Ranji Trophy: ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್
* ಇಂದಿನಿಂದ ರಣಜಿ ಟ್ರೋಫಿ ಸೆಮಿಫೈನಲ್ ಕದನ ಆರಂಭ
* 15ನೇ ಬಾರಿ ಫೈನಲ್ಗೇರುವ ತವಕದಲ್ಲಿ ಕರ್ನಾಟಕ
* ಎರಡನೇ ಸೆಮೀಸ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ
ಬೆಂಗಳೂರು(ಫೆ.08): 2022-23ರ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, 8 ಬಾರಿ ಚಾಂಪಿಯನ್ ಕರ್ನಾಟಕ ಬುಧವಾರದಿಂದ ಬದ್ಧವೈರಿ ಸೌರಾಷ್ಟ್ರ ವಿರುದ್ಧ ಕಾದಾಡಲಿದೆ. ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅಂಕಿ-ಅಂಶಗಳ ಆಧಾರದಲ್ಲಿ ರಾಜ್ಯದ ವಿರುದ್ಧ ಸೌರಾಷ್ಟ್ರ ಉತ್ತಮ ದಾಖಲೆ ಹೊಂದಿದ್ದರೂ ಕರ್ನಾಟಕ ತವರಿನ ಅಂಗಳದ ಲಾಭವೆತ್ತುವ ನಿರೀಕ್ಷೆಯಲ್ಲಿದೆ. ಕಳೆದ ವರ್ಷ ಕ್ವಾರ್ಟರ್ನಲ್ಲೇ ಮುಗ್ಗರಿಸಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದ್ದು, ಸೌರಾಷ್ಟ್ರ 2019-20ರ ಬಳಿಕ ಮತ್ತೊಮ್ಮೆ ಫೈನಲ್ಗೇರಲು ಕಾಯುತ್ತಿದೆ.
ಎಲೈಟ್ ‘ಸಿ’ ಗುಂಪಿನಿಂದ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದ್ದ ರಾಜ್ಯ ತಂಡ ಕ್ವಾರ್ಟರ್ನಲ್ಲಿ ಉತ್ತರಾಖಂಡವನ್ನು ಸೋಲಿಸಿತ್ತು. ಮತ್ತೊಂದೆಡೆ ಸೌರಾಷ್ಟ್ರ ಅಂತಿಮ 8ರ ಘಟ್ಟದಲ್ಲಿ ಪಂಜಾಬ್ ವಿರುದ್ಧ ಜಯಿಸಿತ್ತು. ರಾಜ್ಯ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿ ತೋರುತ್ತಿದ್ದು, ನಾಯಕ ಮಯಾಂಕ್, ಆರ್.ಸಮರ್ಥ್ ತಂಡದ ಬ್ಯಾಟಿಂಗ್ ಬಲ. 8 ಪಂದ್ಯಗಳಲ್ಲಿ ಮಯಾಂಕ್ 686, ಸಮರ್ಥ್ 659 ರನ್ ಕಲೆಹಾಕಿದ್ದಾರೆ. ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ನಿಕಿನ್ ಜೋಸ್ ಕೂಡಾ ಲಯದಲ್ಲಿದ್ದು, ಲಯ ಕಂಡುಕೊಳ್ಳುತ್ತಿದ್ದ ಬಿ.ಆರ್.ಶರತ್ ಅನಾರೋಗ್ಯದ ಕಾರಣ ಹೊರಬಿದ್ದಿದ್ದು ಅವರ ಬದಲು ತಂಡಕ್ಕೆ ಸೇರ್ಪಡೆಗೊಂಡಿರುವ ನಿಹಾಲ್ ಉಳ್ಳಾಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲೂ ತಮ್ಮ ನೈಜ ಆಟ ಪ್ರದರ್ಶಿಸಿದರೆ ಕರ್ನಾಟಕವನ್ನು ಕಟ್ಟಿಹಾಕಲು ಸೌರಾಷ್ಟ್ರಕ್ಕೆ ಕಷ್ಟವಾಗಬಹುದು. ಪ್ರಸಿದ್್ಧ ಕೃಷ್ಣ, ರೋನಿತ್ ಮೋರೆ ಅನುಪಸ್ಥಿತಿಯಲ್ಲೂ ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ್, ವಾಸುಕಿ ಕೌಶಿಕ್ ಹಾಗೂ ಪಾದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದಿದ್ದ ವೆಂಕಟೇಶ್ ಮತ್ತೊಮ್ಮೆ ಎದುರಾಳಿ ಬ್ಯಾಟರ್ಗಳನ್ನು ಕಾಡಲು ಸಜ್ಜಾಗಿದ್ದಾರೆ.
'ಭಾರತ ನರಕಕ್ಕೆ ಹೋಗಲಿ' ಎಂದ ಜಾವೇದ್ ಮಿಯಾಂದಾದ್ ಸೊಕ್ಕಡಗಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್..!
