ಈ ಇಬ್ಬರೂ ಕಳೆದ ಜೂನ್‌ನಲ್ಲಿ ಕೊನೆ ಬಾರಿ ಏಕದಿನ ಪಂದ್ಯವಾಡಿದ್ದರು. ತಂಡದ ಮೀಸಲು ಪಟ್ಟಿಯಲ್ಲಿದ್ದ ಚಾಮಿಕ ಕರುಣಾರತ್ನೆ ಕೆಲ ದಿನಗಳ ಹಿಂದಷ್ಟೇ ದಸುನ್‌ ಶಾನಕ ಬದಲು ಮುಖ್ಯ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಲಂಕಾ ಮುಂದಿನ ಪಂದ್ಯವನ್ನು ಅ.21ಕ್ಕೆ ನೆದರ್‌ಲೆಂಡ್ಸ್‌ ವಿರುದ್ಧ ಆಡಲಿದೆ.

ನವದೆಹಲಿ(ಅ.20): ಗಾಯದಿಂದಾಗಿ ಹಲವು ತಾರಾ ಆಟಗಾರರ ಸೇವೆಯಿಂದ ವಂಚಿತವಾಗಿರುವ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್‌ನ ಮುಂದಿನ ಪಂದ್ಯಗಳಿಗೆ ಹಿರಿಯ ಆಲ್ರೌಂಡರ್‌ ಏಂಜೆಲೋ ಮ್ಯಾಥ್ಯೂಸ್‌ ಹಾಗೂ ವೇಗಿ ದುಷ್ಮಾಂತ ಚಮೀರ ಅವರನ್ನು ಮೀಸಲು ಆಟಗಾರರನ್ನಾಗಿ ಕರೆಸಿಕೊಂಡಿದೆ. ಈ ಇಬ್ಬರೂ ಕಳೆದ ಜೂನ್‌ನಲ್ಲಿ ಕೊನೆ ಬಾರಿ ಏಕದಿನ ಪಂದ್ಯವಾಡಿದ್ದರು. ತಂಡದ ಮೀಸಲು ಪಟ್ಟಿಯಲ್ಲಿದ್ದ ಚಾಮಿಕ ಕರುಣಾರತ್ನೆ ಕೆಲ ದಿನಗಳ ಹಿಂದಷ್ಟೇ ದಸುನ್‌ ಶಾನಕ ಬದಲು ಮುಖ್ಯ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಲಂಕಾ ಮುಂದಿನ ಪಂದ್ಯವನ್ನು ಅ.21ಕ್ಕೆ ನೆದರ್‌ಲೆಂಡ್ಸ್‌ ವಿರುದ್ಧ ಆಡಲಿದೆ.

ಹಾರ್ದಿಕ್‌ಗೆ ಗಾಯ: ಭಾರತಕ್ಕೆ ಆತಂಕ!

ಪುಣೆ: ಭಾರತದ ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಗುರುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು, ತಂಡದ ಆತಂಕಕ್ಕೆ ಕಾರಣವಾಗಿದೆ. ತಮ್ಮ ಮೊದಲ ಓವರ್‌ ಬೌಲ್‌ ಮಾಡುವಾಗ ಹಾರ್ದಿಕ್‌, ಲಿಟನ್‌ ದಾಸ್‌ ಬಾರಿಸಿದ ಚೆಂಡನ್ನು ಕಾಲಿನಿಂದ ತಡೆಯಲು ಯತ್ನಿಸಿದರು. ಈ ವೇಳೆ ಅವರ ಮೊಣಕಾಲು ಉಳುಕಿದಂತೆ ಕಂಡು ಬಂತು.

ನೋವಿನಿಂದ ಮೈದಾನ ತೊರೆದ ಹಾರ್ದಿಕ್‌ರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಗಾಯದ ಪ್ರಮಾಣ ದೊಡ್ಡದಿಲ್ಲ ಎಂದು ತಿಳಿದುಬಂದಿದ್ದರೂ, ಮುಂದಿನ ಪಂದ್ಯಕ್ಕೆ ಲಭ್ಯರಿರಲಿದ್ದಾರಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆಸ್ಪತ್ರೆಯಿಂದ ಕ್ರೀಡಾಂಗಣಕ್ಕೆ ವಾಪಸಾದ ಹಾರ್ದಿಕ್‌ ಅಗತ್ಯಬಿದ್ದರೆ ಬ್ಯಾಟ್‌ ಮಾಡಲಿದ್ದಾರೆ ಎಂದು ತಂಡದ ಆಡಳಿತ ತಿಳಿಸಿತ್ತು. ಆದರೆ ಹಾರ್ದಿಕ್‌ ಕ್ರೀಸ್‌ಗಿಳಿಯಬೇಕಾದ ಅನಿವಾರ್ಯತೆ ಎದುರಾಗಲಿಲ್ಲ.

