ಐಪಿಎಲ್‌ನಿಂದ ವಿರಾಮ ಪಡೆದು ಊರಿಗೆ ಬಂದಿದ್ದ ಕ್ರಿಕೆಟಿಗ ಸಂಜು ಸ್ಯಾಮ್ಸನ್, ಪಾಲಕ್ಕಾಡ್‌ನಲ್ಲಿ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಸೆಲ್ಫಿ ಕೇಳಿದ ಅಭಿಮಾನಿಯ ಫೋನ್ ಹಾಳಾಗಿದ್ದನ್ನು ಗಮನಿಸಿ, ತಮ್ಮ ಕಾರಿನಲ್ಲಿದ್ದ ಹೊಸ ಫೋನ್‌ ಅನ್ನು ಉಡುಗೊರೆಯಾಗಿ ನೀಡಿ ಹೃದಯವಂತಿಕೆ ಮೆರೆದಿದ್ದಾರೆ. ಈ ಘಟನೆ ಸಂಜು ಅವರ ಕಳಪೆ ಐಪಿಎಲ್ ಪ್ರದರ್ಶನದ ನಡುವೆಯೂ ಅಭಿಮಾನಿಗಳ ಮನಗೆದ್ದಿದೆ.

ಪಾಲಕ್ಕಾಡ್: ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್‌ನಿಂದ ಐದು ದಿನಗಳ ಬ್ರೇಕ್ ಪಡೆದಿರುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಸದ್ಯ ಕೇರಳದಲ್ಲಿದ್ದಾರೆ. ಚೆನ್ನೈಗೆ ಬಂದಾಗ ಸಂಜುಗೆ ಭರ್ಜರಿ ಸ್ವಾಗತ ಸಿಕ್ಕರೂ, ಆಡಿದ ಮೂರು ಪಂದ್ಯಗಳಲ್ಲಿ ಅವರು ಮಿಂಚಿರಲಿಲ್ಲ. ಚೆನ್ನೈ ತಂಡ ಕೂಡ ಒಂದೂ ಪಂದ್ಯ ಗೆಲ್ಲದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂದಿನ ಪಂದ್ಯಗಳಲ್ಲಿ ಸಂಜು ಫಾರ್ಮ್‌ಗೆ ಮರಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ, ಸಂಜು ತಮ್ಮ ಊರಿಗೆ ಬಂದಿದ್ದಾರೆ.

Add Asianetnews Kannada as a Preferred SourcegooglePreferred

ಇದೇ ವೇಳೆ ನಡೆದ ಒಂದು ಘಟನೆ ಎಲ್ಲರ ಮನಗೆದ್ದಿದೆ. ಪಾಲಕ್ಕಾಡ್‌ನ ಅಭಿಮಾನಿಯೊಬ್ಬರಿಗೆ ಸಂಜು ಅವರನ್ನು ನೇರವಾಗಿ ಭೇಟಿಯಾಗುವ, ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಸಿಕ್ಕಿದ್ದಷ್ಟೇ ಅಲ್ಲ, ಅವರಿಂದ ಹೊಚ್ಚ ಹೊಸ ಫೋನ್ ಒಂದನ್ನು ಗಿಫ್ಟ್ ಆಗಿ ಪಡೆದಿದ್ದಾರೆ. ಕಡಂಬಳಿಪ್ಪುರಂನ ವಾಯಿಲ್ಯಾಂಕು ದೇವಸ್ಥಾನದ ಬಳಿಯ ತಿರುತ್ತಿನ್ಮೇಲ್ ನಿವಾಸಿ ಶಬರೀಶ್‌ಗೆ ಈ ಅದೃಷ್ಟ ಖುಲಾಯಿಸಿದೆ. ಸಂಜು ಭೇಟಿಯಾದ ಬಗ್ಗೆ ಶಬರೀಶ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡ ಪೋಸ್ಟ್ ಹೀಗಿದೆ.

