ಇಂಗ್ಲೆಂಡ್ ವಿರುದ್ಧ ಟಿ-20ಯಲ್ಲಿ ಅವಮಾನದ ಸೋಲನ್ನ ಅನುಭವಿಸಿರುವ ಟೀಂ ಇಂಡಿಯಾಗೆ ಸೇಡು ತೀರಿಸಿಕೊಳ್ಳಲು ಅವಕಾಶ ಒದಗಿ ಬಂದಿದೆ. ಇವತ್ತಿನಿಂದ ಏಕದಿನ ಸರಣಿ ಆರಂಭ ಆಗ್ತಿದ್ದು, ಮಧ್ಯಾಹ್ನ 3 ಗಂಟೆಯಿಂದ ಮ್ಯಾಚ್ ಆರಂಭವಾಗಲಿದೆ.
ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 0-4 ಅಂತರದ ಹೀನಾಯ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಈಗ ಏಕದಿನ ಸರಣಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಇಂದು ಎಡ್ಜ್ಬಾಸ್ಟನ್ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಅನುಭವಿ ಆಟಗಾರರ ಆಗಮನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಒತ್ತಡದಲ್ಲಿ ಭಾರತ ತಂಡ
ಟಿ20 ಸರಣಿಯ ವೈಫಲ್ಯದ ಬಳಿಕ ಭಾರತ ತಂಡದ ಮೇಲೆ ಭಾರಿ ಒತ್ತಡವಿದೆ. ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಬ್ಯಾಟರ್ಗಳು ಮರಳುತ್ತಿರುವುದು ತಂಡಕ್ಕೆ ದೊಡ್ಡ ಬಲ ತಂದಿದೆ. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಇವರು ಇಂಗ್ಲೆಂಡ್ ಬೌಲರ್ಗಳಿಗೆ ಸವಾಲಾಗಲಿದ್ದಾರೆ. ಇವರೊಂದಿಗೆ ವೇಗಿ ಜಸ್ಪ್ರೀತ್ ಬುಮ್ರಾ ಪುನರಾಗಮನ ಮಾಡಿರುವುದು ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ.

ಯಾರಿಗೆ ಲಾಭ?
ಎಡ್ಜ್ಬಾಸ್ಟನ್ ಮೈದಾನದ ಪಿಚ್ ಸಾಮಾನ್ಯವಾಗಿ ಗಟ್ಟಿಯಾಗಿರುತ್ತದೆ ಮತ್ತು ಇಲ್ಲಿ ಉತ್ತಮ ಬೌನ್ಸ್ ಕಂಡುಬರುತ್ತದೆ. ಇದು ಬ್ಯಾಟರ್ಗಳಿಗೆ ಸಾಕಷ್ಟು ನೆರವು ನೀಡಲಿದ್ದು, ಚೆಂಡು ಬ್ಯಾಟ್ಗೆ ಸರಿಯಾಗಿ ಬರುವುದರಿಂದ ರನ್ ಗಳಿಸುವುದು ಸುಲಭವಾಗಲಿದೆ. ಆದರೆ, ಪಂದ್ಯ ಮುಂದುವರಿದಂತೆ ಪಿಚ್ ನಿಧಾನವಾಗುವ ಸಾಧ್ಯತೆ ಇದೆ. ಇದು ಸ್ಪಿನ್ನರ್ಗಳಿಗೆ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ವೈವಿಧ್ಯಮಯ ಬೌಲಿಂಗ್ ಮಾಡುವ ವೇಗಿಗಳಿಗೆ ಸಹಕಾರಿಯಾಗಲಿದೆ. ಎಡ್ಜ್ಬಾಸ್ಟನ್ ಮೈದಾನದಲ್ಲಿ ಭಾರತ ಇದುವರೆಗೆ 12 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿ ಭಾರತದ ಇತಿಹಾಸ ಉತ್ತಮವಾಗಿದ್ದರೂ, ಕಳೆದ ಬಾರಿ (2019ರ ವಿಶ್ವಕಪ್) ಇಂಗ್ಲೆಂಡ್ ವಿರುದ್ಧ ಇಲ್ಲಿ ಆಡಿದಾಗ ಭಾರತ 31 ರನ್ಗಳಿಂದ ಸೋತಿತ್ತು.
ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅರ್ಶದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್.
ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋ ರೂಟ್, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಸಾಕಿಬ್ ಮಹಮೂದ್, ಸ್ಯಾಮ್ ಕರನ್, ಜೋಶ್ ಟಂಗ್, ಟಾಮ್ ಬ್ಯಾಂಟನ್, ವಿಲ್ ಜಾಕ್ಸ್, ಗಸ್ ಅಟ್ಕಿನ್ಸನ್, ಜೇಮ್ಸ್ ಕೋಲ್ಸ್, ರೆಹಾನ್ ಅಹ್ಮದ್.


