ಬೆಂಚ್ ಸ್ಟ್ರೆಂಥ್ ಹೆಚ್ಚಿದ್ರೆ ದ್ರಾವಿಡ್ಗೆ ಲಾಭ, ಸೀನಿಯರ್ ಪ್ಲೇಯರ್ಸ್ಗೆ ಶುರುವಾಯ್ತು ಪೀಕಲಾಟ..!
ಸಾಕಷ್ಟು ಬಲಿಷ್ಠವಾಗಿದೆ ಟೀಂ ಇಂಡಿಯಾ ಬೆಂಚ್ ಸ್ಟ್ರೆಂಥ್
ಕಳೆದ 8 ತಿಂಗಳಿಂದ ಟೀಂ ಇಂಡಿಯಾ ಪ್ರಯೋಗ ಶಾಲೆಯಾಗಿತ್ತು
ಏಷ್ಯಾಕಪ್ನಲ್ಲಿ ಬಲಿಷ್ಠ ಭಾರತ ತಂಡ ಕಣಕ್ಕಿಳಿಸಲಾಗಿದೆ
ಬೆಂಗಳೂರು(ಆ.12): ಏನ್ ರೀ ಇದು. ಟೀಂ ಇಂಡಿಯಾನೋ ಅಥವಾ ಪ್ರಯೋಗ ಶಾಲೆನೋ. ರಾಹುಲ್ ದ್ರಾವಿಡ್ ಕೋಚ್ ಆದ್ಮೇಲೆ ಸಿಕ್ಕ ಸಿಕ್ಕ ಆಟಗಾರರನ್ನೆಲ್ಲಾ ಆಡಿಸ್ತಿದ್ದಾರೆ. ಇವರೇನು ವಿಶ್ವಕಪ್ಗೆ ಬಲಿಷ್ಠ ಭಾರತ ತಂಡ ಕಟ್ಟುತ್ತಿದ್ದಾರೋ ಅಥವಾ ಎಲ್ಲಾ ಆಟಗಾರರಿಗೂ ಆಡಲು ಚಾನ್ಸ್ ಕೊಡ್ತಿದ್ದಾರೋ ಅಂತ ಕೇಳಿದವರೇ ಹೆಚ್ಚು. ಯಾಕಂದ್ರೆ ದ್ರಾವಿಡ್, ಕೋಚ್ ಆದ್ಮೇಲೆ ಕಳೆದ 8 ತಿಂಗಳಿಂದ ಟೀಂ ಇಂಡಿಯಾ ಪ್ರಯೋಗ ಶಾಲೆಯಾಗಿತ್ತು. ಒಂದು ಪಂದ್ಯಕ್ಕೆ ಒಂದು ಸರಣಿಗೆ ಈ ಎಕ್ಸ್ಪೆರಿಮೆಂಟ್ಸ್ ಸೀಮಿತವಾಗಿರಲಿಲ್ಲ. 2021ರ ಡಿಸೆಂಬರ್ನಿಂದ ಹಿಡಿದು ಮೊನ್ನೆ ವಿಂಡೀಸ್ ಸಿರೀಸ್ ವರೆಗೂ ಬರೀ ಎಕ್ಸ್ಪೆರಿಮೆಂಟ್ಸ್ಗಳೇ.