ಕ್ರಿಕೆಟ್ ಅಭಿಮಾನಿಯ ಹೃದಯಗೆದ್ದ ಸಂಜು ಸ್ಯಾಮ್ಸನ್

'ದೇವರು ಕೊಟ್ಟ ದಿನ

07/04/2026

ಸಂಜೆ ನಾನು ಮತ್ತು ಮಣಿ, ಆಟವಾಡಲು ಕಡಂಬಳಿಪ್ಪುರಂನಿಂದ ಮಂಗಳಂಕುನ್ನು ಗ್ರೌಂಡ್‌ಗೆ ಬೈಕ್‌ನಲ್ಲಿ ಹೋಗ್ತಾ ಇದ್ವಿ. ಆಗ ಸಮಯ ಸಂಜೆ 5.15 ಆಗಿರಬೇಕು. ಪಂಚಪಾಡಂ ಸ್ಕೂಲ್ ಬಸ್‌ಸ್ಟಾಪ್ ದಾಟಿದ ಮೇಲೆ, ರಸ್ತೆ ಬದಿ ನಿಂತಿದ್ದ ಹೊಚ್ಚ ಹೊಸ Range Rover ಕಾರ್ ನಮ್ಮ ಗಮನ ಸೆಳೆಯಿತು. ಹತ್ತಿರ ಹೋಗಿ ನೋಡಿದಾಗ, ಡ್ರೈವರ್ ಸೀಟ್‌ನಲ್ಲಿ ನಮ್ಮ ಪ್ರೀತಿಯ @imsanjusamson ವಿಡಿಯೋ ಕಾಲ್‌ನಲ್ಲಿ ಮಾತಾಡ್ತಾ ಕೂತಿದ್ರು. ನಾವು ಬೈಕ್ ತಿರುಗಿಸಿಕೊಂಡು ಕಾರ್ ಹತ್ತಿರ ಬಂದಾಗ, 'ಒಂದು ನಿಮಿಷ, ಕಾಲ್ ಮಾಡ್ತಿದ್ದೀನಿ' ಅಂದ್ರು. ಕಾಲ್ ಕಟ್ ಮಾಡಿದ ಮೇಲೆ, 'ಫೋಟೋ ಬೇಕಾ?' ಅಂತ ಕೇಳಿದ್ರು. ನಾನು 'ಬೇಕು' ಅಂದೆ. ನನ್ನ ಫೋನ್ Samsung S22 Ultra, ಅಪ್‌ಡೇಟ್ ಮಾಡಿದ ಮೇಲೆ ಡಿಸ್‌ಪ್ಲೇ ಮೇಲೆ ಒಂದು ಲೈನ್ ಬಂದಿತ್ತು. ಅದನ್ನು ನೋಡಿದ ಸಂಜು ಅಣ್ಣ, 'ಒಂದು ನಿಮಿಷ' ಅಂತ ಹೇಳಿ ಕಾರಿನಿಂದ ಇಳಿದು, ಡಿಕ್ಕಿ ಓಪನ್ ಮಾಡಿ ಅದರಿಂದ ಒಂದು ಫೋನ್ ತೆಗೆದು ನನಗೆ ಕೊಟ್ಟರು. 'ನಿನ್ನ ಫೋನ್ ಡಿಸ್‌ಪ್ಲೇ ಕಂಪ್ಲೇಂಟ್ ಅಲ್ವಾ? ಇದನ್ನ ನೀನು ಇಟ್ಕೋ' ಅಂತ ಹೇಳಿ ಆ ಫೋನ್ ನನಗೆ ಕೊಟ್ಟರು' ಎಂದು ಶಬರೀಶ್ ಬರೆದುಕೊಂಡಿದ್ದಾರೆ.

View post on Instagram

ಕೋಯಿಕ್ಕೋಡ್‌ನಿಂದ ಕೊಯಮತ್ತೂರಿಗೆ ಹೋಗುವ ದಾರಿಯಲ್ಲಿ, ಮುಂಡೂರ್-ತೂತಾ ರಸ್ತೆಯ ಸ್ಕೂಲ್ ಹತ್ತಿರ ಸಂಜು ಫೋನ್ ಮಾಡಲು ಕಾರು ನಿಲ್ಲಿಸಿದ್ದರು. ‘ನಿನ್ನ ಫೋನ್ ಡಿಸ್‌ಪ್ಲೇ ಹಾಳಾಗಿದೆಯಲ್ಲ’ ಎಂದು ಹೇಳಿದ ಸಂಜು, ತಮ್ಮ ಕಾರಿನ ಡಿಕ್ಕಿ ತೆರೆದು ಸುಮಾರು 40,000 ರೂಪಾಯಿ ಬೆಲೆಯ ಹೊಸ ಫೋನ್‌ ಅನ್ನು ಗಿಫ್ಟ್ ಆಗಿ ಕೊಟ್ಟರು ಎಂದು ಶಬರೀಶ್ ಹೇಳಿದ್ದಾರೆ. ಸ್ವಲ್ಪ ಹೊತ್ತು ಮಾತಾಡಿ, ಸಂಜು ತಮ್ಮ ಪ್ರಯಾಣ ಮುಂದುವರಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ನೀರಸ ಪ್ರದರ್ಶನ ತೋರಿರುವ ಸಂಜು ಸ್ಯಾಮ್ಸನ್:

ಐಪಿಎಲ್‌ ಟ್ರೇಡ್ ಮೂಲಕ 18 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಕೂಡಿಕೊಂಡಿರುವ ಸಂಜು ಸ್ಯಾಮ್ಸನ್ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಅದರಲ್ಲೂ ಕೆಲ ತಿಂಗಳ ಹಿಂದಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಷ್ಟೇ ಅಲ್ಲದೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜಯಿಸಿದ್ದರು. ಅದೇ ಪ್ರದರ್ಶನವನ್ನು ಸಿಎಸ್‌ಕೆ ಪರವೂ ಮುಂದುವರೆಸಲಿದ್ದಾರೆ ಎಂದು ಚೆನ್ನೈ ಫ್ಯಾನ್ಸ್ ಕಾಯುತ್ತಿದ್ದರು. ಆದರೆ ಸಂಜು ಸ್ಯಾಮ್ಸನ್, ಇದುವರೆಗೂ ಸಿಎಸ್‌ಕೆ ಪರ ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 6,7 ಹಾಗೂ 9 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ನಿರಾಸೆ ಮೂಡಿಸಿದ್ದರೂ, ಮೈದಾನದಾಚೆ ತಮ್ಮ ಹೃದಯವೈಶಾಲ್ಯತೆ ಮೆರೆಯುವಲ್ಲಿ ಕೇರಳ ಮೂಲದ ಕ್ರಿಕೆಟಿಗ ಯಶಸ್ವಿಯಾಗಿದ್ದಾರೆ.