ಬೆಂಗಳೂರಿನ ಭಾರೀ ಮಳೆಯಿಂದಾಗಿ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯ ರದ್ದಾಯಿತು. ಎರಡೂ ತಂಡಗಳು ತಲಾ ಒಂದು ಅಂಕ ಪಡೆದವು. ಇದರಿಂದ ಕೆಕೆಆರ್ ಪ್ಲೇಆಫ್‌ನಿಂದ ಹೊರಬಿದ್ದಿದೆ. ಆರ್‌ಸಿಬಿ ಅಗ್ರಸ್ಥಾನದಲ್ಲಿದ್ದರೂ ಅರ್ಹತೆ ಇನ್ನೂ ಖಚಿತವಾಗಿಲ್ಲ. ಉಳಿದ ಎರಡು ಪಂದ್ಯಗಳು ಆರ್‌ಸಿಬಿಗೆ ನಿರ್ಣಾಯಕ.

ಬೆಂಗಳೂರು: ಐಪಿಎಲ್ 2025 ರ ಪುನರಾರಂಭವು ಅಭಿಮಾನಿಗಳಿಗೆ ನಿರಾಸೆಯನ್ನುಂಟುಮಾಡಿದೆ. 58 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಬೇಕಿತ್ತು, ಆದರೆ ಮಳೆಯಿಂದಾಗಿ ರದ್ದಾಗಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದರಿಂದ, ಎರಡೂ ತಂಡಗಳ ನಾಯಕರು ಟಾಸ್‌ಗೂ ಮೈದಾನಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಮಳೆ ನಿಲ್ಲುವವರೆಗೂ ಕಾಯಲಾಯಿತು, ಆದರೆ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಕ್ಕೆ ವಿರಾಟ್‌ ಕೊಹ್ಲಿ ಅವರು ಬಿಳಿ ಜೆರ್ಸಿ ಧರಿಸಿ ಗೌರವ ಕೊಡಬೇಕು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಪಂದ್ಯವೇ ಆಗಲಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಬಂದಿತು. ಈ ಮಧ್ಯೆ ಬಿಳಿ ಬಣ್ಣದ ಪಾರಿವಾಳಗಳು ಒಂದೇ ಸಮನೆ ಹಾರಿರುವ ದೃಶ್ಯ ಕಂಡುಬಂದಿದೆ. ಆರ್‌ಸಿಬಿ ತಂಡವು ತನ್ನ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ "ಪಕ್ಷಿಗಳು ಸಹ ಇಂದು ರಾತ್ರಿ ತಮ್ಮ ಗೌರವ ಸಲ್ಲಿಸಲು ಬಿಳಿ ಉಡುಪಿನಲ್ಲಿ ಬಂದವು! ಎಂತಹ ಸುಂದರ ದೃಶ್ಯ" ಎಂದು ಬರಹ ಬರೆದುಕೊಂಡಿದೆ. ಇದನ್ನು ನೆಟ್ಟಿಗರು ಒಪ್ಪಿದ್ದಾರೆ. ಬಿಸಿಸಿಐ ಯಾವುದೇ ಗೌರವ ಕೊಡದಿದ್ರೂ ಪ್ರಕೃತಿ ಗೌರವ ಕೊಟ್ಟಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿರಾಟ್‌ ಕೊಹ್ಲಿ ಅವರು ದೇವರ ಇಷ್ಟವಾದ ಮಗು ಎಂದೆಲ್ಲ ಬರೆದುಕೊಂಡಿದ್ದಾರೆ. 

ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಭಾರೀ ಮಳೆಯಿಂದ ರದ್ದಾಗಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಸುಮಾರು 10 ದಿನಗಳ ನಂತರ ಎರಡೂ ತಂಡಗಳು ಮತ್ತು ಅವರ ಅಭಿಮಾನಿಗಳು ಪಂದ್ಯವನ್ನು ಆನಂದಿಸಲು ಬಯಸಿದ್ದರು, ಆದರೆ ಮಳೆ ಅವರ ಆಸೆಗೆ ತಣ್ಣೀರೆರಚಿತು. ಆಟಗಾರರು ಕೂಡ ಕೊನೆಯಲ್ಲಿ ಆಡದೆ ಹ್ಯಾಂಡ್‌ಶೇಕ್ ಮಾಡಬೇಕಾಯಿತು. ಎರಡೂ ತಂಡಗಳು ತಲಾ 1 ಅಂಕ ಪಡೆದಿವೆ. ಈ ಫಲಿತಾಂಶ ಆರ್‌ಸಿಬಿಗಿಂತ ಕೆಕೆಆರ್‌ಗೆ ಹೆಚ್ಚು ನೋವುಂಟು ಮಾಡಿದೆ. ಏಕೆ ಎಂದು ತಿಳಿಸುತ್ತೇವೆ.

ಕೆಕೆಆರ್‌ನ ಪ್ಲೇಆಫ್ ಆಸೆಗೆ ಮಳೆ ತಣ್ಣೀರೆರಚಿತು

ಆರ್‌ಸಿಬಿ ವಿರುದ್ಧದ ಪಂದ್ಯ ರದ್ದಾದ ನಂತರ ಕೆಕೆಆರ್ ಅಧಿಕೃತವಾಗಿ ಪ್ಲೇಆಫ್‌ನಿಂದ ಹೊರಬಿದ್ದಿದೆ. ಅಜಿಂಕ್ಯ ರಹಾನೆ ನೇತೃತ್ವದ ತಂಡಕ್ಕೆ ಇದು ಕೊನೆಯ ಆಸೆಯಾಗಿತ್ತು, ಅದು ಮಳೆಯಲ್ಲಿ ಕೊಚ್ಚಿಹೋಯಿತು. ಕೆಕೆಆರ್ ಈ ಋತುವಿನಲ್ಲಿ 13 ಪಂದ್ಯಗಳನ್ನು ಆಡಿದ್ದು, 12 ಅಂಕಗಳನ್ನು ಗಳಿಸಿದೆ. ಇನ್ನೂ ಒಂದು ಪಂದ್ಯ ಬಾಕಿ ಇದೆ. ಆದರೆ, ಅದರಲ್ಲಿ ಗೆದ್ದರೂ ಕೇವಲ 14 ಅಂಕಗಳು ಮಾತ್ರ ಗಳಿಸಲು ಸಾಧ್ಯ. ಹೀಗಾಗಿ ಪ್ಲೇಆಫ್ ತಲುಪುವುದು ಅಸಾಧ್ಯ. ಕೋಲ್ಕತ್ತಾ 13 ಪಂದ್ಯಗಳಲ್ಲಿ 5 ಗೆಲುವು, 6 ಸೋಲು ಮತ್ತು 2 ರದ್ದಾದ ಪಂದ್ಯಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಆದರೆ, ಅಗ್ರ 4 ರಲ್ಲಿ ಸ್ಥಾನ ಪಡೆಯುವ ಕನಸು ಭಗ್ನವಾಗಿದೆ.

ಅಗ್ರಸ್ಥಾನದಲ್ಲಿದ್ದರೂ ಅರ್ಹತೆ ಪಡೆಯದ ಆರ್‌ಸಿಬಿ

ಕೋಲ್ಕತ್ತಾ ವಿರುದ್ಧದ ಪಂದ್ಯ ರದ್ದಾದ ನಂತರವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದಿಲ್ಲ. ಆರ್‌ಸಿಬಿ 12 ಪಂದ್ಯಗಳನ್ನು ಆಡಿದ್ದು, 8 ಗೆಲುವು, 3 ಸೋಲು ಮತ್ತು 1 ರದ್ದಾದ ಪಂದ್ಯದೊಂದಿಗೆ 17 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯ ನೆಟ್ ರನ್‌ರೇಟ್ +0.480. ಆದರೂ ಅರ್ಹತೆ ಖಚಿತವಾಗಿಲ್ಲ. ಅಂದರೆ ತಂಡಕ್ಕೆ ಉಳಿದಿರುವ ಎರಡು ಲೀಗ್ ಪಂದ್ಯಗಳು ಬಹಳ ಮುಖ್ಯ.

View post on Instagram