ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿರುವ ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಸ್ಪಿನ್ನರ್‌ಗಳ ವಿರುದ್ಧ ಅಭಿಷೇಕ್ ಶರ್ಮಾ ಅವರ ವೈಫಲ್ಯ, ವರುಣ್ ಚಕ್ರವರ್ತಿ ಅವರ ದುಬಾರಿ ಬೌಲಿಂಗ್ ಮತ್ತು ಆರನೇ ಬೌಲಿಂಗ್ ಆಯ್ಕೆಯಾಗಿರುವ ಶಿವಂ ದುಬೆ ಅವರ ಕಳಪೆ ಪ್ರದರ್ಶನ ತಂಡಕ್ಕೆ ಪ್ರಮುಖ ಸವಾಲುಗಳಾಗಿವೆ.

ಅಹಮದಾಬಾದ್‌: ಹಾಲಿ ಚಾಂಪಿಯನ್‌ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ 4ನೇ ಬಾರಿ ಫೈನಲ್‌ ಪ್ರವೇಶಿಸಿದೆ. ತಂಡ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. ಆದರೆ 3ನೇ ಬಾರಿ ಟ್ರೋಫಿ ಗೆಲ್ಲಲು ಎದುರು ನೋಡುತ್ತಿರುವ ಭಾರತ ತಂಡದಲ್ಲೀಗ 3 ಪ್ರಮುಖ ಸಮಸ್ಯೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಿ, ಸಂಘಟಿತ ಪ್ರದರ್ಶನ ನೀಡಿದರೆ ಮಾತ್ರ ಭಾರತಕ್ಕೆ ಗೆಲುವು ಸಾಧ್ಯವಿದೆ.

ಸ್ಪಿನ್ನರ್ಸ್ ವಿರುದ್ಧ ಅಭಿಷೇಕ್‌ ಫೇಲ್‌: 7 ಪಂದ್ಯ, 89 ರನ್‌

ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿದ್ದ ಅಭಿಷೇಕ್‌ ಶರ್ಮಾ ಈ ವಿಶ್ವಕಪ್‌ನಲ್ಲಿ ಭಾರೀ ವೈಫಲ್ಯ ಅನುಭವಿಸಿದ್ದಾರೆ. ಅವರು ಆಡಿರುವ 7 ಪಂದ್ಯಗಳಲ್ಲಿ ಕೇವಲ 89 ರನ್ ಗಳಿಸಿದ್ದಾರೆ. ಈ ಪೈಕಿ 3 ಪಂದ್ಯದಲ್ಲಿ ರನ್‌ ಖಾತೆಯೇ ತೆರೆದಿಲ್ಲ. ಅದರಲ್ಲೂ ಸ್ಪಿನ್ನರ್‌ಗಳ ವಿರುದ್ಧ ಅಭಿಷೇಕ್‌ ಆಟ ಕಳವಳಕಾರಿ. ಅಭಿಷೇಕ್‌ರ ವೀಕ್‌ನೆಸ್‌ ಈಗ ಎಲ್ಲಾ ತಂಡಗಳಿಗೂ ಗೊತ್ತಾಗಿದ್ದು, ಅವರ ವಿರುದ್ಧ ಸ್ಪಿನ್ನರ್‌ಗಳಿಂದಲೇ ಬೌಲ್‌ ಮಾಡಿಸಿ ಬೇಗನೇ ಔಟ್‌ ಮಾಡುತ್ತಿವೆ. ನ್ಯೂಜಿಲೆಂಡ್‌ ತಂಡದಲ್ಲಿ ಸ್ಯಾಂಟ್ನರ್‌, ರಚಿನ್‌, ಮೆಕಾಂಚಿ ಸೇರಿ ಪ್ರಮುಖ ಸ್ಪಿನ್ನರ್‌ಗಳಿದ್ದು, ಅಭಿಷೇಕ್‌ ಯಾವ ರೀತಿ ಆಡಲಿದ್ದಾರೆ ಎಂಬ ಕುತೂಹಲವಿದೆ.

ವರುಣ್‌ ದುಬಾರಿ: ಕೊನೆಯ 4 ಪಂದ್ಯ, ಕೊಟ್ಟ ರನ್‌ 186

ಟಿ20 ರ್‍ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಸ್ಥಾನದಲ್ಲಿರುವ ವರುಣ್‌ ಚಕ್ರವರ್ತಿ ಭಾರತದ ಪ್ರಮುಖ ಬೌಲರ್‌. ಆದರೆ ವರುಣ್‌ ಈಗ ದುಬಾರಿಯಾಗುತ್ತಿದ್ದಾರೆ. ಗುಂಪು ಹಂತದಲ್ಲಿ ಮಿಂಚಿದ್ದ ಅವರು, ಸೂಪರ್‌-8ನ 3 ಹಾಗೂ ಸೆಮಿಫೈನಲ್‌ ಪಂದ್ಯದಲ್ಲಿ ನೀರಿನಂತೆ ರನ್‌ ಬಿಟ್ಟುಕೊಟ್ಟಿದ್ದಾರೆ. ದ.ಆಫ್ರಿಕಾ ವಿರುದ್ಧ 47, ಜಿಂಬಾಬ್ವೆ ವಿರುದ್ಧ 35, ವಿಂಡೀಸ್‌ ವಿರುದ್ಧ 40, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 64 ರನ್‌ ನೀಡಿದ್ದಾರೆ. ಈ 4 ಪಂದ್ಯದಲ್ಲೂ ತಲಾ 1 ವಿಕೆಟ್‌ ಕಿತ್ತಿದ್ದಾರೆ. ಆದರೆ ಕಿವೀಸ್‌ನ ಸ್ಫೋಟಕ ಬ್ಯಾಟರ್‌ಗಳ ವಿರುದ್ಧ ವರುಣ್‌, ಉತ್ತಮ ಎಕಾನಮಿಯಲ್ಲಿ ಬೌಲ್‌ ಮಾಡಬೇಕಾದ ಅಗತ್ಯವಿದೆ.

