ಐಪಿಎಲ್ ಕಾಮೆಂಟರಿ ವೇಳೆ ವಿರೇಂದ್ರ ಸೆಹ್ವಾಗ್ ಮತ್ತು ಆರ್. ಅಶ್ವಿನ್ ನಡುವೆ ವಾಗ್ವಾದ ನಡೆದಿದೆ. ಸೆಹ್ವಾಗ್ ಅವರು ಅಶ್ವಿನ್ ಅವರನ್ನು ಪದೇ ಪದೇ ಕಾಲೆಳೆದಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಇಬ್ಬರ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮೊದಲ ಪಂದ್ಯದ ಕಾಮೆಂಟರಿ ಬಾಕ್ಸ್‌ನಲ್ಲಿ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್ ಮತ್ತು ಆರ್. ಅಶ್ವಿನ್ ನಡುವೆ ನಡೆದ ವಾಗ್ವಾದ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜಿಯೋ ಸ್ಟಾರ್‌ನಲ್ಲಿ ಕಾಮೆಂಟರಿಗೆ ಪದಾರ್ಪಣೆ ಮಾಡಿದ ರವಿಚಂದ್ರನ್ ಅಶ್ವಿನ್ ಅವರನ್ನು ಸೆಹ್ವಾಗ್ ಪದೇ ಪದೇ ಕಾಲೆಳೆದಿದ್ದು ಅಭಿಮಾನಿಗಳನ್ನು ಕೆರಳಿಸಿದೆ.

Add Asianetnews Kannada as a Preferred SourcegooglePreferred

ತಮಾಷೆಯಿಂದ ಶುರುವಾಗಿ, ಜಗಳದಲ್ಲಿ ಅಂತ್ಯ!

ಪಂದ್ಯದ ವಿಶ್ಲೇಷಣೆ ಮಾಡುವ ಬದಲು, ಸೆಹ್ವಾಗ್ ತಮ್ಮ ವೈಯಕ್ತಿಕ ಕಥೆಗಳನ್ನು ಹೇಳುತ್ತಾ ಅಶ್ವಿನ್ ಅವರನ್ನು ಅನಗತ್ಯವಾಗಿ ಅಣಕಿಸುವುದಕ್ಕೇ ಹೆಚ್ಚು ಗಮನ ಕೊಟ್ಟರು ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. "ಕಾಮೆಂಟರಿ ಹೇಳುವಾಗ ಅಶ್ವಿನ್ ಜಾಸ್ತಿ ತಲೆ ಉಪಯೋಗಿಸಬಾರದು" ಎಂದು ಸೆಹ್ವಾಗ್ ಹೇಳಿದ ಮಾತೇ ಈ ಜಗಳಕ್ಕೆ ನಾಂದಿ ಹಾಡಿತು. ಮೊದಮೊದಲು ಇದು ತಮಾಷೆ ಎನಿಸಿದರೂ, ಸೆಹ್ವಾಗ್ ಇದನ್ನೇ ಮತ್ತೆ ಮತ್ತೆ ಹೇಳುತ್ತಿದ್ದುದು ಕಾಮೆಂಟರಿ ಬಾಕ್ಸ್‌ನಲ್ಲಿ ಮುಜುಗರದ ವಾತಾವರಣ ಸೃಷ್ಟಿಸಿತು. ಇದಕ್ಕೆ ಅಶ್ವಿನ್ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದರು.

ಅಷ್ಟಕ್ಕೂ ನಡೆದಿದ್ದೇನು?

