವಾರ ನಗರದ ಸತ್ಯನಾರಾಯಣಪೇಟೆಯ ಸೆವೆನ್‌ ಹಿಲ್ಸ್‌ ಅಂಗಡಿಯಲ್ಲೂ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂಗಡಿಯ ವಸ್ತುಗಳನ್ನು ಕದ್ದು ಪರಾರಿಯಾಗುತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಅಂಗಡಿ ಮಾಲೀಕರು ಗಾಂಧಿನಗರ ಠಾಣೆಗೆ ಒಪ್ಪಿಸಿದ್ದಾರೆ.