ಐತಿಹಾಸಿಕ, ಸಾರ್ಥಕ ದಿನ: ರಾಮ ಮಂದಿರ ನಿರ್ಮಾಣ ಕೊಂಡಾಡಿದ ಪಾಕ್ ಕ್ರಿಕೆಟಿಗ ಕನೇರಿಯಾ!
ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಆದರ್ಶ ಪುರುಷ ಶ್ರೀರಾಮ ಭವ್ಯ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಸಂಭ್ರಮಿಸಲಾಗುತ್ತಿದೆ. ಇದೀಗ ಪಾಕಿಸ್ತಾನದ ವಿವಾದಿತ ಕ್ರಿಕೆಟಿಗ ದಾನಿಶ್ ಕನೇರಿಯಾ ಸಂತಸ ಹಂಚಿಕೊಂಡಿದ್ದಾರೆ.
ಕರಾಚಿ(ಆ.06): ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಕೊರೋನಾ ವೈರಸ್ ಕಾರಣ 200 ಮಂದಿ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಸಂಪೂರ್ಣ ಭಾರತವೇ ಐತಿಹಾಸಿಕದ ದಿನವನ್ನು ಸಂಭ್ರಮಿಸಿತ್ತು. 500 ವರ್ಷಗಳಿಂದ ಬಂಧಿಯಾಗಿದ್ದ ರಾಮನನ್ನು ಭವ್ಯ ಮಂದಿರದಲ್ಲಿ ಪ್ರತಿಷ್ಠಾಪಿಸಲು ಕೆಲಸ ಕಾರ್ಯಗಳು ನಡೆಯುತ್ತಿದೆ. ವಿಶ್ವದೆಲ್ಲೆಡೆ ಈ ವಿಶೇಷ ದಿನವನ್ನು ಸಂಭ್ರಮಿಸಲಾಗಿದೆ. ಇದೀಗ ಪಾಕಿಸ್ತಾನದ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ, ಶ್ರೀ ರಾಮ ಮಂದಿರ ಭೂಮಿ ಪೂಜೆಯನ್ನು ಐತಿಹಾಸಿಕ ಹಾಗೂ ಸಾರ್ಥಕ ದಿನ ಎಂದು ಬಣ್ಣಿಸಿದ್ದಾರೆ.
ಕಿರುಕುಳ ಕೊಟ್ಟರೂ ಹಿಂದು ಧರ್ಮ ತ್ಯಜಿಸಲು ಮನಸ್ಸಾಗಲಿಲ್ಲ: ಪಾಕ್ ಕ್ರಿಕೆಟಿಗ
ರಾಮ ಮಂದಿರ ಭೂಮಿ ಪೂಜೆ ದಿನ ಐತಿಹಾಸಿಕ ದಿನವಾಗಿದೆ. ವಿಶ್ವದಲ್ಲಿರುವ ಎಲ್ಲಾ ಹಿಂದುಗಳಿಗೆ ಶ್ರೀ ರಾಮ ಆದರ್ಶ. ಶ್ರೀ ರಾಮನ ಭಕ್ತಿ ಸೌಂದರ್ಯ ಅಡಗಿರುವುದು ಹೆಸರಿನಲ್ಲಿ ಮಾತ್ರವಲ್ಲ, ಜೊತೆಗೆ ವ್ಯಕ್ತಿತ್ವದಲ್ಲಿ. ಶ್ರೀ ರಾಮ ಗೆಲುವಿನ ಸಂಕೇತ. ಇಡೀ ವಿಶ್ವದಲ್ಲೇ ಶ್ರೀ ರಾಮನ ಸಂತಸ ಅಲೆ ಕಾಣುತ್ತಿದ್ದೇವೆ. ಇದು ಸಾರ್ಥಕತೆಯ ದಿನ ಎಂದು ಪಾಕಿಸ್ತಾನ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಟ್ವಿಟರ್ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಹಿಂದೂ ಅನ್ನೋ ಕಾರಣಕ್ಕೆ ತುಳಿದರು, ಪ್ರಧಾನಿಗೆ ಮನವಿ ಮಾಡಿದ ಪಾಕ್ ಕ್ರಿಕೆಟಿಗ ಕನೇರಿಯಾ!
ಭಾರತ, ಭಾರತೀಯರು, ಹಿಂದುತ್ವದ ಬಗ್ಗೆ ಅಪಾರ ಗೌರವವಿರುವ ದಾನಿಶ್ ಕನೆರಿಯಾ ಇತ್ತೀಚೆಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ತಿರುಗೇಟು ನೀಡಿದ್ದರು. ಆಫ್ರಿದಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಡಿದ ಮಾತುಗಳನ್ನು ಕನೇರಿಯಾ ಖಂಡಿಸಿದ್ದರು. ಅಫ್ರಿದಿ ಮಾತನಾಡುವ ಮುನ್ನ ಯೋಚಿಸಬೇಕು. ಅಸಂಬದ್ದ ಹೇಳಿಕೆಗಳಿಂದ ಪಾಕಿಸ್ತಾನ ಕ್ರಿಕೆಟ್ಗೆ ಧಕ್ಕೆಯಾಗಲಿದೆ ಎಂದು ಕನೇರಿಯಾ ಹೇಳಿದ್ದರು.
ಪಾಕಿಸ್ತಾನದಲ್ಲಿರುವ ಹಲವು ಹಿಂದೂಗಳು ರಾಮ ಮಂದಿರ ಭೂಮಿ ಪೂಜೆಯನ್ನು ಕೊಂಡಾಡಿದ್ದಾರೆ. ಭಾರತದಲ್ಲಿರುವ ಪಾಕ್ ಹಿಂದೂ ನಿರಾಶ್ರಿತರು ಕೂಡ ಶ್ರೀ ರಾಮ ಮಂದಿರ ಭೂಮಿ ಪೂಜೆಯ ವೇಳೆ ನಾವು ಭಾರತದಲ್ಲಿದ್ದೇವೆ ಅನ್ನೋ ಹೆಮ್ಮೆ ಇದೆ. ನಮ್ಮ ಜನ್ಮ ಸಾರ್ಥಕ ಎಂದು ಸಂತಸ ಹಂಚಿಕೊಂಡಿದ್ದಾರೆ.