ರಿಂಕು ಸಿಂಗ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸಲಿದ್ದಾರೆ. ಯುಪಿ ಟಿ೨೦ ಲೀಗ್‌ನಲ್ಲೂ ನಾಯಕತ್ವ ವಹಿಸಿದ್ದ ರಿಂಕು, ಭುವನೇಶ್ವರ್, ನಿತೀಶ್ ರಾಣಾ ಸೇರಿದಂತೆ ಐಪಿಎಲ್ ತಾರೆಗಳ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್ ನಾಯಕತ್ವದ ಸಾಧ್ಯತೆಯೂ ಇದೆ.

ಲಖನೌ: ಟೀಂ ಇಂಡಿಯಾ ವಿಸ್ಪೋಟಕ ಬ್ಯಾಟರ್ ರಿಂಕು ಸಿಂಗ್ ಅವರು ಇದೀಗ ಮುಂಬರುವ ಮಹತ್ವದ ಸರಣಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ರಿಂಕು ಸಿಂಗ್ ಈಗಾಗಲೇ ಯುಪಿ ಟಿ20 ಲೀಗ್ ಟೂರ್ನಿಯಲ್ಲಿ ನಾಯಕರಾಗಿ ಗಮನ ಸೆಳೆದಿದ್ದರು. ಇದೀಗ ಮುಂಬರುವ 2025ರ ಐಪಿಎಲ್ ಟೂರ್ನಿಗೂ ಮುನ್ನ ರಿಂಕು ಸಿಂಗ್ ಮತ್ತೊಮ್ಮೆ ನಾಯಕರಾಗಿ ಕಾಣಿಸಿಕೊಳ್ಳಲಿದ್ದು, ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ನಾಯಕರಾಗಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸಲಿದ್ದಾರೆ.

Add Asianetnews Kannada as a Preferred SourcegooglePreferred

ಯುಪಿ ತಂಡಕ್ಕೆ ರಿಂಕು ಕ್ಯಾಪ್ಟನ್:

ಉತ್ತರ ಪ್ರದೇಶ ಹಿರಿಯರ ಆಯ್ಕೆ ಸಮಿತಿಯು ಮುಂಬರುವ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಗೆ 19 ಆಟಗಾರರನ್ನೊಳಗೊಂಡ ಉತ್ತರ ಪ್ರದೇಶ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ರಿಂಕು ಸಿಂಗ್‌ಗೆ ನಾಯಕ ಪಟ್ಟ ಕಟ್ಟಿದೆ. ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯು ಒಂದೊಂದು ಕ್ರಿಕೆಟ್‌ ಮಾದರಿಗೆ ಒಂದೊಂದು ನಾಯಕರನ್ನು ನೇಮಕ ಮಾಡಿದೆ. ಉತ್ತರ ಪ್ರದೇಶ ರಣಜಿ ತಂಡದ ನಾಯಕರಾಗಿ ಆರ್ಯನ್ ಜುಯಲ್ ನೇಮಕವಾಗಿದ್ದರೇ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ರಿಂಕುಗೆ ನಾಯಕ ಪಟ್ಟ ಕಟ್ಟಲಾಗಿದೆ.

ಆಸ್ಟ್ರೇಲಿಯಾದಲ್ಲಿ 50 ವಿಕೆಟ್‌: ಟೆಸ್ಟ್‌ನಲ್ಲಿ ಭಾರತೀಯ ವೇಗಿ ಬುಮ್ರಾ ಹೊಸ ದಾಖಲೆ!

ಯುಪಿ ತಂಡದಲ್ಲಿದ್ದಾರೆ ಐಪಿಎಲ್ ಬಿಗ್ ಸ್ಟಾರ್ಸ್!

ಉತ್ತರ ಪ್ರದೇಶ ಕ್ರಿಕೆಟ್‌ ತಂಡದಲ್ಲಿ ಐಪಿಎಲ್‌ನಲ್ಲಿ ಮಿಂಚಿದ ತಾರಾ ಆಟಗಾರರ ದಂಡೇ ಇದೆ. ಉತ್ತರ ಪ್ರದೇಶ ತಂಡದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ನಿತೀಶ್ ರಾಣಾ, ಮೊಹ್ಸಿನ್ ಖಾನ್, ರಿಂಕು ಸಿಂಗ್ ಹಾಗೂ ಶಿವಂ ಮಾವಿ ಅವರಂತಹ ತಾರಾ ಆಟಗಾರರ ದಂಡೇ ಇದೆ. ರಿಂಕು ಸಿಂಗ್ ಕಳೆದ ಬಾರಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 69ರ ಸರಾರಿಯಲ್ಲಿ 277 ರನ್ ಸಿಡಿಸಿದ್ದರು.

ವಿನೋದ್ ಕಾಂಬ್ಳಿಗಿಂತ ಕರುಣಾಜನಕವಾಗಿದೆ ಈ ಕ್ರಿಕೆಟಿಗನ ಕಥೆ, ಚಪ್ಪಲಿ ಕೊಳ್ಳೋಕು ಕಾಸಿಲ್ಲ!

ಕೆಕೆಆರ್ ತಂಡದ ನಾಯಕರಾಗ್ತಾರಾ ರಿಂಕು?

ಹಾಲಿ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಶ್ರೇಯಸ್ ಅಯ್ಯರ್ ಇದೀಗ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿರುವುದರಿಂದಾಗಿ ಕೆಕೆಆರ್ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ. ಕೆಕೆಆರ್ ಫ್ರಾಂಚೈಸಿಯು ರಿಂಕು ಸಿಂಗ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ರಿಂಕು ಸಿಂಗ್‌ ಮೇಲೆ ಕೆಕೆಆರ್ ಫ್ರಾಂಚೈಸಿ ಸಾಕಷ್ಟು ವಿಶ್ವಾಸವಿಟ್ಟಿದ್ದು, ಮುಂಬರುವ ಐಪಿಎಲ್ ಟೂರ್ನಿಗೆ ನಾಯಕತ್ವ ಪಟ್ಟ ಕಟ್ಟಿದರೂ ಅಚ್ಚರಿಯಿಲ್ಲ.