Novak Djokovic ಲಸಿಕೆ ವಿನಾಯಿತಿ ಸಿಗದಿದ್ರೆ ಫ್ರೆಂಚ್ ಓಪನ್, ವಿಂಬಲ್ಡನ್ನಲ್ಲೂ ಆಡಲ್ಲ ಎಂದ ಜೋಕೋ!
* ಕೋವಿಡ್ 19 ಲಸಿಕೆ ವಿರುದ್ದ ಸೆಡ್ಡುಹೊಡೆದ ನೊವಾಕ್ ಜೋಕೋವಿಚ್
* ಕೋವಿಡ್ ಲಸಿಕೆ ವಿರುದ್ದ ಸೆಡ್ಡು ಹೊಡೆದು ಆಸ್ಟ್ರೇಲಿಯನ್ ಓಪನ್ನಿಂದ ಹೊರಗುಳಿದಿದ್ದ ಜೋಕೋ
* ಲಸಿಕೆ ಕಡ್ಡಾಯಗೊಳಿಸಿದರೆ ವಿಂಬಲ್ಡನ್ ನಲ್ಲೂ ಆಡೋಲ್ಲವೆಂದ ಟೆನಿಸ್ ದಿಗ್ಗಜ
ಲಂಡನ್(ಫೆ.16): ಕೋವಿಡ್ ಲಸಿಕೆ (vaccination) ಪಡೆಯಲ್ಲ ಎಂಬ ತಮ್ಮ ನಿರ್ಧಾರದ ಮೇಲೆ ದೃಢವಾಗಿ ನಿಂತಿರುವ ವಿಶ್ವ ನಂ.1 ಟೆನಿಸಿಗ ನೋವಾಕ್ ಜೋಕೋವಿಚ್(Novak Djokovic), ಲಸಿಕೆ ಕಡ್ಡಾಯಗೊಳಿಸುವ ಯಾವುದೇ ಟೂರ್ನಿಯಲ್ಲಿ ಆಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಬಿಸಿ ಜೊತೆಗಿನ ಸಂದರ್ಶನದಲ್ಲಿ ಫ್ರೆಂಚ್ ಓಪನ್ (French Open) ಹಾಗೂ ವಿಂಬಲ್ಡನ್ನಲ್ಲಿ (Wimbledon) ಲಸಿಕೆ ಕಡ್ಡಾಯಗೊಳಿಸಿದರೆ ಆಡುತ್ತೀರಾ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
‘ಲಸಿಕೆ ಪಡೆಯದಿದ್ದಕ್ಕೆ ನಾನು ಬೆಲೆ ತೆರಲಿದ್ದೇನೆ. ಆದರೆ ನನ್ನ ಶರೀರದ ಮೇಲೆ ನಾನು ತೆಗೆದುಕೊಳ್ಳುವ ನಿರ್ಧಾರ ಯಾವುದೇ ಟ್ರೋಫಿಗಿಂತಲೂ ಹೆಚ್ಚು ಮುಖ್ಯ. ನಾನು ಸಾಧ್ಯವಾದಷ್ಟು ನನ್ನ ದೇಹಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ನಾನು ಯಾವತ್ತೂ ಲಸಿಕಾ ವಿರೋಧಿಯಲ್ಲ. ಜಾಗತಿಕವಾಗಿ ಸೋಂಕು ತಂದಿಟ್ಟಸಂಕಷ್ಟದ ಬಗ್ಗೆ ಅರಿವಿದೆ. ಕೊರೋನಾ ಶೀಘ್ರದಲ್ಲೇ ನಿವಾರಣೆಯಾಗಲಿ ಎಂದು ಬಯಸುತ್ತೇನೆ’ ಎಂದಿದ್ದಾರೆ.
