ಐಸಿಸಿ ನೂತನ ಟಿ20 ಶ್ರೇಯಾಂಕ ಪಟ್ಟಿ ಪ್ರಕಟಗೊಂಡಿದ್ದು ಟೀಂ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್

ದುಬೈ: ಐಸಿಸಿ ಟಿ20 ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತದ ಸೂರ್ಯಕುಮಾರ್‌ ಯಾದವ್ ಅಗ್ರಸ್ಥಾನ ಕಳೆದುಕೊಂಡಿದ್ದು, ಆಸ್ಟ್ರೇಲಿಯಾದ ಟ್ರ್ಯಾವಿಸ್‌ ಹೆಡ್‌ ನಂ.1 ಸ್ಥಾನಿಯಾಗಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಹೆಡ್‌ 844 ಅಂಕಗಳನ್ನು ಹೊಂದಿದ್ದರೆ, ಸೂರ್ಯ 842 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇಂಗ್ಲೆಂಡ್‌ನ ಫಿಲ್ ಸಾಲ್ಟ್‌, ಪಾಕಿಸ್ತಾನದ ಬಾಬರ್‌ ಆಜಂ, ರಿಜ್ವಾನ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಬರೋಬ್ಬರಿ 44 ಸ್ಥಾನ ಜಿಗಿತ ಸಾಧಿಸಿ 24ನೇ ಸ್ಥಾನಕ್ಕೇರಿದ್ದು, ಕುಲ್ದೀಪ್‌ ಯಾದವ್‌ 20 ಸ್ಥಾನ ಮೇಲೇರಿ 11ನೇ ಸ್ಥಾನದಲ್ಲಿದ್ದಾರೆ. ಅಕ್ಷರ್‌ ಪಟೇಲ್‌ ಆಲ್ರೌಂಡರ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.

ಚೆಂಡು ವಿರೂಪ ಆರೋಪ: ಇಂಜಮಾಮ್‌ಗೆ ಪ್ರತ್ಯುತ್ತರ ನೀಡಿದ ರೋಹಿತ್‌ ಶರ್ಮಾ

ಕರಾಚಿ: ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್‌ ಸೂಪರ್‌-8 ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಚೆಂಡು ವಿರೂಪಗೊಳಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್‌ ಉಲ್‌-ಹಕ್‌ ಆರೋಪಿಸಿದ್ದಾರೆ. ಅರ್ಶ್‌ದೀಪ್‌ ಸಿಂಗ್‌ ಎಸೆದ 16ನೇ ಓವರ್‌ನಲ್ಲಿ ಚೆಂಡು ರಿವರ್ಸ್‌ ಸ್ವಿಂಗ್‌ ಆಗುತ್ತಿತ್ತು. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದ ಅವರು, ಅಂಪೈರ್‌ಗಳು ತಮ್ಮ ಕಣ್ಣುಗಳನ್ನು ತೆರೆದಿರಬೇಕು ಎಂದು ಕುಟುಕಿದ್ದರು.

ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೋಹಿತ್‌, ‘ಪಿಚ್‌ ಒಣಗಿದ್ದರಿಂದ ಎಲ್ಲಾ ಬೌಲರ್‌ಗಳೂ ರಿವರ್ಸ್‌ ಸಿಂಗ್‌ ಮಾಡುತ್ತಿದ್ದರು. ನೀವು ನಿಮ್ಮ ಮನಸ್ಸನ್ನು ತೆರೆದಿಡಬೇಕಾದ ಅಗತ್ಯವಿದೆ. ಇದು ಆಸ್ಟ್ರೇಲಿಯಾ ಅಲ್ಲ’ ಎಂದಿದ್ದಾರೆ.

T20 World Cup 2024: ಭಾರತ-ಇಂಗ್ಲೆಂಡ್ ಸೆಮಿಫೈನಲ್ ಮ್ಯಾಚ್ ನಡೆಯುತ್ತಾ? ಸದ್ಯದ ಹವಾಮಾನ ವರದಿ ಏನು?

