Asianet Suvarna News Asianet Suvarna News

Syed Mushtaq Ali Trophy Final: ಮನೋಹರ್ ಮಿಂಚು, ತಮಿಳುನಾಡಿಗೆ ಸ್ಪರ್ಧಾತ್ಮಕ ಗುರಿ ನೀಡಿದ ಕರ್ನಾಟಕ

* ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸ್ಪರ್ಧಾತ್ಮಕ ಗುರಿ ನೀಡಿದ ಕರ್ನಾಟಕ

* ದೆಹಲಿಯಲ್ಲಿ ಪ್ರಶಸ್ತಿಗಾಗಿ ಕರ್ನಾಟಕ-ತಮಿಳುನಾಡು ಕಾದಾಟ

* ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಅಭಿನವ್ ಮನೋಹರ್, ಪ್ರವೀಣ್ ದುಬೆ

Syed Mushtaq Ali Trophy Final Karnataka Set 152 runs target to Tamil Nadu in Delhi kvn
Author
Bengaluru, First Published Nov 22, 2021, 1:50 PM IST

ದೆಹಲಿ(ನ.22): ಅಭಿನವ್ ಮನೋಹರ್ (Abhinav Manohar), ಪ್ರವೀಣ್ ದುಬೆ (Praveen Dubey) ಹಾಗೂ ಜಗದೀಶ ಸುಚಿತ್ (Jagadeesha Suchith) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ (Syed Mushtaq Ali Trophy Final) ಫೈನಲ್‌ನಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡವು 7 ವಿಕೆಟ್ ಕಳೆದುಕೊಂಡು 151 ರನ್‌ ಬಾರಿಸಿದ್ದು, ಪ್ರಶಸ್ತಿ ಗೆಲ್ಲಲು ತಮಿಳುನಾಡು ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ. ಆರಂಭಿಕ ವೈಫಲ್ಯದ ಹೊರತಾಗಿಯೂ ಕರ್ನಾಟಕ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ್ದು, ಇದೀಗ ಕರ್ನಾಟಕ ಅಭಿಮಾನಿಗಳ ಚಿತ್ತ ಬೌಲರ್‌ಗಳ ಮೇಲಿದೆ

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಸೆಮಿಫೈನಲ್‌ನಲ್ಲಿ ಆಕರ್ಷಕ 87 ರನ್ ಸಿಡಿಸಿದ್ದ ರೋಹನ್ ಕದಂ (Rohan Kadam) ಫೈನಲ್‌ನಲ್ಲಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. ಸಾಯಿ ಕಿಶೋರ್ (Sai Kishore) ಎಸೆದ ಮೊದಲ ಎಸೆತದಲ್ಲೇ ಡ್ರೈವ್ ಮಾಡು ಯತ್ನದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮಾಜಿ ನಾಯಕ ಕರುಣ್ ನಾಯರ್ (Karun Nair) 14 ಎಸೆತಗಳಲ್ಲಿ 2 ಬೌಂಡರಿ ಸಹಿತ 18 ರನ್‌ ಬಾರಿಸಿ ಸಾಯಿ ಕಿಶೋರ್‌ಗೆ ಎರಡನೇ ಬಲಿಯಾದರು. ಇನ್ನು ಮೊದಲ ಓವರ್‌ನಲ್ಲೇ ಎರಡು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಮನೀಶ್ ಪಾಂಡೆ (Manish Pandey) ಕೇವಲ 13 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು

ಆಸರೆಯಾದ ಮನೋಹರ್-ಶರತ್: ಸತತ ಎರಡು ಎಸೆತಗಳಲ್ಲಿ ಕರ್ನಾಟಕ ತಂಡವು ಫಾರ್ಮ್‌ನಲ್ಲಿದ್ದಂತಹ ಕರುಣ್ ನಾಯರ್ ಹಾಗೂ ಮನೀಶ್ ಪಾಂಡೆ ವಿಕೆಟ್ ಕಳೆದುಕೊಂಡಾಗ ಕರ್ನಾಟಕ ಕ್ಷಣಕಾಲ ಆತಂಕಕ್ಕೆ ಸಿಲುಕಿತ್ತು. 5.1 ಓವರ್‌ನಲ್ಲಿ ಕರ್ನಾಟಕ ತಂಡವು 32 ರನ್‌ಗಳಿಸಿ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ನಾಲ್ಕನೇ ವಿಕೆಟ್‌ಗೆ ಜತೆಯಾದ ವಿಕೆಟ್ ಕೀಪರ್ ಬ್ಯಾಟರ್ ಶರತ್ ಬಿ.ಅರ್ ಶರತ್ ಹಾಗೂ ಅಭಿನವ್ ಮನೋಹರ್ ಸಮಯೋಚಿತ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 55 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಶರತ್ 20 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 16 ರನ್‌ ಬಾರಿಸಿ ಸಾಯಿ ಕಿಶೋರ್‌ಗೆ ಮೂರನೇ ಬಲಿಯಾದರು.

Syed Mushtaq Ali Trophy Final: ಕರ್ನಾಟಕ ಎದುರು ಟಾಸ್ ಗೆದ್ದ ತಮಿಳುನಾಡು ಬೌಲಿಂಗ್‌ ಆಯ್ಕೆ

ಇನ್ನು ಕಳೆದ ಮೂರು ಪಂದ್ಯಗಳಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸಿರುವ ಮನೋಹರ್ ಸಂಕಷ್ಟದ ಸಂದರ್ಭದಲ್ಲಿ ಮತ್ತೊಮ್ಮೆ ಆಸರೆಯಾಗುವ ಮೂಲಕ ಗಮನ ಸೆಳೆದರು. ಅಭಿನವ್ ಮನೋಹರ್ 37 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್‌ ಬಾರಿಸಿ ಸಂದೀಪ್‌ ವಾರಿಯರ್‌ಗೆ ವಿಕೆಟ್‌ ಒಪ್ಪಿಸಿದರು.

ಕೊನೆಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಸುಚಿತ್-ದುಬೆ ಜೋಡಿ: ಅಭಿನವ್‌ ಮನೋಹರ್ ವಿಕೆಟ್ ಪತನದ ಬಳಿಕ ಪ್ರವಿಣ್ ದುಬೆ ಹಾಗೂ ಜೆ. ಸುಚಿತ ಜೋಡಿ ಚುರುಕಿನ 41 ರನ್‌ಗಳ ಜತೆಯಾಟವಾಡುವ ಮೂಲಕ ತಂಡ 150ರ ಗಡಿ ದಾಟಿಸಲು ನೆರವಾದರು. ಪ್ರವೀಣ್ ದುಬೆ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 33 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ಸುಚಿತ್ ಕೇವಲ 7 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 18 ರನ್‌ ಬಾರಿಸಿದರು.


 

Follow Us:
Download App:
  • android
  • ios