ಶಸ್ತ್ರಚಿಕಿತ್ಸೆಗೆ ಒಳಗಾದ ಟೀಂ ಇಂಡಿಯಾ ವೇಗಿ ಟಿ ನಟರಾಜನ್
ಟೀಂ ಇಂಡಿಯಾ ವೇಗದ ಬೌಲರ್ ಟಿ ನಟರಾಜನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಿಸಿಸಿಐಗೆ ನಟರಾಜನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.28): ಭಾರತದ ವೇಗಿ ಟಿ.ನಟರಾಜನ್ ಮಂಗಳವಾರ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವಿಷಯವನ್ನು ಸ್ವತಃ ನಟರಾಜನ್ ಅವರೇ ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ಬಿಸಿಸಿಐಗೆ ಧನ್ಯವಾದ ಹೇಳಿದ್ದಾರೆ.
ನಾನಿಂದು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದೆ. ವೈದ್ಯಕೀಯ ತಜ್ಞ ಸಿಬ್ಬಂದಿಗಳು ತೋರಿದ ಪ್ರೀತಿ ಕಾಳಜಿಗೆ ನಾನು ಆಭಾರಿಯಾಗಿದ್ದೇನೆ. ಇದೇ ವೇಳೆ ಬಿಸಿಸಿಐಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮತ್ತೆ 22 ಯಾರ್ಡ್ನ ಕ್ರಿಕೆಟ್ ಪಿಚ್ಗೆ ಮರಳಲು ಕೆಲಕಾಲ ತಡವಾಗಬಹುದು. ಆದರೆ ನಾನಿಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದೇನೆ. ಈ ಹಿಂದೆಂದಿಗಿಂತಲೂ ಸದೃಢವಾಗಿ ಹಾಗೂ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಯ ಶುಭ ಹಾರೈಕೆಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಆಸ್ಪ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡಿದ್ದ ನಟರಾಜನ್ ಸಂಪೂರ್ಣವಾಗಿ ಗುಣಮುಖರಾಗುವ ಮೊದಲೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ್ದರು. ಬಳಿಕ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ 2 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಗಾಯದ ಪ್ರಮಾಣ ಹೆಚ್ಚಾದ ಕಾರಣ, ಟೂರ್ನಿಯಿಂದಲೇ ಅವರು ಹೊರಬೀಳಬೇಕಾಯಿತು.
IPL 2021: ಸನ್ರೈಸರ್ಸ್ಗೆ ಶಾಕ್; ಸ್ಟಾರ್ ವೇಗಿ ಟೂರ್ನಿಯಿಂದಲೇ ಔಟ್..!
ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಟಿ ನಟರಾಜನ್, ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಬಳಿಕ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಮೂರು ಮಾದರಿಯ ಕ್ರಿಕೆಟ್ಗೂ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡಿದ್ದರು.