ಚರ್ಚೆ ವೇಳೆ ಸೆಹ್ವಾಗ್, "ಇವತ್ತು ನಾವು ಹೃದಯದಿಂದ ಮಾತಾಡೋಣ, ಲಾಜಿಕ್ ಅಥವಾ ತಲೆ ಉಪಯೋಗಿಸಿ ಅಲ್ಲ," ಎಂದರು. ಇದಕ್ಕೆ ಅಶ್ವಿನ್, "ಯೋಚನೆ ಮಾಡಿಯೇ ಮಾತಾಡಬೇಕು, ಏನೂ ಯೋಚಿಸದೆ ಮಾತಾಡಬಾರದು ಅಂತ ನಮ್ಮ ತಂದೆ-ತಾಯಿ ನನಗೆ ಹೇಳಿಕೊಟ್ಟಿದ್ದಾರೆ. ಆದರೆ ನೀವು ಅದಕ್ಕೆ ಉಲ್ಟಾ ಹೇಳ್ತಿದ್ದೀರಿ," ಎಂದು ತಿರುಗೇಟು ನೀಡಿದರು. ಸೆಹ್ವಾಗ್ ಅಲ್ಲಿಗೂ ಸುಮ್ಮನಾಗಲಿಲ್ಲ. ಅಶ್ವಿನ್ ಅವರ ಸೋಶಿಯಲ್ ಮೀಡಿಯಾ ಫಾಲೋವರ್ಸ್‌ ಬಗ್ಗೆ ಮಾತನಾಡಿ, "ಕೆಲವರು ಫಾಲೋವರ್ಸ್ ಕಡಿಮೆ ಆಗ್ತಾರೆ ಅಂತ ಸತ್ಯ ಹೇಳೋಕೆ ಹೆದರುತ್ತಾರೆ. ಅಭಿಮಾನಿಗಳ ಸಂಖ್ಯೆ ನೋಡ್ಕೊಂಡು ಕೆಲವರು ಮಾತಾಡ್ತಾರೆ," ಎಂದು ಪರೋಕ್ಷವಾಗಿ ಕುಟುಕಿದರು.

ಅಭಿಮಾನಿಗಳ ಆಕ್ರೋಶ

ಕಾಮೆಂಟರಿ ಗುಣಮಟ್ಟ ಕುಸಿಯುತ್ತಿದೆ ಎಂದು ಹಲವು ಅಭಿಮಾನಿಗಳು ದೂರು ನೀಡಿದ್ದಾರೆ. ಈ ಹಿಂದೆ ನವಜೋತ್ ಸಿಂಗ್ ಸಿಧು, ಆಕಾಶ್ ಚೋಪ್ರಾ ಅವರಂತಹ ಕಾಮೆಂಟೇಟರ್‌ಗಳು ಕೂಡ ಇದೇ ರೀತಿಯ ಟೀಕೆಗಳನ್ನು ಎದುರಿಸಿದ್ದರು. ಆಟದ ಬಗ್ಗೆ ಸರಿಯಾದ ವಿಶ್ಲೇಷಣೆ ನೀಡುವ ಬದಲು, ವೈಯಕ್ತಿಕ ನಿಂದನೆ ಮತ್ತು ತಮಾಷೆಗಳೇ ಕಾಮೆಂಟರಿ ಬಾಕ್ಸ್‌ನಲ್ಲಿ ತುಂಬಿರುವುದು ಐಪಿಎಲ್‌ನಂತಹ ದೊಡ್ಡ ಟೂರ್ನಿಗೆ ಸರಿಹೊಂದುವುದಿಲ್ಲ ಎಂಬುದು ಹೆಚ್ಚಿನ ಪ್ರೇಕ್ಷಕರ ಅಭಿಪ್ರಾಯವಾಗಿದೆ.

Scroll to load tweet…

Scroll to load tweet…

ಇಬ್ಬರ ಮೇಲೆ ಬಿಸಿಸಿಐ ಕ್ರಮಕೈಗೊಳ್ಳುವ ಸಾಧ್ಯತೆ:

ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆಯಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ವಿರೇಂದ್ರ ಸೆಹ್ವಾಗ್ ಪರಸ್ಪರ ಕಾಲೆಳೆದುಕೊಂಡಿದ್ದು, ಒಂದು ರೀತಿ ವೀಕ್ಷಕರಿಗೂ ಕಿರಿಕಿರಿಯನ್ನುಂಟು ಮಾಡಿದೆ. ಈ ವಿಚಾರವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಾಮೆಂಟೇಟರ್ ಕೆಲಸ ಕ್ರಿಕೆಟ್ ವಿಶ್ಲೇಷಣೆ ಮಾಡುವುದೇ ಹೊರತು, ವೈಯುಕ್ತಿಕ ಕಿತ್ತಾಟ ಮಾಡುವುದಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.