'ಟೇಬಲ್ ತುಂಬಾ ಟೈಟ್ ಆಗಿದೆ'; ಮುಂಬೈ ಎದುರಿನ ಸೋಲಿನ ಬೆನ್ನಲ್ಲೇ RCB ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?
* ಮುಂಬೈ ಇಂಡಿಯನ್ಸ್ ಎದುರು ಹೀನಾಯ ಸೋಲು ಕಂಡ ಆರ್ಸಿಬಿ
* ಆರ್ಸಿಬಿ ಸೋಲು ನೋವುಂಟು ಮಾಡಿದ ಎಂದ ಸಂಜಯ್ ಬಂಗಾರ್
* ಸಂಜಯ್ ಬಂಗಾರ್ ಆರ್ಸಿಬಿ ತಂಡದ ಹೆಡ್ ಕೋಚ್
ಮುಂಬೈ(ಮೇ.10): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲು ತಂಡಗಳ ನಡುವೆ ದಿನದಿಂದ ದಿನಕ್ಕೆ ಪೈಪೋಟಿ ಜೋರಾಗುತ್ತಿದೆ. ಮೇ 09ರಂದು ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ದ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೀನಾಯ ಸೋಲು ಅನುಭವಿಸಿದೆ. ಈ ಸೋಲು ತಂಡಕ್ಕೆ ದೊಡ್ಡ ಹೊಡೆತ ಕೊಟ್ಟಿದೆ ಎಂದು ಆರ್ಸಿಬಿ ಹೆಡ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
ಆರ್ಸಿಬಿ ಎದುರು ಮುಂಬೈ ಇಂಡಿಯನ್ಸ್ ತಂಡವು ಇನ್ನೂ 21 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಭಾರೀ ಅಂತರದ ಸೋಲಿನಿಂದಾಗಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7ನೇ ಸ್ಥಾನಕ್ಕೆ ಕುಸಿದಿದೆ. ಆರ್ಸಿಬಿ ತಂಡವು ಮುಂಬೈ ಎದುರು ವಾಂಖೇಡೆ ಮೈದಾನದಲ್ಲಿ 200 ರನ್ ರಕ್ಷಿಸಿಕೊಳ್ಳಲು ವಿಫಲವಾಯಿತು. ಸೂರ್ಯಕುಮಾರ್ ಯಾದವ್ ಹಾಗೂ ನಿಹಾಲ್ ವಧೇರಾ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಸುಲಭ ಗೆಲುವು ತಂದಕೊಟ್ಟರು. ಈ ಜೋಡಿ ಮೂರನೇ ವಿಕೆಟ್ಗೆ 140 ರನ್ಗಳ ಜತೆಯಾಟವಾಡುವ ಮೂಲಕ ಸವಾಲಿನ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು ಕೇವಲ 16.3 ಓವರ್ ಗಳಲ್ಲಿ ತಲುಪಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ 11 ಪಂದ್ಯಗಳಲ್ಲಿ 5 ಗೆಲುವು ಹಾಗೂ 6 ಸೋಲುಗಳೊಂದಿಗೆ 10 ಅಂಕಗಳನ್ನು ಗಳಿಸಿದೆ. ಇದೀಗ ಆರ್ಸಿಬಿ ಇನ್ನುಳಿದ 3 ಪಂದ್ಯಗಳನ್ನು ರಾಜಸ್ಥಾನ, ಹೈದ್ರಾಬಾದ್ ಹಾಗೂ ಬಲಿಷ್ಠ ಗುಜರಾತ್ ವಿರುದ್ಧ ಆಡಬೇಕಿದೆ. ತಂಡದ ನೆಟ್ ರನ್ರೇಟ್ ಕೂಡಾ ತೀರಾ ಕಡಿಮೆ ಇರುವ ಕಾರಣ ಈ ಎಲ್ಲಾ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಜೊತೆಗೆ ಇತರೆ ತಂಡಗಳ ಫಲಿತಾಂಶ ಕೂಡಾ ತನ್ನ ಪರವಾಗಿ ಬಂದರಷ್ಟೇ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಮುಂಬೈ ಎದುರು ಮುಗ್ಗರಿಸಿದ ಆರ್ಸಿಬಿ..! RCB ಮ್ಯಾನೇಜ್ಮೆಂಟ್ ರೋಸ್ಟ್ ಮಾಡಿದ ನೆಟ್ಟಿಗರು
ಇನ್ನು ಆರ್ಸಿಬಿ ತಂಡವು ಸೋಲಿನ ಬೆನ್ನಲ್ಲೇ ಮಾತನಾಡಿದ ಕೋಚ್ ಸಂಜಯ್ ಬಂಗಾರ್. "ಖಂಡಿತವಾಗಿಯೂ ಇದು ನಮಗೆ ನೋವುಂಟು ಮಾಡಿತು. ನಾವು ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದ್ದೆವು. ಸದ್ಯ ಅಂಕಪಟ್ಟಿಯು ಸಾಕಷ್ಟು ಟೈಟ್ ಆಗಿದೆ. ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದವರೆಗೂ ಈ ಅಂಕಪಟ್ಟಿಯಲ್ಲಿ ತಂಡಗಳು ಮೇಲೆ ಕೆಳಗೆ ಆಗಲಿವೆ" ಎಂದು ಹೇಳಿದ್ದಾರೆ.
"ನಾವು ಇನ್ನು ಒಂದು 10 ರನ್ ಕಡಿಮೆ ಗಳಿಸಿದೆವು. ನಾವು ಇನಿಂಗ್ಸ್ನ ಮಧ್ಯದಲ್ಲಿ ಮ್ಯಾಕ್ಸ್ವೆಲ್, ಫಾಫ್ ಹಾಗೂ ಲೋಮ್ರರ್ ಹೀಗೆ ಪ್ರಮುಖ 3 ವಿಕೆಟ್ ಕಳೆದುಕೊಂಡೆವು. ನಾವು ಇನಿಂಗ್ಸ್ನ ಕೊನೆಯಲ್ಲಿ ಹೇಗೆ ಮುಗಿಸಬೇಕು ಎಂದುಕೊಂಡಿದ್ದೆವೋ ಅದು ಸಾಧ್ಯವಾಗಲಿಲ್ಲ. ನಾವು ಇನ್ನೂ 10 ರನ್ ಗಳಿಸಬೇಕಿತ್ತು" ಎಂದು ಆರ್ಸಿಬಿ ಹೆಡ್ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.