* ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡ ಬೆಂಗಾಲ್* ಮುಂಬೈ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಬಂಗಾಳ ತಂಡವು ರಣಜಿ ಟ್ರೋಫಿ ಸೆಮೀಸ್‌ಗೆ ಲಗ್ಗೆ* 2 ಬಾರಿ ಚಾಂಪಿಯನ್‌ ಬೆಂಗಾಲ್‌ 4ನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ

ಬೆಂಗಳೂರು(ಜೂ.11): 2022ರ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ (Ranji Trophy Cricket Tournament) ಸೆಮಿಫೈನಲ್‌ ತಂಡಗಳು ಅಂತಿಮಗೊಂಡಿವೆ. ಶುಕ್ರವಾರ ಜಾರ್ಖಂಡ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ 2 ಬಾರಿ ಚಾಂಪಿಯನ್‌ ಬೆಂಗಾಲ್‌ ಗೆಲುವು ಸಾಧಿಸುವುದರ ಮೂಲಕ 4ನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಆತಿಥೇಯ ಕರ್ನಾಟಕ ತಂಡ (Karnataka Cricket Team) ಈ ಬಾರಿ ಅಂತಿಮ 4ರ ಘಟ್ಟಪ್ರವೇಶಿಸಲು ವಿಫಲವಾಗಿದೆ. ಉಳಿದಂತೆ 41 ಬಾರಿ ಚಾಂಪಿಯನ್‌ ಮುಂಬೈ, 4 ಬಾರಿ ಪ್ರಶಸ್ತಿ ಗೆದ್ದಿರುವ ಮಧ್ಯಪ್ರದೇಶ, 2005-06ರ ಆವೃತ್ತಿಯ ಚಾಂಪಿಯನ್‌ ಉತ್ತರ ಪ್ರದೇಶ ಸೆಮೀಸ್‌ ಅರ್ಹತೆ ಗಿಟ್ಟಿಸಿಕೊಂಡಿದೆ.

Add Asianetnews Kannada as a Preferred SourcegooglePreferred

ಈ ಬಾರಿ 3 ಕ್ವಾರ್ಟರ್‌ ಪಂದ್ಯಗಳು ಬೆಂಗಳೂರಿನ ಆಲೂರಿನಲ್ಲಿ ಒಂದೇ ಕಡೆ ಇರುವ 3 ಕ್ರೀಡಾಂಗಣಳಲ್ಲಿ ನಡೆದಿತ್ತು. ಈ ಪೈಕಿ ಕರ್ನಾಟಕ ವಿರುದ್ಧ ಉತ್ತರ ಪ್ರದೇಶ 5 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತ್ತು. ಬೌಲರ್‌ಗಲೇ ಪ್ರಾಬಲ್ಯ ಸಾಧಿಸಿದ್ದ ಪಂದ್ಯ ಮೂರೇ ದಿನಕ್ಕೆ ಕೊನೆಗೊಂಡಿತ್ತು. ಇನ್ನೊಂದು ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಮಧ್ಯಪ್ರದೇಶ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಏಕಪಕ್ಷೀಯವಾಗಿ ನಡೆದಿದ್ದ ಮತ್ತೊಂದು ಕ್ವಾರ್ಟರ್‌ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಮುಂಬೈ ವಿಶ್ವದಾಖಲೆಯ 725 ರನ್‌ ಅಂತರದಲ್ಲಿ ಜಯಗಳಿಸಿತ್ತು. ಆದರೆ ಜಸ್ಟ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆದ ಜಾರ್ಖಂಡ್‌-ಬೆಂಗಾಲ್‌ ನಡುವಿನ ಪಂದ್ಯ ಡ್ರಾಗೊಂಡಿದೆ.

ಪಂದ್ಯ ಡ್ರಾಗೊಂಡರೂ ಬೆಂಗಾಲ್‌ ಸೆಮೀಸ್‌ಗೆ

ಬೆಂಗಳೂರು: ಜಾರ್ಖಂಡ್‌ ವಿರುದ್ಧದ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯ ಡ್ರಾಗೊಂಡರೂ ಬೆಂಗಾಲ್‌ಗೆ ಸೆಮೀಸ್‌ ಟಿಕೆಟ್‌ ಸಿಕ್ಕಿದೆ. 2ನೇ ಇನ್ನಿಂಗ್ಸ್‌ನಲ್ಲಿ ಶುಕ್ರವಾರ ಬೆಂಗಾಲ್‌ 7 ವಿಕೆಟ್‌ ಕಳೆದುಕೊಂಡು 318 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ ಮಾಡಲು ನಿರ್ಧರಿಸಲಾಯಿತು. 4ನೇ ದಿನದಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 76 ರನ್‌ ಗಳಿಸಿದ್ದ ಬೆಂಗಾಲ್‌ ಮತ್ತಷ್ಟುರನ್‌ ಕಲೆ ಹಾಕಿ 793 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿತ್ತು. ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಬೆಂಗಾಲ್‌ 7 ವಿಕೆಟ್‌ಗೆ 773 ರನ್‌ ಕಲೆ ಹಾಕಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಅಗ್ರ 9 ಬ್ಯಾಟರ್‌ಗಳು 50+ ರನ್‌ ಹೊಡೆದು ವಿಶ್ವದಾಖಲೆ ನಿರ್ಮಿಸಿದ್ದರು. ಬಳಿಕ ಬ್ಯಾಟ್‌ ಮಾಡಿದ್ದ ಜಾರ್ಖಂಡ್‌ ಕೇವಲ 298ಕ್ಕೆ ಆಲೌಟಾಗಿ ಬೆಂಗಾಲ್‌ಗೆ 475 ರನ್‌ಗಳ ದೊಡ್ಡ ಮುನ್ನಡೆ ಬಿಟ್ಟುಕೊಟ್ಟಿತ್ತು.

Ranji Trophy: ಶತಕ ಬಾರಿಸಿದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಸಚಿವ ಮನೋಜ್ ತಿವಾರಿ..!

ಮನೋಜ್‌ ತಿವಾರಿ: ಶತಕ ಸಿಡಿಸಿದ ಮೊದಲ ಸಚಿವ!

ಬೆಂಗಾಲ್‌ನ ಬ್ಯಾಟರ್‌ ಮನೋಜ್‌ ತಿವಾರಿ ರಣಜಿಯಲ್ಲಿ ಶತಕ ಸಿಡಿಸಿದ ಮೊದಲ ಸಚಿವ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪಶ್ಚಿಮ ಬಂಗಾಳದ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿರುವ ತಿವಾರಿ ಕೆಲ ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಮರಳಿದ್ದರು. ಟೀಂ ಇಂಡಿಯಾ ಮಾಜಿ ಆಟಗಾರನಾಗಿರುವ ಅವರು 2ನೇ ಇನ್ನಿಂಗ್ಸ್‌ನಲ್ಲಿ 185 ಎಸೆತಗಳಲ್ಲಿ 136 ರನ್‌ ಸಿಡಿಸಿದರು. ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿರುವ ಅವರು ಟೀಂ ಇಂಡಿಯಾ ಪರ 12 ಏಕದಿನ, 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ 98 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.