ಸುಶಾಂತ್ ಸತ್ಯ ಗೆದ್ದೇ ಗೆಲ್ಲುತ್ತೆ ಸಹೋದರ ಎಂದ ಸುರೇಶ್ ರೈನಾ..!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೆಲ ತಿಂಗಳ ಹಿಂದಷ್ಟೇ ಕೊನೆಯುಸಿರೆಳೆದ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಆ.24): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇಹಲೋಕ ತ್ಯಜಿಸಿ ಸುಮಾರು ಮೂರು ತಿಂಗಳುಗಳೇ ಉರುಳಿಹೋಗಿವೆ. ಆದರೆ ಸುಶಾಂತ್ ಸಾವಿನ ಕುರಿತಂತೆ ಚರ್ಚೆಗಳು, ಮಾತುಕತೆಗಳು ಮಾತ್ರ ನಿಂತಿಲ್ಲ.
ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜತೆಗಿರುವ ಫೋಟೋವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಈಗಲೂ ನೀನಿಲ್ಲ ಎನ್ನುವುದನ್ನು ನೆನಪಿಸಿಕೊಂಡರೆ ನನಗೆ ನೋವಾಗುತ್ತಿದೆ ಸಹೋದರ, ಆದರೆ ಖಂಡಿತ ಸತ್ಯ ಗೆದ್ದೇ ಗೆಲ್ಲುತ್ತದೆ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋದಲ್ಲಿ ಸುಶಾಂತ್ ಕೆಂಪು ಹ್ಯಾಟ್ ಹಾಕಿಕೊಂಡು ರೈನಾ ಜತೆ ಫೋಸ್ ಕೊಟ್ಟಿದ್ದರು. ಎಂ. ಎಸ್. ಧೋನಿ ಅನ್ಟೋಲ್ಡ್ ಸ್ಟೋರಿ ಸಿನೆಮಾ ತಯಾರು ಮಾಡುವ ಸಂದರ್ಭದಲ್ಲಿ ತೆಗೆಸಿಕೊಂಡಂತ ಫೋಟೋದಂತೆ ಕಂಡು ಬಂದಿದೆ. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರದಲ್ಲಿ ಸುಶಾಂತ್ ಧೋನಿ ಪಾತ್ರದಲ್ಲಿ ನಟಿಸಿ ಎಲ್ಲರ ಹೃದಯಗೆದ್ದಿದ್ದರು. ಎಂ. ಎಸ್. ಧೋನಿ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ಸುಶಾಂತ್ ಸಿಂಗ್ ಸಾವಿನ ತನಿಖೆಯಲ್ಲಿ ಪವಾರ್ ಪಾಲಿಟಿಕ್ಸ್..!
ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಜೂನ್ 14ರಂದು ಅವರ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿತ್ತು. ಸುಶಾಂತ್ ತಂದೆ ಕೆ.ಕೆ. ಸಿಂಗ್ ನಟಿ ಹಾಗೂ ಸುಶಾಂತ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಇದೀಗ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ ವಹಿಸಲಾಗಿದೆ. ಇನ್ನಾದರೂ ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಸಿಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ.