ದಕ್ಷಿಣ ಆಫ್ರಿಕಾ ತಂಡ ಅಹಮದಾಬಾದ್‌ನಲ್ಲಿ ನಡೆದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಉತ್ಸಾಹಿ ಅಫ್ಘಾನಿಸ್ತಾನ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದೆ. 

ಅಹಮದಾಬಾದ್‌ (ನ.10): ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಸ್ಸಿ ವಾನ್‌ ಡರ್‌ ಡುಸೆನ್‌ ಅವರ ಹೋರಾಟದ ಇನ್ನಿಂಗ್ಸ್‌ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಉತ್ಸಾಹಿ ಅಫ್ಘಾನಿಸ್ತಾನ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಹಾಗೂ ಅಫ್ಘಾನಿಸ್ತಾನದ ಬೌಲರ್‌ಗಳ ನಡುವಿನ ಹೋರಾಟ ಸಾಕಷ್ಟು ಕಳೆಕಟ್ಟಿತ್ತು. ಆದರೆ, ಅಫ್ಘಾನಿಸ್ತಾನದ ಅಪಾಯಕಾರಿ ಬೌಲಿಂಗ್‌ ವಿಭಾಗವನ್ನು ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳು ದಿಟ್ಟವಾಗಿ ಎದುರಿಸಿದ್ದರಿಂದ ತಂಡದ ಐದು ವಿಕೆಟ್‌ ಗೆಲುವಿಗೆ ಕಾರಣರಾದರು. ರಸ್ಸಿ ವಾನ್‌ ಡರ್‌ ಡುಸೆನ್‌ ಅಜೇಯ 76 ರನ್‌ ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಇದಕ್ಕಾಗಿ ಅವರು 95 ಎಸೆತ ಆಡಿದರು. ಇದರಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿದ್ದವು. ಅಫ್ಘಾನಿಸ್ತಾನ ತಂಡದ ಪರವಾಗಿ ರಶೀದ್‌ ಖಾನ್‌ ಹಾಗೂ ಆಲ್ರೌಂಡರ್‌ ಮೊಹಮದ್‌ ನಬಿ ತಲಾ ಎರಡು ವಿಕೆಟ್‌ ಸಂಪಾದಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರವಾಗಿ ಅಜ್ಮತುಲ್ಲಾ ಓಮರಜೈ ಹೋರಾಟದ ಅಜೇಯ 97 ರನ್‌ ಸಿಡಿಸಿದರು. ಇದರಿಂದಾಗಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸವಾಲಿನ ಮೊತ್ತ ಪೇರಿಸಲು ತಂಡ ಯಶಸ್ವಿಯಾಗಿತ್ತು.

Add Asianetnews Kannada as a Preferred SourcegooglePreferred

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 50 ಓವರ್‌ಗಳಲ್ಲಿ 244 ರನ್‌ಗೆ ಆಲೌಟ್‌ ಆಯಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 47.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 247 ರನ್‌ ಬಾರಿಸಿ ಗೆಲುವು ಕಂಡಿತು. ಈ ಸೋಲಿನೊಂದಿಗೆ ಅಫ್ಘಾನಿಸ್ತಾನ ತಂಡ ಅಧಿಕೃತವಾಗಿ ವಿಶ್ವಕಪ್‌ನ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿತು. ದಕ್ಷಿಣ ಆಫ್ರಿಕಾ ತಂಡ 9 ಪಂದ್ಯಗಳಲ್ಲಿ 7 ಗೆಲುವು ಹಾಗೂ 2 ಸೋಲುಗಳೊಂದಿಗೆ ಹೆಚ್ಚೂ ಕಡಿಮೆ 2ನೇ ಸ್ಥಾನಿಯಾಗಿ ಸೆಮಿಫೈನಲ್‌ ಹಂತಕ್ಕೇರಲಿದೆ.

ಕ್ರಿಕೆಟ್‌ ವಿಶ್ವಕಪ್‌ಗೂ ದೀಪಾವಳಿ ಟಚ್‌, ಗೇಟ್‌ವೇ ಆಫ್‌ ಇಂಡಿಯಾದಲ್ಲಿ ಬೆಳಕಿನ ಚಿತ್ತಾರ!

ದಕ್ಷಿಣ ಆಫ್ರಿಕಾ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿದ ಗೆರಾಲ್ಡ್‌ ಕೋಯೆಟ್ಜೇ 44 ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿದರೆ, ಕೇಶವ್‌ ಮಹಾರಾಜ್‌ 25 ರನ್‌ ನೀಡಿ 2 ವಿಕೆಟ್‌ ಸಂಪಾದನೆ ಮಾಡಿದರು.

Breaking: ವಿಶ್ವಕಪ್‌ ಆಘಾತದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್‌ಗೆ ಇನ್ನೊಂದು ಆಘಾತ!