ವಿಶೇಷ ಸ್ಥಾನಮಾನ ಬಯಸಿಲ್ಲ: ಯಾವುದೇ ವಿಶೇಷ ಸ್ಥಾನಮಾನ ಬಯಸಿ ಆಸ್ಪ್ರೇಲಿಯನ್ ಓಪನ್ ಆಡಲು ನಾನು ಬಯಸಿಲ್ಲ. ನನ್ನನ್ನು ಎಲ್ಲರಂತೆಯೇ ನಡೆಸಿಕೊಳ್ಳಲಾಯಿತು. ನಿಯಮ ಬದ್ಧವಾಗಿಯೇ ಟೂರ್ನಿಯಲ್ಲಿ ಪಾಲ್ಗೊಳ್ಳಲು ವೈದ್ಯಕೀಯ ವಿನಾಯಿತಿ ಮೂಲಕ ಸಾಧ್ಯವಿದ್ದಾಗ ಅದನ್ನು ಪ್ರಯತ್ನಿಸಿದ್ದೇನೆ’ ಎಂದು ಹೇಳಿದ್ದಾರೆ.
ಪ್ರೊ ಕಬಡ್ಡಿ: ನಿರ್ಣಾಯದ ಪಂದ್ಯದಲ್ಲಿ ಸೋತ ಬುಲ್ಸ್ ಪ್ಲೇ-ಆಫ್ ಹಾದಿ ಕಠಿಣ
ಬೆಂಗಳೂರು: ನಿರ್ಣಾಯಕ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡ ವಿರೋಚಿತ ಸೋಲನುಭವಿಸಿದ್ದು, 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಪ್ಲೇ-ಆಫ್ ಹಾದಿ ಕಠಿಣಗೊಂಡಿದೆ. ಮಂಗಳವಾರದ ಪಂದ್ಯದಲ್ಲಿ ಬುಲ್ಸ್, ಪಾಟ್ನಾ ಪೈರೇಟ್ಸ್ ವಿರುದ್ಧ 34-36 ಅಂಕಗಳಿಂದ ಸೋಲುಂಡಿತು.
21 ಪಂದ್ಯಗಳಲ್ಲಿ ಬುಲ್ಸ್ 61 ಅಂಕಗಳಿಸಿದ್ದು, ಹರ್ಯಾಣ ವಿರುದ್ಧದ ಕೊನೆ ಪಂದ್ಯದಲ್ಲಿ ಗೆದ್ದರೂ ಪ್ಲೇ-ಆಫ್ ಪ್ರವೇಶ ಇತರೆ ತಂಡಗಳ ಅಂಕಗಳ ಮೇಲೆ ನಿರ್ಧಾರವಾಗಲಿದೆ. ಈಗಾಗಲೇ ಪ್ಲೇ-ಆಫ್ ಪ್ರವೇಶಿಸಿರುವ ಪಾಟ್ನಾ 80 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಮೊದಲಾರ್ಧದಲ್ಲಿ ಬುಲ್ಸ್ 14-19 ಅಂಕಗಳಿಂದ ಹಿಂದಿದ್ದರೂ ಬಳಿಕ ಪುಟಿದೆದ್ದು ತೀವ್ರ ಪೈಪೋಟಿ ನೀಡಿತು.
Pro Kabaddi League: ಪಾಟ್ನಾ ಸವಾಲು ಗೆಲ್ಲುತ್ತಾ ಬೆಂಗಳೂರು ಬುಲ್ಸ್..?
ಕೊನೆ ಒಂದು ನಿಮಿಷವಿರುವಾಗ ಅಂಕಗಳು 34-34ರಿಂದ ಸಮಬಲಗೊಂಡಿದ್ದರೂ ಬಳಿಕ 2 ಅಂಕ ಸಂಪಾದಿಸಿ ಪಾಟ್ನಾ ಜಯಗಳಿಸಿತು. ಪಾಟ್ನಾದ ಮೋನು 9 ಅಂಕ ಪಡೆದರೆ, ಬುಲ್ಸ್ ನಾಯಕ ಪವನ್ ಕುಮಾರ್ 7, ರಂಜಿತ್ 6 ರೈಡ್ ಅಂಕ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಜೈಪುರ 28-44 ಅಂಕಗಳಿಂದ ಗೆಲುವು ಸಾಧಿಸಿತು. ಬುಧವಾರ ಬೆಂಗಾಲ್-ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್-ಜೈಪುರ ಮುಖಾಮುಖಿಯಾಗಲಿವೆ.