26 ಸಾವಿರ ರನ್ ಎಲೈಟ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ..!

ಭಾರತಕ್ಕೆ ಮುಂದಿನ ಎರಡು ಪಂದ್ಯಗಳಲ್ಲಿ ಬಲಿಷ್ಠ ನ್ಯೂಜಿಲೆಂಡ್‌, ಇಂಗ್ಲೆಂಡ್‌ ಎದುರಾಗಲಿದ್ದು ಒಂದು ವೇಳೆ ಹಾರ್ದಿಕ್‌ ಹೊರಬಿದ್ದರೆ ತಂಡದ ಸಮತೋಲನಕ್ಕೆ ಸಮಸ್ಯೆಯಾಗಬಹುದು.

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿದ ಭಾರತ

ಬಾಂಗ್ಲಾ ವಿರುದ್ಧ ಭಾರತ ದೊಡ್ಡ ಗೆಲುವು ಸಾಧಿಸಿದರೂ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. ಸತತ 4 ಜಯ ಸಾಧಿಸಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಬೇಕಿದ್ದರೆ ಭಾರತ, ಬಾಂಗ್ಲಾ ನೀಡಿದ್ದ 259 ರನ್‌ ಗುರಿಯನ್ನು 34.5 ಓವರಲ್ಲಿ ತಲುಪಬೇಕಿತ್ತು. ಆದರೆ ಅದು ಸಾಧ್ಯವಾಗದ ಕಾರಣ, 2ನೇ ಸ್ಥಾನದಲ್ಲೇ ಉಳಿಯಬೇಕಾಯಿತು.

ಬೆಂಗಳೂರಿನಲ್ಲಿ ಆಸಿಸ್-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ; ಕ್ರೀಡಾಂಗಣದ ಸುತ್ತಲೂ ಪೊಲೀಸ್ ಸರ್ಪಗಾವಲು

ಟಿ20: ಕರ್ನಾಟಕಕ್ಕೆ ಶರಣಾದ ಮಧ್ಯಪ್ರದೇಶ

ಡೆಹ್ರಾಡೂನ್‌: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ. ಗುರುವಾರ ‘ಇ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ರಾಜ್ಯ ತಂಡ ಮಧ್ಯಪ್ರದೇಶ ವಿರುದ್ಧ 7 ವಿಕೆಟ್‌ ಭರ್ಜರಿ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಮಧ್ಯಪ್ರದೇಶ, ರಾಜ್ಯದ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ 17.4 ಓವರ್‌ಗಳಲ್ಲಿ 76ಕ್ಕೆ ಆಲೌಟಾಯಿತು. ವೈಶಾಖ್‌ ವಿಜಯ್‌ಕುಮಾರ್‌, ಕೆ.ಗೌತಮ್‌ ತಲಾ 3, ವಿದ್ವತ್‌ ಕಾವೇರಪ್ಪ 2 ವಿಕೆಟ್‌ ಕಿತ್ತರು. ಸುಲಭ ಗುರಿಯನ್ನು ರಾಜ್ಯ ತಂಡ 16 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಬೆನ್ನತ್ತಿತು. ಮಯಾಂಕ್‌ 26, ದೇವದತ್‌ ಪಡಿಕ್ಕಲ್‌ 24 ರನ್‌ ಗಳಿಸಿದರು. ರಾಜ್ಯ ತಂಡ ತನ್ನ 3ನೇ ಪಂದ್ಯವನ್ನು ಅ.21ಕ್ಕೆ ಡೆಲ್ಲಿ ವಿರುದ್ಧ ಆಡಲಿದೆ. ತಮಿಳುನಾಡು ವಿರುದ್ಧದ ಮೊದಲ ಪಂದ್ಯ ಮಳೆಗೆ ರದ್ದಾಗಿತ್ತು.