ಆದರೆ 8 ತಿಂಗಳ ಈ ಪ್ರಯೋಗಕ್ಕೆ ಫುಲ್ ಸ್ಟಾಪ್ ಇಟ್ಟು, ಏಷ್ಯಾಕಪ್ನಲ್ಲಿ ಬಲಿಷ್ಠ ಭಾರತ ತಂಡ ಕಣಕ್ಕಿಳಿಸಲಾಗಿದೆ. ಅಷ್ಟಕ್ಕೂ ಇಷ್ಟೊಂದು ಪ್ರಯೋಗ ಬೇಕಿತ್ತಾ. ಈ ಎಕ್ಸ್ಪೆರಿಮೆಂಟ್ಸ್ನಿಂದ ಭಾರತೀಯ ಕ್ರಿಕೆಟ್ಗೆ ಆದ ಲಾಭವಾದ್ರೂ ಏನು..? ಅತಿ ಬುದ್ಧಿವಂತ ದ್ರಾವಿಡ್ ಏನೇನು ಮಾಡಿದ್ರು ಅಂತ ಹೇಳೋರು ಇದ್ದಾರೆ. ಅದು ನಿಜ ಅನ್ನಿ. ದ್ರಾವಿಡ್ ಕೋಚ್ ಆದ್ಮೇಲೆ ಅರ್ಧಶತಕಕ್ಕೂ ಹೆಚ್ಚು ಮಂದಿ ಭಾರತದ ಜೆರ್ಸಿ ಹಾಕಿಕೊಂಡು ಮೈದಾನಕ್ಕಿಳಿದಿದ್ದಾರೆ. ಇಷ್ಟೊಂದು ಆಟಗಾರರಿಗೆ ಅವಕಾಶ ಕೊಡುವ ಅಗತ್ಯತೆ ಏನಿತ್ತು ಅಲ್ವಾ..?
ಒಬ್ಬ ಆಟಗಾರನಿಗೆ ಇಬ್ಬರು ರಿಸರ್ವ್ ಪ್ಲೇಯರ್ಸ್:
ದ್ರಾವಿಡ್ ಪ್ರಯೋಗ ಮಾಡಿದ್ರಿಂದ ಬೆಂಚ್ ಸ್ಟ್ರೆಂಥ್ ಮಾತ್ರ ಹೆಚ್ಚಲಿಲ್ಲ, ಸೀನಿಯರ್ಸ್ ಪ್ಲೇಯರ್ಗಳಲ್ಲಿ ಆತಂಕ ಸಹ ಶುರುವಾಗಿದೆ. ಒಬ್ಬ ಆಟಗಾರ ಇಂಜುರಿಯಾದ್ರೆ ಆತನ ಬದಲು ಆಡಲು ಇಬ್ಬರು ರೆಡಿಯಾಗಿದ್ದಾರೆ. ಅದು ಗಾಯಾಳುವಾದ ಆಟಗಾರನಷ್ಟೇ ಬಲಿಷ್ಠ ಆಟಗಾರ. ಇದು ದ್ರಾವಿಡ್ ಪ್ರಯೋಗದಿಂದ ಟೀಂ ಇಂಡಿಯಾಗೆ ಆದ ಲಾಭ. ಇಷ್ಟು ಬೆಂಚ್ ಸ್ಟ್ರೆಂಥ್ ವಿಶ್ವದ ಯಾವ್ದೇ ತಂಡಕ್ಕೂ ಇಲ್ಲ. ಇನ್ನು ಗಾಯಾಳುವಾಗಿ ಅಥವಾ ಕಳಪೆ ಫಾರ್ಮ್ನಿಂದ ಹೊರಗುಳಿದ್ರೆ ಆತ ಟೀಮ್ಗೆ ಕಮ್ಬ್ಯಾಕ್ ಮಾಡೋದು ತುಂಬಾನೇ ಕಷ್ಟ. ಯಾಕಂದರೆ ಆತನ ಬದಲು ಆಡಿದ ಆಟಗಾರರು ಉತ್ತಮ ಪ್ರದರ್ಶನ ನೀಡಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಂಡು ಬಿಡ್ತಾರೆ. ಹಾಗಾಗಿಯೇ ಸೀನಿಯರ್ ಪ್ಲೇಯರ್ಸ್ಗೆ ನಡುಕ ಶುರುವಾಗಿರೋದು.