ದುಬಾರಿ ದುಬೆ: ಟೀಂನ 6ನೇ ಬೌಲಿಂಗ್‌ ಆಯ್ಕೆ ದುರ್ಬಲ!

ಭಾರತ ಈ ಬಾರಿ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ತಂಡದ 6ನೇ ಬೌಲಿಂಗ್‌ ಆಯ್ಕೆ ದುರ್ಬಲವಾಗಿದೆ. ಬೂಮ್ರಾ, ಅರ್ಶ್‌ದೀಪ್‌, ಹಾರ್ದಿಕ್‌, ಅಕ್ಷರ್‌ ಹಾಗೂ ವರುಣ್‌ ತಂಡದ ಅಗ್ರ-5 ಬೌಲರ್‌ಗಳು. ಈ ಪೈಕಿ ಯಾರೇ ವಿಫಲವಾದರೂ ಆಗ ತಂಡಕ್ಕೆ 6ನೇ ಬೌಲರ್ ಅನಿವಾರ್ಯ. ಟೂರ್ನಿಯಲ್ಲಿ ಈ ಜವಾಬ್ದಾರಿ ಶಿವಂ ದುಬೆ ಮೇಲಿದೆ. ಆದರೆ ದುಬೆ ನೆದರ್‌ಲೆಂಡ್ಸ್‌ ವಿರುದ್ಧ 3 ಓವರ್‌ನಲ್ಲಿ 35, ದ.ಆಫ್ರಿಕಾ ವಿರುದ್ಧ 2 ಓವರ್‌ನಲ್ಲಿ 32, ಜಿಂಬಾಬ್ವೆ ವಿರುದ್ಧ 2 ಓವರ್‌ನಲ್ಲಿ 46, ಇಂಗ್ಲೆಂಡ್‌ ವಿರುದ್ಧ 1 ಓವರ್‌ನಲ್ಲಿ 22 ರನ್‌ ರನ್‌ ನೀಡಿದ್ದಾರೆ. ಫೈನಲ್‌ನಲ್ಲೂ ಹೀಗಾದರೆ ತಂಡಕ್ಕೆ ಸೋಲು ಕಟ್ಟಿಟ್ಟಬುತ್ತಿ.

ವಿಶ್ವಕಪ್‌ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಸಂಜು

ದುಬೈ: ಈ ಬಾರಿ ಟಿ20 ವಿಶ್ವಕಪ್‌ನ ಶ್ರೇಷ್ಠ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯನ್ನು ಶುಕ್ರವಾರ ಐಸಿಸಿ ಪ್ರಕಟಿಸಿದೆ. ಸೂಪರ್‌-8ನಲ್ಲಿ ವಿಂಡೀಸ್ ಹಾಗೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅಬ್ಬರಿಸಿದ್ದ ಭಾರತದ ಸಂಜು ಸ್ಯಾಮ್ಸನ್‌ ಈ ಪಟ್ಟಿಯಲ್ಲಿದ್ದಾರೆ. ಉಳಿದಂತೆ ದ.ಆಫ್ರಿಕಾದ ನಾಯಕ ಮಾರ್ಕ್‌ರಮ್‌, ವೇಗಿ ಲುಂಗಿ ಎನ್‌ಗಿಡಿ, ಇಂಗ್ಲೆಂಡ್‌ನ ಆಲ್ರೌಂಡರ್‌ ವಿಲ್‌ ಜ್ಯಾಕ್ಸ್‌, ನ್ಯೂಜಿಲೆಂಡ್‌ ಆಲ್ರೌಂಡರ್‌ ರಚಿನ್‌ ರವೀಂದ್ರ, ಆರಂಭಿಕ ಬ್ಯಾಟರ್‌ ಟಿಮ್‌ ಸೀಫರ್ಟ್‌, ಪಾಕಿಸ್ತಾನ ಬ್ಯಾಟರ್‌ ಫರ್ಹಾನ್‌, ಅಮೆರಿಕದ ಬೌಲರ್‌ ಶ್ಯಾಡ್ಲೆ ವ್ಯಾನ್‌ ಕೂಡಾ ನಾಮನಿರ್ದೇಶಿತ ಪಟ್ಟಿಯಲ್ಲಿದ್ದಾರೆ.