ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ ಕಾಲಿನ ಸ್ನಾಯು ಸೆಳೆತದಿಂದ ಗಾಯಗೊಂಡಿದ್ದು, ಮುಂದಿನ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸಿಎಸ್‌ಕೆಗೆ ಇದು ದೊಡ್ಡ ನಷ್ಟವಾಗಿದೆ.

ಹೈದರಾಬಾದ್: ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ ಗಾಯಗೊಂಡಿದ್ದು, ಮುಂದಿನ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ನಿನ್ನೆ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಅವರ ಕಾಲಿನ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಯುಷ್ ಮ್ಹಾತ್ರೆ ಇಡೀ ಸೀಸನ್‌ನಿಂದ ಹೊರಗುಳಿಯುತ್ತಾರಾ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಅವರ ಗಾಯ ಗಂಭೀರವಾಗಿದೆ ಎಂದು ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಸುಳಿವು ನೀಡಿದ್ದಾರೆ.

ಫಿಸಿಯೋ-ಸಹ ಆಟಗಾರರ ಸಹಾಯದಿಂದ ಪೆವಿಲಿಯನ್ ಸೇರಿದ ಮ್ಹಾತ್ರೆ

ಬ್ಯಾಟಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾದ ಮ್ಹಾತ್ರೆಯಿಂದ ಓಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಔಟಾದ ನಂತರ ಸಹ ಆಟಗಾರರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನದಿಂದ ಹೊರಗೆ ಕರೆದೊಯ್ದರು. ಹೈದರಾಬಾದ್ ನೀಡಿದ್ದ 195 ರನ್‌ಗಳ ಗುರಿ ಬೆನ್ನಟ್ಟುವಾಗ ಐದನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಎರಡನೇ ರನ್ ಓಡುವಾಗ ಮ್ಹಾತ್ರೆಯ ಕಾಲಿನಲ್ಲಿ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಲು ಅವರು ಪ್ರಯತ್ನಿಸಿದರೂ, ಮುಂದಿನ ಓವರ್‌ನಲ್ಲೇ ಔಟಾದರು. ನಂತರ ನಡೆಯಲು ಸಾಧ್ಯವಾಗದ ಅವರನ್ನು ಫಿಸಿಯೋ ಮತ್ತು ಸಹ ಆಟಗಾರರು ಡ್ರೆಸ್ಸಿಂಗ್ ರೂಮ್‌ಗೆ ಕರೆದೊಯ್ದರು.

"ಮ್ಹಾತ್ರೆಯ ಗಾಯವು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸದ್ಯಕ್ಕೆ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಉತ್ತಮ ಫಾರ್ಮ್‌ನಲ್ಲಿದ್ದ ಯುವ ಆಟಗಾರನನ್ನು ಕಳೆದುಕೊಳ್ಳುವುದು ತಂಡಕ್ಕೆ ದೊಡ್ಡ ನಷ್ಟ. ಸ್ಕ್ಯಾನಿಂಗ್ ವರದಿ ಬಂದ ನಂತರವಷ್ಟೇ ಅವರಿಗೆ ಎಷ್ಟು ದಿನ ವಿಶ್ರಾಂತಿ ಬೇಕು ಎಂದು ಹೇಳಲು ಸಾಧ್ಯ," ಎಂದು ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಸ್ಪಷ್ಟಪಡಿಸಿದ್ದಾರೆ.

ಬಿಟ್ಟೂ ಬಿಡದಂತೆ ಚೆನ್ನೈ ತಂಡವನ್ನು ಕಾಡುತ್ತಿದೆ ಫಾರ್ಮ್ ಸಮಸ್ಯೆ

ಈ ಸೀಸನ್‌ನಲ್ಲಿ ಗಾಯದ ಸಮಸ್ಯೆ ಚೆನ್ನೈ ತಂಡವನ್ನು ಬಿಡದೆ ಕಾಡುತ್ತಿದೆ. ವೇಗದ ಬೌಲರ್ ಖಲೀಲ್ ಅಹ್ಮದ್ ಗಾಯದ ಕಾರಣದಿಂದ ಈಗಾಗಲೇ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸೀಸನ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾದ ವೇಗಿ ನಾಥನ್ ಎಲ್ಲಿಸ್ ಅವರ ಸೇವೆಯನ್ನೂ ಚೆನ್ನೈ ಕಳೆದುಕೊಂಡಿತ್ತು. ಇದರ ಬೆನ್ನಲ್ಲೇ ಈಗ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದ ಮಾತ್ರೆ ಕೂಡ ಗಾಯಗೊಂಡಿದ್ದಾರೆ.

ಹೈದರಾಬಾದ್ ವಿರುದ್ಧ 10 ರನ್‌ಗಳಿಂದ ಸೋತ ಚೆನ್ನೈ, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ 13 ಎಸೆತಗಳಲ್ಲಿ 30 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ, ಮಧ್ಯಮ ಕ್ರಮಾಂಕದ ವೈಫಲ್ಯ ತಂಡಕ್ಕೆ ಮುಳುವಾಯಿತು. ನಾಯಕ ಋತುರಾಜ್ ಗಾಯಕ್ವಾಡ್ ಅವರ ಕಳಪೆ ಫಾರ್ಮ್ ಕೂಡ ತಂಡಕ್ಕೆ ತಲೆನೋವಾಗಿದೆ. ಆರು ಪಂದ್ಯಗಳಿಂದ ಚೆನ್ನೈ ಖಾತೆಯಲ್ಲಿ ಕೇವಲ ನಾಲ್ಕು ಅಂಕಗಳಿವೆ. ಮುಂಬರುವ ಪಂದ್ಯಗಳಲ್ಲಿ ಮ್ಹಾತ್ರೆಯ ಬದಲಿಗೆ ಯಾರು ಆಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯಕ್ಕೆ ಊರ್ವಿಲ್ ಪಟೇಲ್ ಅವರು ಮ್ಹಾತ್ರೆಯ ಸ್ಥಾನ ತುಂಬುವ ಸಾಧ್ಯತೆ ಇದೆ.