ಮತ್ತೊಂದೆಡೆ ಸೌರಾಷ್ಟ್ರಕ್ಕೆ ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ, ಜಯ್ದೇವ್ ಉನಾದ್ಕತ್ ಅನುಪಸ್ಥಿತಿ ಕಾಡುತ್ತಿದ್ದರೂ ತಾರಾ ಆಟಗಾರರಿಗೆ ತಂಡದಲ್ಲಿ ಕೊರತೆಯಿಲ್ಲ. ಅರ್ಪಿತ್ ವಸವಾಡ, ಹಾರ್ವಿಕ್ ದೇಸಾಯಿ, ಚಿರಾಗ್ ಜಾನಿ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದು, ಬೌಲಿಂಗ್ನಲ್ಲಿ ಧರ್ಮೇಂದ್ರಸಿಂಗ್ ಜಡೇಜಾ, ಯುವರಾಜ್ ಸಿಂಗ್ ದೊಡಿಯಾ ಮಿಂಚಲು ರೆಡಿಯಾಗಿದ್ದಾರೆ. ಪ್ರೇರಕ್ ಮಂಕಡ್, ಪಾರ್ಥ್ ಭುಟ್ ಆಲ್ರೌಂಡ್ ಆಟ ತಂಡಕ್ಕೆ ಮಹತ್ವದೆನಿಸಿದೆ.
ಪಂದ್ಯ: ಬೆಳಗ್ಗೆ 9.30ಕ್ಕೆ,
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸೌರಾಷ್ಟ್ರ ವಿರುದ್ಧ ಕಳಪೆ ದಾಖಲೆ!
ರಣಜಿಯಲ್ಲಿ ಕರ್ನಾಟಕ-ಸೌರಾಷ್ಟ್ರ ಈ ಮೊದಲು 11 ಬಾರಿ ಮುಖಾಮುಖಿಯಾಗಿದ್ದು, 5 ಪಂದ್ಯದಲ್ಲಿ ಸೌರಾಷ್ಟ್ರ ಗೆದ್ದಿದೆ. 2ರಲ್ಲಿ ಮೊದಲ ಇನ್ನಿಂಗ್್ಸ ಮುನ್ನಡೆ ಪಡೆದಿತ್ತು. ಇದೇ ವೇಳೆ ಕರ್ನಾಟಕ 2 ಪಂದ್ಯಗಳಲ್ಲಿ ಜಯಿಸಿದ್ದು, 2ರಲ್ಲಿ ಮೊದಲ ಇನ್ನಿಂಗ್್ಸ ಮುನ್ನಡೆ ಸಾಧಿಸಿದೆ. ನಾಕೌಟ್ನಲ್ಲಿ 3 ಬಾರಿ ಈ ತಂಡಗಳು ಎದುರಾಗಿದ್ದು, 2ರಲ್ಲಿ ರಾಜ್ಯ ತಂಡ ಸೋತು, 1ರಲ್ಲಿ ಇನ್ನಿಂಗ್್ಸ ಹಿನ್ನಡೆ ಅನುಭವಿಸಿದೆ.
2008-09 ಮತ್ತು 2012-13ರ ಕ್ವಾರ್ಟರ್ನಲ್ಲಿ, 2018-19ರಲ್ಲಿ ಸೆಮೀಸ್ನಲ್ಲಿ ರಾಜ್ಯ ತಂಡ ಸೌರಾಷ್ಟ್ರಕ್ಕೆ ಶರಣಾಗಿತ್ತು. ಕರ್ನಾಟಕ 2009ರ ಬಳಿಕ ಸೌರಾಷ್ಟ್ರ ವಿರುದ್ಧ ಮೊದಲ ಜಯದ ತವಕದಲ್ಲಿದೆ.
ಪಿಚ್ ರಿಪೋರ್ಚ್
ಚಿನ್ನಸ್ವಾಮಿ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿರಲಿದ್ದು, ಹಿಂದಿನ ಕೆಲ ಪಂದ್ಯಗಳಲ್ಲಿ ವೇಗದ ಬೌಲಿಂಗ್ಗೆ ಹೆಚ್ಚು ಸಹಕಾರ ದೊರೆತಿದೆ. ದಿನದ ಆರಂಭಿಕ ಅವಧಿಯಲ್ಲಿ ಸ್ವಿಂಗ್ ಬೌಲರ್ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. 3ನೇ ದಿನದಿಂದ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುವ ಸಾಧ್ಯತೆ ಇದೆ.
ಸತತ 2ನೇ ಫೈನಲ್ ನಿರೀಕ್ಷೆಯಲ್ಲಿ ಮಧ್ಯಪ್ರದೇಶ
ಟೂರ್ನಿಯ ಮತ್ತೊಂದು ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಮಧ್ಯಪ್ರದೇಶ ತಂಡ ಬಂಗಾಳ ವಿರುದ್ಧ ಸೆಣಸಾಡಲಿದೆ. ಮಧ್ಯಪ್ರದೇಶ ಸತತ 2ನೇ ಫೈನಲ್ ಮೇಲೆ ಕಣ್ಣಿಟ್ಟಿದ್ದು, 2 ಬಾರಿ ಚಾಂಪಿಯನ್ ಬಂಗಾಳ 14ನೇ ಬಾರಿ ಫೈನಲ್ಗೇರುವ ನಿರೀಕ್ಷೆಯಲ್ಲಿದೆ. ಪಂದ್ಯ ಇಂದೋರ್ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.