ಬೆಂಗ್ಳೂರು ಓಪನ್: ರಾಮ್ಗೆ ಮೊದಲ ಸುತ್ತಲ್ಲೇ ಆಘಾತ
ಬೆಂಗಳೂರು: ಬೆಂಗಳೂರು ಓಪನ್-2 ಎಟಿಪಿ ಟೆನಿಸ್ ಟೂರ್ನಿಯಲ್ಲಿ (Bengaluru Open) ಭಾರತದ ನಂ.1 ಆಟಗಾರ, ರಾಮ್ಕುಮಾರ್ ರಾಮ್ನಾಥನ್ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಮಂಗಳವಾರ ಅವರು ಫ್ರಾನ್ಸ್ನ ಮಥಿಯಾಸ್ ಬೊಗ್ರ್ಯೂ ವಿರುದ್ಧ 4-6, 6-3, 6-2 ಸೆಟ್ಗಳಲ್ಲಿ ಸೋತು ಹೊರಬಿದ್ದರು.
ದಿನಗಳ ಹಿಂದಷ್ಟೇ ಬೆಂಗಳೂರು ಓಪನ್ 1 ಟೂರ್ನಿಯ ಚಾಂಪಿಯನ್ ಆಗಿದ್ದ ಚೈನೀಸ್ ತೈಪೆಯ ಚುನ್-ಸಿನ್ ಸೆಂಗ್ ಫೈ ಕೂಡಾ ಮೊದಲ ಸುತ್ತಿನಲ್ಲಿ ಸೋಲನುಭವಿಸಿದರು. ಭಾರತದ ಆಟಗಾರರ ಪೈಕಿ ಸಿದ್ಧಾಥ್ರ್ ರಾವತ್ ಮಾತ್ರ ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ. ಡಬಲ್ಸ್ನಲ್ಲಿ ಶ್ರೀರಾಮ್-ವಿಷ್ಣುವರ್ಧನ್ ಜೋಡಿ ಸೂರಜ್-ರಿಶಿ ರೆಡ್ಡಿ ಜೋಡಿ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಏಷ್ಯಾ ಬ್ಯಾಡಿಂಟನ್: ಭಾರತಕ್ಕೆ 0-5 ಸೋಲು
ಶಾ ಆಲಂ(ಮಲೇಷ್ಯಾ): ಏಷ್ಯಾ ಬ್ಯಾಡ್ಮಿಂಟನ್ ತಂಡಗಳ ಚಾಂಪಿಯನ್ಶಿಪ್ನಲ್ಲಿ ಭಾರತ ಪುರುಷರ ತಂಡ ಸೋಲಿನ ಆರಂಭ ಪಡೆದಿದೆ. ‘ಎ’ ಗುಂಪಿನ ಪಂದ್ಯದಲ್ಲಿ ಭಾರತ, ದಕ್ಷಿಣ ಕೊರಿಯಾ ವಿರುದ್ಧ 0-5ರಲ್ಲಿ ಸೋಲುಂಡಿತು. ಲಕ್ಷ್ಯ ಸೆನ್ ಮುಂದಾಳತ್ವದ ತಂಡ ಉತ್ತಮ ಹೋರಾಟ ತೋರಿದರೂ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುರುವಾರ 2ನೇ ಪಂದ್ಯದಲ್ಲಿ ಭಾರತಕ್ಕೆ ಹಾಂಕಾಂಗ್ ಎದುರಾಗಲಿದೆ.