ಕಿರುಕುಳ ಕೊಟ್ಟರೂ ಹಿಂದು ಧರ್ಮ ತ್ಯಜಿಸಲು ಮನಸ್ಸಾಗಲಿಲ್ಲ: ದಾನಿಶ್‌| ಧರ್ಮಾಧಾರಿತ ತಾರತಮ್ಯ ಪಾಕಿಸ್ತಾನದ ನಿಜಬಣ್ಣ: ಗಂಭೀರ್‌| ಕನೇರಿಯಾ ಘಟನೆ ಪ್ರಸ್ತಾಪಿಸಿ ಪಾಕ್‌ಗೆ ‘ಗಂಭೀರ್‌’ ತಿವಿತ

"

Add Asianetnews Kannada as a Preferred SourcegooglePreferred

ಕರಾಚಿ[ಡಿ.28]: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಸಹ ಆಟಗಾರರು ಹಿಂದು ಎಂಬ ಕಾರಣಕ್ಕಾಗಿ ತನ್ನ ಜೊತೆ ಕೀಳಾಗಿ ಮತ್ತು ತುಚ್ಛವಾಗಿ ವರ್ತಿಸುತ್ತಿದ್ದರು. ಆದಾಗ್ಯೂ, ಸಹ ತಾನು ಎಂದಿಗೂ ಹಿಂದು ಧರ್ಮದಿಂದ ಮತಾಂತರ ಹೊಂದಬೇಕೆಂದು ಎಂದಿಗೂ ಅಂದುಕೊಳ್ಳಲಿಲ್ಲ ಎಂದು ಪಾಕಿಸ್ತಾನದಿಂದ ನಿಷೇಧಕ್ಕೊಳಗಾಗಿರುವ ಲೆಗ್‌ ಸ್ಪಿನ್ನರ್‌ ದಾನಿಶ್‌ ಕನೇರಿಯಾ ಹೇಳಿದ್ದಾರೆ.

ಈ ಬಗ್ಗೆ ಶುಕ್ರವಾರ ವಾಹಿನಿಯೊಂದರ ಜೊತೆ ಮಾತನಾಡಿದ ಕನೇರಿಯಾ, ನನ್ನ ಹಿಂದೆ ಹಲವರು ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದರು. ಆದರೆ, ಪಾಕಿಸ್ತಾನಕ್ಕೆ ಜಯ ತಂದುಕೊಡಬೇಕೆಂಬ ಆಕಾಂಕ್ಷೆಯಲ್ಲಿ ಆಟವಾಡುತ್ತಿದ್ದೆ. ಇದಕ್ಕಾಗಿ ನಾನು ಇದನ್ನು ಎಂದಿಗೂ ದೊಡ್ಡದು ಮಾಡಲಿಲ್ಲ. ಅಲ್ಲದೆ, ತಾನೋರ್ವ ಹಿಂದು ಮತ್ತು ಪಾಕಿಸ್ತಾನಿ ಎಂಬುದಕ್ಕೆ ನನಗೆ ಹೆಮ್ಮೆಯಿದೆ’ ಎಂದಿದ್ದಾರೆ. ಆದರೆ ಪಾಕ್‌ನ ಆಟಗಾರರು ನನಗೆಂದೂ ಮತಾಂತರಕ್ಕೆ ಒತ್ತಾಯಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಕ್ರಿಕೆಟ್‌ ತಂಡದ ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್‌ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್‌, ‘ಇದು ಪಾಕಿಸ್ತಾನದ ನಿಜಬಣ್ಣ ಹಾಗೂ ನಾಚಿಕೆಗೇಡಿನ ಸಂಗತಿ’ ಎಂದು ಪಾಕಿಸ್ತಾನದ ವಿರುದ್ಧ ಕಿಡಿಕಾರಿದರು. ಭಾರತದಲ್ಲಿ ಅಲ್ಪಸಂಖ್ಯಾತರಾದ ಹೊರತಾಗಿಯೂ, ಅಜರುದ್ದೀನ್‌ ಅವರು ಹಲವು ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ ತಂಡವನ್ನು ಮುನ್ನಡೆಸಿದ್ದರು ಎಂದು ಪಾಕಿಸ್ತಾನವನ್ನು ತಿವಿದರು.