ಜು.27ರಿಂದ ಲಂಕಾದಲ್ಲಿ ಭಾರತಕ್ಕೆ 3 ಏಕದಿನ, 3 ಟಿ20 ಪಂದ್ಯಗಳ ಸರಣಿ

ನವದೆಹಲಿ: ಭಾರತ ತಂಡ ಜುಲೈ 27ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಸರಣಿಯ ವೇಳಾಪಟ್ಟಿ ಬುಧವಾರ ಪ್ರಕಟಿಸಲಾಗಿದೆ. 

ಟಿ20 ಸರಣಿಯ ಮೊದಲ ಪಂದ್ಯ ಜು.27ಕ್ಕೆ ನಡೆಯಲಿದ್ದು, ಬಳಿಕ ಜು.28 ಹಾಗೂ 30ಕ್ಕೆ ಕ್ರಮವಾಗಿ 2 ಮತ್ತು 3ನೇ ಪಂದ್ಯ ನಿಗದಿಯಾಗಿದೆ. ಬಳಿಕ ಆಗಸ್ಟ್‌ 2ರಂದು ಏಕದಿನ ಸರಣಿ ಆರಂಭಗೊಳ್ಳಲಿದೆ. 2 ಮತ್ತು 3ನೇ ಪಂದ್ಯ ಕ್ರಮವಾಗಿ ಆ.4 ಹಾಗೂ 7ರಂದು ನಡೆಯಲಿದೆ. ಸರಣಿಗೆ ಭಾರತದ ಹಿರಿಯರಿಗೆ ವಿಶ್ರಾಂತಿ ನೀಡಿ ಯುವ ತಾರೆಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಇಂಗ್ಲೆಂಡ್ ಎದುರಿನ ಸೆಮಿಫೈನಲ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..! ದಿಟ್ಟ ನಿರ್ಧಾರ ಕೈಗೊಂಡ್ರಾ ರೋಹಿತ್?

ಗಾಯ: ಜಿಂಬಾಬ್ವೆ ಸರಣಿಗೆ ನಿತೀಶ್ ಬದಲು ದುಬೆ

ನವದೆಹಲಿ: ಜಿಂಬಾಬೈ ವಿರುದ್ಧ ಸರಣಿಗಾಗಿ ಚೊಚ್ಚಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಯುವ ಆಲ್ರೌಂಡರ್‌ ನಿತೀಶ್ ರೆಡ್ಡಿ ಗಾಯಗೊಂಡಿದ್ದು, ಸರಣಿಗೆ ಅಲಭ್ಯರಾಗಲಿದ್ದಾರೆ. ಬದಲಿ ಆಟಗಾರನಾಗಿ ಶಿವಂ ದುಬೆಯನ್ನು ಬಿಸಿಸಿಐ ಆಯ್ಕೆಮಾಡಿದೆ. 

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಮಿಂಚಿದ್ದ ನಿತೀಶ್‌ ಗಾಯದ ಬಗ್ಗೆ ಬಿಸಿಸಿಐ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಅವರ ಮೇಲೆ ವೈದ್ಯಕೀಯ ತಂಡ ನಿಗಾ ಇಡಲಿದೆ ಎಂದು ತಿಳಿಸಿದೆ. ದುಬೆ ಭಾರತ ಪರ 27 ಟಿ20 ಪಂದ್ಯಗಳನ್ನಾಡಿದ್ದು, 34.72ರ ಸರಾಸರಿಯಲ್ಲಿ 383 ರನ್ ಕಲೆಹಾಕಿದ್ದಾರೆ. ಭಾರತ ಜುಲೈ 6ರಿಂದ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, 5 ಟಿ20 ಪಂದ್ಯಗಳನ್ನಾಡಲಿದೆ.