ಪಂದ್ಯಕ್ಕೆ ಉಗ್ರರ ದಾಳಿ ಭೀತಿ ಬಗ್ಗೆ ನಾಸೌ ಕೌಂಟಿ ಪೊಲೀಸ್‌ ಆಯಕ್ತ ಪ್ಯಾಟ್ರಿಕ್‌ ರೈಡರ್‌ ಮಾಹಿತಿ ಒದಗಿಸಿದ್ದು, ‘ಜೂನ್ 9ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೆ ‘ಒಂಟಿ ತೋಳ’ ದಾಳಿ ನಡೆಸುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ’ ಎಂದಿದ್ದಾರೆ.

ನ್ಯೂಯಾರ್ಕ್‌: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಜೂನ್‌ 9ರಂದು ನ್ಯೂಯಾರ್ಕ್‌ನ ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ ಪಂದ್ಯಕ್ಕೆ ಉಗ್ರರ ಕರಿನೆರಳು ಬಿದ್ದಿದೆ. ಬದ್ಧವೈರಿಗಳ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಐಸಿಸ್‌ ಉಗ್ರರಿಂದ ಬೆದರಿಕೆ ಬಂದಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

ಪಂದ್ಯಕ್ಕೆ ಉಗ್ರರ ದಾಳಿ ಭೀತಿ ಬಗ್ಗೆ ನಾಸೌ ಕೌಂಟಿ ಪೊಲೀಸ್‌ ಆಯಕ್ತ ಪ್ಯಾಟ್ರಿಕ್‌ ರೈಡರ್‌ ಮಾಹಿತಿ ಒದಗಿಸಿದ್ದು, ‘ಜೂನ್ 9ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೆ ‘ಒಂಟಿ ತೋಳ’ ದಾಳಿ ನಡೆಸುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ’ ಎಂದಿದ್ದಾರೆ.

ಆದರೆ ಮಹತ್ವದ ಪಂದ್ಯಕ್ಕೆ ಯಾವುದೇ ಸಮಸ್ಯೆ ಆಗದಂತೆ ಭದ್ರತೆ ಒದಗಿಸುವ ಬಗ್ಗೆ ಅವರು ಭರವಸೆ ನೀಡಿದ್ದಾರೆ. ‘ನಾಸೌ ಕೌಂಟಿ ಇತಿಹಾಸದಲ್ಲೇ ಯಾವತ್ತೂ ಕಂಡಿರದ ಸೂಕ್ತ ಭದ್ರತೆಯನ್ನು ನಾವು ವಿಶ್ವಕಪ್‌ಗೆ ಒದಗಿಸುತ್ತೇವೆ. ಪಂದ್ಯ ನಡೆಯಬೇಕಿರುವ ಕ್ರೀಡಾಂಗಣವು ಇಡೀ ನಾಸೌ ಕೌಂಟಿಯಲ್ಲೇ ಜೂ.9ರಂದು ಅತ್ಯಂತ ಸುರಕ್ಷಿತ ತಾಣವಾಗಿರಲಿದೆ’ ಎಂದು ತಿಳಿಸಿದ್ದಾರೆ.

T20 World Cup 2024: ಇಂಡೋ-ಪಾಕ್ ಪಂದ್ಯದ ಮೇಲೆ ಉಗ್ರ ದಾಳಿ ಭೀತಿ..! ಕೊನೆಗೂ ಮೌನ ಮುರಿದ ಐಸಿಸಿ

ಏನಿದು ‘ಒಂಟಿ ತೋಳ’ ದಾಳಿ?: ಏಕಾಂಗಿಯಾಗಿ ಒಬ್ಬ ವ್ಯಕ್ತಿ ಮಾಡುವ ದಾಳಿಯನ್ನು ಒಂಟಿ ತೋಳ ದಾಳಿ ಎಂದು ಕರೆಯಲಾಗುತ್ತದೆ. ಅಂದರೆ ಸಾರ್ವಜನಿಕ ಸ್ಥಳದಲ್ಲಿ ಭಯೋತ್ಪಾದಕನೊಬ್ಬ ಸಾಮೂಹಿಕ ಕೊಲೆಗಳನ್ನು ಒಂಟಿ ತೋಳ ದಾಳಿ ಅಥವಾ 'ಲೋನ್ ವೂಲ್ಫ್ ಅಟ್ಯಾಕ್' ಎಂದು ಕರೆಯಲಾಗುತ್ತದೆ. 

ಬಿಗಿ ಭದ್ರತೆ: ಉಗ್ರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ನ್ಯೂಯಾರ್ಕ್‌ ಗವರ್ನರ್‌ ಕ್ಯಾಥಿ ಹೋಕುಲ್‌ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ಗೆ ಭಾರತದ ತಯಾರಿ ಶುರು: ಬಿಸಿಲಿನಲ್ಲೇ ಆಟಗಾರರ ಅಭ್ಯಾಸ

‘ಭದ್ರತಾ ಸಮಸ್ಯೆ ಉಂಟಾಗದಂತೆ ಫೆಡರಲ್ ಮತ್ತು ಸ್ಥಳೀಯ ಪೊಲೀಸರ ಜೊತೆ ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ. ಈ ಸಮಯದಲ್ಲಿ ಯಾವುದೇ ವಿಶ್ವಾಸಾರ್ಹ ಬೆದರಿಕೆ ಇಲ್ಲದಿದ್ದರೂ, ಭದ್ರತಾ ಕ್ರಮಗಳನ್ನು ಹೆಚ್ಚಿಸಲು ನ್ಯೂಯಾರ್ಕ್‌ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ವಿಶ್ವಕಪ್‌ಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು, ಕ್ರೀಡಾಂಗಣದ ಸುತ್ತ ಮುತ್ತ, ಆಟಗಾರರು ಸಂಚರಿಸುವ ದಾರಿ, ತಂಗುವ ಹೋಟೆಲ್‌ ಸುತ್ತಮುತ್ತಲೂ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ.

ಸುರಕ್ಷತೆ ನಮ್ಮ ಮೊದಲ ಆದ್ಯತೆ: ಐಸಿಸಿ ಭರವಸೆ

ಉಗ್ರರ ದಾಳಿ ಭೀತಿ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಪ್ರತಿಕ್ರಿಯಿಸಿದ್ದು, ‘ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ವ್ಯಕ್ತಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದಿದೆ. ‘ವಿಶ್ವಕಪ್‌ ಆಯೋಜಿಸುವ ದೇಶಗಳ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಟೂರ್ನಿಗೆ ಯಾವುದೇ ಅಪಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಉಗ್ರ ದಾಳಿ ನಡೆಯದಂತೆ ಭದ್ರತೆ ಬಲಪಡಿಸುತ್ತೇವೆ’ ಎಂದು ತಿಳಿಸಿದೆ.