ಇಶಾನ್-ದೀಪಕ್ ಕಿಕೌಟ್ ಮಾಡಿದ ಹೂಡ-ಅರ್ಶದೀಪ್:
2021ರ ಟಿ20 ವಿಶ್ವಕಪ್ ಆಡಿದ್ದ ಇಶಾನ್ ಕಿಶನ್ ಅಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಟೀಮ್ನಲ್ಲಿದ್ದರು. ಆದ್ರೆ ದ್ರಾವಿಡ್ ಪ್ರಯೋಗದಿಂದಾಗಿ ದೀಪಕ್ ಹೂಡ ಟೀಂಗೆ ಎಂಟ್ರಿಯಾಗಿ ಭರ್ಜರಿ ಪ್ರದರ್ಶನ ನೀಡಿದ್ರು. ಪರಿಣಾಮ ಇಶಾನ್ ಟೀಮ್ನಿಂದ ಕಿಕೌಟ್ ಆದ್ರೆ ಹೂಡಾಗೆ ಏಷ್ಯಾಕಪ್ ಟೀಂನಲ್ಲಿ ಚಾನ್ಸ್ ಸಿಕ್ಕಿದೆ. ಇನ್ನು ದೀಪಕ್ ಚಹರ್ ಟೀಂಇಂಡಿಯಾದ ಮೇನ್ ಬೌಲರ್ ಆಗಿದ್ದರು. ಆದ್ರೆ ಇಂಜುರಿಯಾಗಿ ಹೊರಗುಳಿದ ಬಳಿಕ ಅರ್ಷದೀಪ್ ಅದ್ಭುತ ಪ್ರದರ್ಶನ ನೀಡಿ ತಮ್ಮ ಸ್ಥಾನ ಖಾಯಂ ಮಾಡಿಕೊಂಡ್ರು. ಏಷ್ಯಾಕಪ್ ಟೀಮ್ನಲ್ಲಿ ಅರ್ಷದೀಪ್ ಸ್ಥಾನ ಪಡೆದ್ರೆ, ದೀಪಕ್ ಸ್ಟಾಡ್ ಬೈ ಪ್ಲೇಯರ್ ಆಗಿದ್ದಾರೆ. ಡಿಕೆ ಆರ್ಭಟಿಸಿ ಪಂತ್ಗೆ ಪ್ಲೇಯಿಂಗ್-11ನಲ್ಲಿ ಅವಕಾಶ ಸಿಗದಂತೆ ಮಾಡಿದ್ದಾರೆ. ಇವೆಲ್ಲಾ ಆಗಿರೋದು ದ್ರಾವಿಡ್ ಮಾಡಿದ ಪ್ರಯೋಗಗಳಿಂದ.
2022ರ ರನ್ ಸಾಧಕರಿಗಿಲ್ಲ ಏಷ್ಯಾಕಪ್ನಲ್ಲಿ ಸ್ಥಾನ..!
ಕಳೆದ ವರ್ಷ ಟಿ20 ವಿಶ್ವಕಪ್ ಆಡಿದ ಅರ್ಧಡಜನ್ ಪ್ಲೇಯರ್ಸ್ ಈ ಸಲದ ವರ್ಲ್ಡ್ಕಪ್ ಆಡಲ್ಲ. ಇದೆಲ್ಲಾ ಸಾಧ್ಯವಾಗಿದ್ದು ದ್ರಾವಿಡ್ ಮಾಡಿದ ಪ್ರಯೋಗಗಳಿಂದ. ಒಟ್ನಲ್ಲಿ ಕೋಚ್ ದ್ರಾವಿಡ್ ಬಲಿಷ್ಠ ಭಾರತ ತಂಡವನ್ನ ಕಟ್ಟಿದ್ದಾರೆ. ಕಳೆದ ವರ್ಷ ಮಿಸ್ ಆಗಿದ್ದ ಟಿ20 ವಿಶ್ವಕಪ್ ಈ ಸಲ ಸಿಕ್ಕೆರೆ ದ್ರಾವಿಡ್ ಪರಿಶ್ರಮಕ್ಕೆ ಬೆಲೆ ಸಿಕ್ಕಂದಾಗುತ್ತೆ.