14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಒಂದು ಕಡೆ ಸರಾಗವಾಗುತ್ತಿದ್ದರೆ, ಮತ್ತೊಂದೆಡೆ ಕೋವಿಡ್ 19 ವಕ್ರದೃಷ್ಠಿ ಮಿಲಿಯನ್ ಡಾಲರ್ ಟೂರ್ನಿಯ  ಮೇಲೆ ಬಿದ್ದಿದ್ದು, ಇಬ್ಬರು ಪ್ರಮುಖ ಅಂಪೈರ್‌ಗಳು ದಿಢೀರ್ ಎನ್ನುವಂತೆ ಐಪಿಎಲ್‌ನಿಂದ ಹೊರ ನಡೆದಿದ್ದಾರೆ. ಈ ಕುರಿತಾಧ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.29): ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್‌ನಲ್ಲಿ ಕೊರೋನಾ ಭೀತಿಯಿಂದ ಕೆಲವು ಆಟಗಾರರು ಹಿಂದೆ ಸರಿದಿದ್ದಾರೆ. ಇದೀಗ ಅಂಪೈರ್‌ಗಳ ಸರದಿ. ಭಾರತದ ಪ್ರಮುಖ ಅಂಪೈರ್ ನಿತಿನ್ ಮೆನನ್‌ ಹಾಗೂ ಆಸ್ಟ್ರೇಲಿಯಾದ ಸಹಪಾಠಿ ಪೌಲ್ ರೈಫೆಲ್‌ ವೈಯುಕ್ತಿಕ ಕಾರಣ ನೀಡಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ದಿಢೀರ್ ಎನ್ನುವಂತೆ ಹಿಂದೆ ಸರಿದ್ದಿದ್ದಾರೆ

ನಿತಿನ್ ಮೆನನ್ ಇಂದೋರ್ ನಿವಾಸಿಯಾಗಿದ್ದು, ತಮ್ಮ ಪತ್ನಿ ಹಾಗೂ ತಾಯಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಬಯೋ ಬಬಲ್ ತೊರೆದು ತಮ್ಮ ಮನೆಯತ್ತ ಮುಖ ಮಾಡಿದ್ದಾರೆ. ಐಸಿಸಿ ಎಲೈಟ್‌ ಪ್ಯಾನಲ್‌ನಲ್ಲಿ ಸ್ಥಾನ ಪಡೆದಿರುವ ಭಾರತ ಏಕೈಕ ಅಂಪೈರ್ ಎನಿಸಿಕೊಂಡಿರುವ ನಿತಿನ್ ಮೆನನ್, ಇತ್ತೀಚೆಗಷ್ಟೇ ತವರಿನಲ್ಲಿ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ದದ ಸರಣಿಯಲ್ಲಿ ಕರಾರುವಕ್ಕಾದ ತೀರ್ಪು ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. 

Scroll to load tweet…

ತಮ್ಮ ಕುಟುಂಬಸ್ಥರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ತಕ್ಷಣವೇ ತವರಿಗೆ ವಾಪಾಸಾಗುವ ತೀರ್ಮಾನ ಮಾಡಿದ್ದಾರೆ. ಈ ವಿಚಾರ ತಿಳಿದ ಬಳಿಕ ಅಂಪೈರ್ ಅಗಿ ಕಾರ್ಯ ನಿರ್ವಹಿಸಲು ಮೆನನ್ ಮಾನಸಿಕವಾಗಿ ಸಿದ್ದವಿರಲಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಐಪಿಎಲ್ 2021: ಆ್ಯಡಂ ಜಂಪಾ ದಿಢೀರನೇ ಬಯೋ-ಬಬಲ್ ತೊರೆದಿದ್ದೇಕೆ..?

ಇನ್ನು ಮತ್ತೊಂದೆಡೆ ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ. ಹೀಗಾಗಿ ದಿಢೀರ್ ಎನ್ನುವಂತೆ ಐಪಿಎಲ್ ತೊರೆದು ಪೌಲ್ ರೈಫೆಲ್‌ ಕಾಂಗರೂ ನಾಡಿಗೆ ಹಿಂತಿರುಗಿದ್ದಾರೆ.

ಈ ಮೊದಲು ಅಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ, ಕೇನ್ ರಿಚರ್ಡ್‌ಸನ್‌, ಆ್ಯಡಂ ಜಂಪಾ ಹಾಗೂ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಕೋವಿಡ್ ಭೀತಿಯಿಂದ ಐಪಿಎಲ್‌ ಟೂರ್ನಿಯನ್ನು ಅರ್ಧಕ್ಕೆ ತೊರೆದು ಮನೆ ಸೇರಿಕೊಂಡಿದ್ದಾರೆ.

"